Heart Attack: ಹಾಸನದಲ್ಲಿ ಹೃದಯಾಘಾತದಿಂದ ಆರನೇ ತರಗತಿ ಬಾಲಕ ಸಾವು
ಹಾಸನ, ಸೆಪ್ಟೆಂಬರ್ 21: ಆರನೇ ತರಗತಿ ಓದುತ್ತಿದ್ದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಚನ್ನಾಪುರ ಗ್ರಾಮದ ಕಾವ್ಯಶ್ರೀ ಎನ್ನುವವರ ಮಗ ಸಚಿನ್ (11) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ.
ಸಚಿನ್ ಆಲೂರು ಹೋಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ. ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಸಚಿನ್ಗೆ ಎದೆನೋವು ಕಾಣಿಸಿಕೊಂಡಿದೆ. ಹೀಗಾಗಿ ತಾಯಿ ಕಾವ್ಯಶ್ರೀಗೆ ಹೇಳಿ ಶಾಲೆಗೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದ. ಮನೆಯಲ್ಲಿ ಟಿವಿ ನೋಡುತ್ತಾ ಮಗಲಗಿದ್ದ ಸಚಿನ್ಗೆ ಮತ್ತೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ.

ಇದೇ ಎದೆನೋವು ಹೆಚ್ಚಾಗಿದ್ದು, ಹೃದಯಾಘಾತದಿಂದ 11 ವರ್ಷದ ಸಚಿನ್ ಮಲಗಿದಲ್ಲೇ ಕೊನೆಯುಸಿರೆದಿದ್ದಾನೆ. ಮನೆಯಲ್ಲಿದ್ದರು ಮೊದಲು ಮಲಗಿ ಟಿವಿ ನೋಡುತ್ತಿದ್ದಾನೆ ಎಂದುಕೊಂಡು ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಸ್ವಲ್ಪ ಸಮಯದ ನಂತರ ಸಚಿನ್ನನ್ನು ಮಾತನಾಡಿಸಲು ಬಂದ ಪೋಷಕರು ಮಾತನಾಡದೇ ಇರುವುದನ್ನು ಗಮನಿಸಿ ತಕ್ಷಣವೇ ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢವಾಗಿದ್ದು, ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿಕ್ಕವಯಸ್ಸಿನಲ್ಲೇ ಬಾಲಕ ಹೃದಯಾಘಾತಕ್ಕೆ ಬಲಿಯಾಗಿರುವುದು ಕಂಡು ಸಾರ್ವಜನಿಕ ವಲಯದಲ್ಲಿ ಆತಂಕ ಮನೆ ಮಾಡಿದೆ.












Click it and Unblock the Notifications