ಡ್ರಗ್ಸ್: ಬಿಎಸ್ವೈ ಸರಕಾರದ ವಿರುದ್ದ ಡಿ.ಕೆ.ಸುರೇಶ್ ಸಿಡಿಸಿದ ಬಾಂಬ್
ಹಾಸನ, ಸೆ 9: "ಯಾವುದೋ ಕಾಟಾಚಾರಕ್ಕೆ ಯಡಿಯೂರಪ್ಪ ಸರಕಾರ ಡ್ರಗ್ಸ್ ಕೇಸಿನ ತನಿಖೆಯನ್ನು ನಡೆಸುತ್ತಿದೆ. ಡ್ರಗ್ಸ್ ಸಪ್ಲೈ ಮಾಡುವವರನ್ನು ಬಂಧಿಸುವುದು ಬಿಟ್ಟು, ನಟಿಯರನ್ನು ಬಂಧಿಸುತ್ತಿದ್ದಾರೆ"ಎಂದು ಬೆಂಗಳೂರು ಗ್ರಾಮಾಂತರ ಶಾಸಕ ಡಿ.ಕೆ.ಸುರೇಶ್ ಹೇಳಿದ್ದಾರೆ.
"ಈ ಡ್ರಗ್ಸ್ ಮಾಫಿಯಾದಲ್ಲಿ ದೊಡ್ಡದೊಡ್ಡ ಅಧಿಕಾರಿಗಳು, ಅವರ ಮಕ್ಕಳು, ಪ್ರಭಾವಿಗಳು ಇದ್ದಾರೆ. ಇವರನ್ನೆಲ್ಲಾ ಹೆದರಿಸಿ ಪೊಲೀಸ್ ನವರು ಹಣ ಮಾಡಲು ಹೊರಟಿದ್ದಾರೆ"ಎಂದು ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
"ಈಗ ಇಬ್ಬರು ನಟಿಯರ ಬಂಧನವಾಗಿದೆ. ಅವರೇನಾದರೂ ಬಾಯಿ ಬಿಟ್ಟರೆ, ಯಡಿಯೂರಪ್ಪನವರ ಸರಕಾರ ಪತನವಾದರೂ ಆಶ್ಚರ್ಯ ಪಡಬೇಕಾಗಿಲ್ಲ"ಎನ್ನುವ ಹೊಸ ಬಾಂಬ್ ಅನ್ನು ಸುರೇಶ್ ಸಿಡಿಸಿದ್ದಾರೆ.

"ಯಾರದ್ದೋ ಮಾತನ್ನು ಇಟ್ಟುಕೊಂಡು ಬಿಜೆಪಿ ತನಿಖೆ ಆರಂಭಿಸಿದೆ. ಡ್ರಗ್ಸ್ ಸಪ್ಲೈ ಆಗುವ ಮೂಲವನ್ನು ಮೊದಲು ಮುಚ್ಚಬೇಕಿದೆ. ಅದು ಬಿಟ್ಟು, ಸರಕಾರ ನಡೆಸುತ್ತಿರುವ ತನಿಖೆಯ ವೈಖರಿಯೇ ಸರಿಯಿಲ್ಲ"ಎಂದು ಸುರೇಶ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
"ಡ್ರಗ್ಸ್ ದಂಧೆ ಪ್ರಕರಣ ದೇಶಾದ್ಯಂತ ಹರಡಿಕೊಂಡಿರುವ ದೊಡ್ಡ ಜಾಲವಾಗಿದ್ದು, ಬಿಜೆಪಿಯವರು ಇದರ ಲಾಭ ಪಡೆಯಲು ಹೋಗಿ, ಅವರೇ ಡ್ರಗ್ಸ್ ಉರುಳಿನ ಬಲೆಯಲ್ಲಿ ಸಿಲುಕಿದ್ದಾರೆ"ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಮೈಸೂರಿನಲ್ಲಿ ಹೇಳಿದ್ದರು.
"ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಡ್ರಗ್ಸ್ ಪ್ರಕರಣವನ್ನು ಹಿಡಿದುಕೊಂಡಿತು. ಆದರೆ ಈಗ ಅವರೇ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಡ್ರಗ್ಸ್ ದಂಧೆ ತನಿಖೆಯು ಹೈಕೋರ್ಟ್ ಅಧೀನದಲ್ಲಿ ತನಿಖೆ ನಡೆಯಬೇಕು" ಕೆಪಿಸಿಸಿ ವಕ್ತಾರರು ಆಗ್ರಹಿಸಿದ್ದರು












Click it and Unblock the Notifications