ಹಾಸನ: 906 ವರ್ಷಗಳ ಐತಿಹ್ಯದ ದೇವಿ ವಿಗ್ರಹ ಕೆಡವಿದ ದುಷ್ಕರ್ಮಿಗಳು
ಹಾಸನ, ನವೆಂಬರ್ 20: ಜಿಲ್ಲೆಯ ಇತಿಹಾಸ ಪ್ರಸಿದ್ಧ ಚತುಷ್ಕೂಟ ಮಹಾಲಕ್ಷ್ಮಿ ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು ದೇವಿಯ ವಿಗ್ರಹವನ್ನು ಒಡೆದು ಹಾಕಿ ಭಗ್ನಗೊಳಿಸಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಹೊಯ್ಸಳರ ವಿಷ್ಣುವರ್ಧನನ ಕಾಲದಲ್ಲಿ ವಜ್ರದ ವ್ಯಾಪಾರಿಗಳಿಂದ ಕಟ್ಟಿದ ಐತಿಹ್ಯ ಹೊಂದಿರುವ ಹಾಸನ ಜಿಲ್ಲೆಯ ದೊಡ್ಡಗದ್ದವಳ್ಳಿ ಗ್ರಾಮದ ಚತುಷ್ಕೂಟ ಮಹಾಲಕ್ಷ್ಮಿ ದೇವಾಲಯದ ಗರ್ಭಗೃಹದಲ್ಲಿದ್ದ ಮಹಾಕಾಳಿ ದೇವಿಯ ವಿಗ್ರಹವನ್ನು ಒಡೆದು ಹಾಕಲಾಗಿದೆ. ಶುಕ್ರವಾರ ಮುಂಜಾನೆ ದೇವಸ್ಥಾನಕ್ಕೆ ಅರ್ಚಕರು ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.
ವಿಗ್ರಹವನ್ನು ಮೂಲಸ್ಥಾನದಿಂದ ತೆಗೆದು ಒಡೆದು ಹಾಕಲಾಗಿದೆ. ಕಳ್ಳತನ ಮಾಡಲು ಬಂದವರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಕಾಳಿಯ ಈ ವಿಗ್ರಹಕ್ಕೆ 906 ವರ್ಷಗಳ ಇತಿಹಾಸವಿದೆ. ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ದೇಗುಲ ಒಳಪಟ್ಟಿದೆ. ಈ ವಿಗ್ರಹಕ್ಕೂ ಕೊಲ್ಲಾಪುರದ ಮಹಾಲಕ್ಷ್ಮಿ ವಿಗ್ರಹಕ್ಕೂ ಸಾಮ್ಯತೆ ಇದೆ ಎನ್ನಲಾಗಿದೆ. ಇದೀಗ ವಿಗ್ರಹವನ್ನು ಹೀಗೆ ಭಗ್ನಗೊಳಿಸಿರುವುದು ಗ್ರಾಮಸ್ಥರಲ್ಲಿ ಆತಂಕ ತಂದಿದೆ.
ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ಅಪರೂಪವಾಗಿದ್ದ ಭದ್ರಕಾಳಿಯ ವಿಗ್ರಹವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ರಕ್ಷಿಸಬೇಕಿತ್ತು. ಈ ಕೃತ್ಯದಿಂದ ಇತಿಹಾಸದ ಕುರುಹು ನಶಿಸಿದಂತಾಯಿತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications