ನನ್ನ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ : ಕುಮಾರಸ್ವಾಮಿ
ಹಾಸನ, ಮೇ 21 : 'ನನ್ನ ನಿದ್ದೆಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ. ಬಿ.ಶ್ರೀರಾಮುಲು ಅಂತವರಿಂದ ಸಾಧ್ಯವೇ ಇಲ್ಲ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿ ನಾಯಕರು ನಿದ್ದೆಗೆಡಲಿದ್ದಾರೆ' ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ಹಾಸನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, 'ಯಾವುದೇ ರೀತಿಯಲ್ಲಿ ಬಿಜೆಪಿಯವರು ನಮ್ಮ ನಿದ್ದೆಗೆಡಿಸಲು ಸಾಧ್ಯವಿಲ್ಲ. ನನ್ನ, ಕಾಂಗ್ರೆಸ್ ನಾಯಕರ ನಿದ್ದೆ ಗೆಡಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದರು.
'ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮಿಶ್ರ ಸರ್ಕಾರ ಮುಂದುವರೆಯಲಿದೆ. ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ತೆಗೆದುಕೊಂಡು 5 ವರ್ಷ ರಾಜ್ಯದಲ್ಲಿ ಸರ್ಕಾರವನ್ನು ಸುಭದ್ರವಾಗಿ ನಡೆಸಲಾಗುತ್ತದೆ' ಎಂದು ತಿಳಿಸಿದರು.

'ಒಂದು ಬಾರಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಜನರ ವಿಶ್ವಾಸ ಪಡೆದು ಮುಖ್ಯಮಂತ್ರಿಯಾಗಿದ್ದೇನೆ. ಈ ಬಾರಿಯೂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸವಾಲು ನನ್ನ ಮುಂದಿದೆ' ಎಂದರು.
ಶ್ರೀರಾಮುಲು ಹೇಳಿದ್ದೇನು? : ಬಳ್ಳಾರಿಯಲ್ಲಿ ಭಾನುವಾರ ಮಾತನಾಡಿದ್ದ ಬಿ.ಶ್ರೀರಾಮುಲು ಅವರು, 'ಬಿಜೆಪಿಯನ್ನು ಸೋಲಿಸಿದ್ದೇವೆ ಎಂದು ಕಾಂಗ್ರೆಸ್, ಜೆಡಿಎಸ್ ಅಂದುಕೊಳ್ಳುವುದು ಬೇಡ. ನಾವು ಅವರಿಗೆ ನಿದ್ದೆ ಮಾಡುವುದಕ್ಕೆ ಬಿಡುವುದಿಲ್ಲ. ದಿನದ 24 ಗಂಟೆಯೂ ಅವರನ್ನು ಕಾಯುತ್ತೇವೆ' ಎಂದರು ಹೇಳಿದ್ದರು.
'ಕಾಂಗ್ರೆಸ್ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಬೇಷರತ್ ಬೆಂಬಲ ನೀಡಿದ್ದಾರೆ. ಅವರ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ. ಅವರ ಅನಾಚಾರ, ಭ್ರಷ್ಟಾಚಾರವನ್ನು ಜನರ ಮುಂದಿಡುತ್ತೇವೆ. ದಿನದ 24 ತಾಸು ಅವರು ನಿದ್ದೆ ಮಾಡದಂತೆ ಕಾಯುತ್ತೇವೆ' ಎಂದು ತಿಳಿಸಿದ್ದರು.












Click it and Unblock the Notifications