ದೇವೇಗೌಡರ ಕುಲದೇವರ ದೇವಸ್ಥಾನದ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಟ್ವಿಸ್ಟ್
ಹಾಸನ, ಏ.13: ಜೆಡಿಎಸ್ ಭದ್ರಕೋಟೆ ಮಂಡ್ಯ ನಂತರ ಹಾಸನಕ್ಕೆ ಐಟಿ ಅಧಿಕಾರಿಗಳು ದಾಳಿ ಇಟ್ಟಿದ್ದಾರೆ ಎನ್ನುವ ಸುದ್ದಿ ನಿನ್ನೆ ಹರಿದಾಡಿತ್ತು.
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರ ಕುಲದೇವರಾದ ಹರದನಹಳ್ಳಿ ಈಶ್ವರ ದೇವಾಲಯದ ಮೇಲೆ ಐಟಿ ದಾಳಿ ನಡೆದಿದೆ ಎನ್ನಲಾಗಿತ್ತು. ಆದರೆ ಈ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯಾವ ದೇವಸ್ಥಾನ ಅಥವಾ ಅರ್ಚಕರ ಮನೆಯ ಮೇಲೂ ನಾವು ದಾಳಿ ನಡೆಸಿಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಹಾಸನ ದೇವಾಲಯದ ಅರ್ಚಕರನ್ನೂ ಬಿಡದ ಐಟಿ ಅಧಿಕಾರಿಗಳು
ಈಶ್ವರ ದೇವಾಲಯದ ಅರ್ಚಕ ಪ್ರಕಾಶ್ ಭಟ್ ಅವರ ಮನೆಯ ಮೇಲೆ ದಾಳಿ ನಡೆದಿತ್ತು, ಬಳಿಕ ಏನೂ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ಅಧಿಕಾರಿಗಳು ತೆರಳಿದ್ದಾಗಿ ಅರ್ಚಕರ ಪತ್ನಿ ತಿಳಿಸಿದ್ದರು. ಆದರೆ ದಾಳಿಯೇ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೀಗ ಅರ್ಚಕ ಪ್ರಕಾಶ್ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. ಅಪರಿಚಿತರು ದೇವಾಲಯ, ಮನೆಯನ್ನು ಶೋಧ ಮಾಡಿದ್ದಾರೆ. ಐಟಿ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ ಈಶ್ವರನನ್ನು ಮುಟ್ಟಿದರೆ ಉಳಿಗಾಲವಿಲ್ಲ ಎಂದಿದ್ದರು. ಇದೀಗ ಯಾವ ತೆರಿಗೆ ಇಲಾಖೆ ಅಧಿಕಾರಿಗಳೂ ದಾಳಿ ನಡೆಸಿಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.