ನನ್ನ ಸೋಲಿಗೆ ಸಿದ್ದರಾಮಯ್ಯ ಕಾರಣ; ಬಾಗೂರು ಮಂಜೇಗೌಡ
ಹಾಸನ, ಮೇ 16: ಸರ್ಕಾರ ಯಾರು ರಚಿಸುತ್ತಾರೊ ಬಿಡುತ್ತಾರೊ ಆದರೆ ಕಾಂಗ್ರೆಸ್ಗೆ ಸೋಲಾಗಿರುವುದು ಸ್ಪಷ್ಟ. ಈಗ ಸೋಲಿಗೆ ಯಾರು ಕಾರಣ ಎಂದು ಹುಡುಕುವ ಕಾರ್ಯ ಶುರುವಾಗಿದೆ. ಇಷ್ಟರಲ್ಲೇ ಸ್ಪೀಕರ್ ಕೋಳಿವಾಡ ಅವರು ಸಿದ್ದರಾಮಯ್ಯ ಅವರನ್ನು ದೋಷಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಅವರ ಜೊತೆ ಇನ್ನೊಬ್ಬರು ಸೇರಿಕೊಂಡಿದ್ದಾರೆ.
ಹಾಸನದ ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇಗೌಡ ಅವರು ಕೂಡಾ ನನ್ನ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಹೇಳಿದ್ದಾರೆ.
'ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ, ಅವರಿದ್ದರೆ ಗೆಲುವಿಲ್ಲ'
ಸಿದ್ದರಾಮಯ್ಯ ಅವರು ನನ್ನ ಪರ ಪ್ರಚಾರಕ್ಕೆ ಬಂದಿದ್ದರೆ ನನಗೆ ಗೆಲುವಾಗುತ್ತಿತ್ತು, ಅವರು ಪ್ರಚಾರ ಮಾಡದ ಕಾರಣ ನನಗೆ ಸೋಲಾಗಿದೆ ಎಂದ ಅವರು ಸಿದ್ದರಾಮಯ್ಯ ಅವರ ಮೇಲೆ ಯಾರು ಒತ್ತಡ ಹೇರಿದರೋ ಗೊತ್ತಿಲ್ಲ ಎಂದು ದೂರಿದರು.
ಮಂಜೇಗೌಡ ಅವರನ್ನು ಸರ್ಕಾರಿ ಹುದ್ದೆಗೆ ರಾಜಿನಾಮೆ ಕೊಡಿಸಿ ಸಿದ್ದರಾಮಯ್ಯ ಅವರೇ ಹೊಳೆನರಸೀಪುರದಲ್ಲಿ ಚುನಾವಣೆಗೆ ನಿಲ್ಲಿಸಿದ್ದರು. 'ಗೌಡರ ಮಕ್ಕಳೇ ಎಷ್ಟು ದಿನ ಅಂತ ರಾಜಕೀಯ ಮಾಡೋದು, ನೀನು ಅಲ್ಲಿ ಹೋಗು ತಯಾರಿ ಮಾಡ್ಕೊ' ಎಂದು ಅವರು ಮಂಜೇಗೌಡಗೆ ಹೇಳಿದ್ದ ಫೋನ್ ಕಾಲ್ ಆಡಿಯೋ ಲೀಕ್ ಆಗಿ ವಿವಾದವಾಗಿತ್ತು.
ಮುಂದುವರೆದು ಮಾತನಾಡಿದ ಬಾಗೂರು ಮಂಜೇಗೌಡ, 'ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆದರೆ ಹಾಸನದಲ್ಲಿ ಕಾಂಗ್ರೆಸ್ ಸಮಾಧಿ ಆಗಲಿದೆ ಎಂದ ಅವರು, ಹಾಸನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೊಲೆಗಳಾಗಲಿವೆ' ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಕಾಂಗ್ರೆಸ್ ಗೆದ್ದವರ ಪಟ್ಟಿ
ತಮ್ಮ ವಿರುದ್ಧ ಗೆದ್ದ ಅಭ್ಯರ್ಥಿಯ ಬಗ್ಗೆ ಮಾತನಾಡಿದ ಅವರು, ಭಾವನಾತ್ಮಕ ವಿಷಯದಲ್ಲಿ ರೇವಣ್ಣ ಅವರಿಗೆ ಗೆಲುವಾಗಿದೆ. ಗ್ರಾಮಗಳಿಗೆ ದೇವಾಲಯಕ್ಕೆಂದು ಹಣ ನೀಡಿದ್ದರು, 270 ಗ್ರಾಮಗಳಲ್ಲಿ ದೇವಾಲಯ ಅಪೂರ್ಣ ವಾಗಿರುವುದರಿಂದ ಸೋತರೆ ಹಣ ನೀಡರೇನೊ ಎಂದು ಜನ ಅವರಿಗೆ ಓಟ್ ಹಾಕಿದ್ದಾರೆ ಎಂದರು.
ಜೆಡಿಎಸ್ನ ಪ್ರಮುಖ ನಾಯಕ ಎಚ್.ಡಿ.ರೇವಣ್ಣ ಅವರು ಹೊಳೆನರಸಿಪುರ ಕ್ಷೇತ್ರದಲ್ಲಿ ಭಾರಿ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.