ಶಾಸಕ ಪ್ರೀತಂ ಗೌಡ ಕ್ಷಮೆಯಾಚನೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ
ಹಾಸನ, ನವೆಂಬರ್3: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಸನದಲ್ಲಿ ಬಿಜೆಪಿ, ಜೆಡಿಎಸ್ ಜಟಾಪಟಿ ಜೋರಾಗಿದೆ. ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ವಿರುದ್ಧ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಸನದಲ್ಲಿ ಪ್ರತಿಭಟನೆ ನಡೆಸಿದರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ವಿರುದ್ಧ ಶಾಸಕ ಪ್ರೀತಂ ಗೌಡ ಅವಹೇಳನಕಾರಿಯಾದ ಪದ ಬಳಸಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ನಗರದ ಹೇಮಾವತಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿ ಜೆಡಿಎಸ್ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಪ್ರೀತಂ ಗೌಡ ಕ್ಷಮೆಯಾಚಿಸುವಂತೆ ಆಗ್ರಹ
ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್. ದ್ಯಾವೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಶಾಸಕ ಪ್ರೀತಂಗೌಡ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಸ್ವರೂಪ್ ಸೇರಿದಂತೆ ನೂರಾರು ಮಹಿಳೆ ಭಾಗವಹಿಸಿದ್ದರು.
ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹೀಗಾಗಿ ಶಾಸಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಇಲ್ಲವಾದರೆ ನಾಳೆಯೂ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಜೆಡಿಎಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ತಾಯಿ, ಮಗ ಇಬ್ಬರು ನಶೆ ಏರಿಸಿಕೊಂಡಿರುತ್ತಾರೆ
ನವೆಂಬರ್ 1ರಂದು ಶಾಸಕ ಪ್ರೀತಂ ಗೌಡ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಾತನಾಡಿದ್ದರು. "ಭವಾನಿ ಅಕ್ಕ, ಸಂಸದರು ನಶೆಯಲ್ಲಿ ಮಾತನಾಡುತ್ತಿದ್ದಾರೆ. 30, 60 ಅಲ್ಲ ಅವರು ಎರಡು ಬಾಟಲಿ ಎಣ್ಣೆ ಕುಡಿಯುತ್ತಾರೆ. ತಾಯಿ, ಮಗ ಇಬ್ಬರು ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡಿರುತ್ತಾರೆ. ಬೆಳಗ್ಗೆ ಬಂದು ತಾವು ಏನು ಮಾತಾಡುತ್ತೇವೆ ಅಂತಾ ಅವರಿಗೆ ಗೊತ್ತಾಗುವುದಿಲ್ಲ" ಎನ್ನುವ ಹೇಳಿಕೆಯನ್ನು ಪ್ರೀತಂಗೌಡ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ, ಇಂದು ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ
ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಪ್ರೀತಂಗೌಡ, "ನಾನು ಏನಕ್ಕೆ ಐದನೇ ಕ್ಲಾಸ್, ಏಳನೇ ಕ್ಲಾಸ್ ಅಂತಿದ್ದೇನೆ ಎನ್ನುವುದು ಅವರಿಗೆ ಗೊತ್ತಿಲ್ಲದ ವಿಷಯವಾಗಿದೆ. ವಿಚಾರ ಗೊತ್ತಿಲ್ಲದೆ ಮಾತನಾಡುತ್ತಾರೆ. ಹುಟ್ಟುಗುಣ ಸುಟ್ಟರೂ ಹೋಗುವುದಿಲ್ಲ ಎಂದು ಅಜ್ಜಿ ಒಬ್ಬರು ನನ್ನ ಬಳಿ ಹೇಳಿದ್ದರು. ಯಡಿಯೂರು ಗ್ರಾಮಕ್ಕೆ ಹೋದ ವೇಳೆ ವ್ಯಕ್ತಿಯೊಬ್ಭರ ಹೇಳಿದ್ದರು. ಅಣ್ಣಾ ಇಬ್ಬರಿಗೂ ರಾತ್ರಿ ನಶೆ ಜಾಸ್ತಿ ಆಗಿರುತ್ತದೆ. ಬೆಳಗ್ಗೆ ಆದರೂ ನಶೆ ಇಳಿದಿರುವುದಿಲ್ಲ. ಹಾಗಾಗಿ ಏನೆನೋ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದರು.

ಭವಾನಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಲೇವಡಿ
ಇನ್ನು "ರೇವಣ್ಣ ಅವರು ಮಾತನಾಡಿಲ್ಲ, ಅವರು ಬಹಳ ಸಂಸ್ಕಾರ ಹೊಂದಿದವರಾಗಿದ್ದಾರೆ. ದೇವೇಗೌಡರು, ಚನ್ನಮ್ಮ ಅವರಿಗೆ ಸಂಸ್ಕಾರ ಕೊಟ್ಟಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣಗೆ ಸಂಸ್ಕಾರ ಇದೆಯೋ, ಇಲ್ಲವೋ ಗೊತ್ತಿಲ್ಲ. ಸಂಸದರಿಗೆ ಸಂಸ್ಕಾರ ಕಲಿಸಬೇಕಿರುವವರು ತಾಯಿ. ತಾಯಿನೇ ಆ ರೀತಿ ಮಾತನಾಡಿದರೆ ಹೇಗೆ?. ಹೊಳೆನರಸೀಪುರಕ್ಕೆ ಸೊಸೆಯಾಗಿ ಬರುವ ಮುಂಚೆ ಮನೆಯ ಪರಿಸ್ಥಿತಿ ಹೇಗಿತ್ತು ಎಂದು ಅವರ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಮೈಸೂರು ಮಹಾರಾಜರು ಏನಾದರೂ ಸಾಲ ಕೊಟ್ಟು ಅವರಿಗೆ ಆಗರ್ಭ ಶ್ರೀಮಂತರಾಗಿದ್ದರಾ ಭವಾನಿ ಅಕ್ಕ? ಮಾತನಾಡುವ ಶೈಲಿಯನ್ನು ನೋಡಿದರೆ ಅವರು ಆಗರ್ಭ ಶ್ರೀಮಂತರು ಅನಿಸುತ್ತದೆ," ಎಂದು ಭವಾನಿ ರೇವಣ್ಣ ವಿರುದ್ಧ ಪ್ರೀತಂಗೌಡ ವ್ಯಂಗ್ಯವಾಡಿದ್ದರು.












Click it and Unblock the Notifications