ರೇವಣ್ಣ, ಪುಟ್ಟರಾಜುಗೆ ಐಟಿ ಶಾಕ್: ಆಪ್ತರ ಮನೆ ಮೇಲೆ ದಾಳಿ
ಹಾಸನ/ಮಂಡ್ಯ, ಏಪ್ರಿಲ್ 16: ಜೆಡಿಎಸ್ ಮುಖಂಡರಾದ ಎಚ್ ಡಿ ರೇವಣ್ಣ ಮತ್ತು ಸಿ ಎಸ್ ಪುಟ್ಟರಾಜು ಅವರ ಆಪ್ತರ ಮನೆ ಮೇಲೆ ದಾಳಿ ನಡೆಸುವ ಮೂಲಕ ಚುನಾವಣೆಗೂ ಮುನ್ನ ಮತ್ತೊಮ್ಮೆ ಆದಾಯ ತೆರಿಗೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಲೋಕೋಪಯೋಗಿ ಇಲಾಖೆ ಸಚಿವ ಎಚ್ ಡಿ ರೇವಣ್ಣ ಮತ್ತು ಮಂಡ್ಯ ಉಸ್ತುವಾರಿ, ಸಣ್ಣ ನೀರಾವರಿ ಖಾತೆ ಸಚಿವ ಸಿ ಎಸ್ ಪುಟ್ಟರಾಜು ಅವರ ಆಪ್ತರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಪಾಪಣ್ಣಿ ಎಂಬುವವರ ಮನೆ ಮೇಲೆ, ,ಮಂಡ್ಯದ ಸಿಎಸ್ ಪುಟ್ಟರಾಜು ಆಪ್ತ ಜಿಪಂ ಸದಸ್ಯ ತಿಮ್ಮೇಗೌಡ ಜೊತೆಗೆ ಡಿಸಿಸಿ ಬ್ಯಾಂಕ್ ಹೊನ್ನವಳ್ಳಿ ಸತೀಶ್, ರೇವಣ್ಣ ಆಪ್ತ ಕಾರ್ಲೆ ಇಂದ್ರೇಶ್ ಮುಂತಾದವರ ಮನೆ ಮೇಲೆ ಒಟ್ಟು ಎಂಟು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತ ಮಂಡ್ಯದಲ್ಲಿ ಸೋಮನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲೂ ದಾಳಿ ನಡೆದಿದೆ.
ರೇವಣ್ಣ ಮತ್ತು ಪುಟ್ಟರಾಜು ಅವರ ಆಪ್ತರಿಗೆ ಸೇರಿದ ಪೆಟ್ರೋಲ್ ಬಂಕ್, ಸಾ ಮಿಲ್ ಗಳಲ್ಲೂ ದಾಳಿ ನಡೆದಿದೆ.
ಲೋಕಸಭೆ ಚುನಾವಣೆಗೆಂದು ಸಾಕಷ್ಟು ಹಣ ಹಂಚಿಕೆಯಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.
ಇತ್ತೀಚೆಗಷ್ಟೇ ರಾಜ್ಯದಲ್ಲಿ ಹಲವು ಮುಖಂಡರ ಆಪ್ತರ ಮೇಲೆ ದಾಳಿ ನಡೆದಿತ್ತು. ಇದು ಬಿಜೆಪಿಯೇ ಮಾಡುತ್ತಿರುವ ಕುತಂತ್ರ, ಕೇಂದ್ರದ ಬಿಜೆಪಿ ಸರ್ಕಾರ ಆದಾಯ ತೆರಿಗೆ ಅಧಿಕಾರಿಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಸಚಿವ ಡಿಕೆ ಶಿವಕುಮಾರ್ ಮುಂತಾದವರು ಬಹಿರಂಗವಾಗಿಯೇ ಪ್ರತಿಭಟನೆ ನಡೆಸಿದ್ದರು.












Click it and Unblock the Notifications