ಅಸ್ಸಾಂ: ಸೈನಿಕರನ್ನು ಅವಮಾನಿಸಿದ ಮಹಿಳಾ ಪ್ರೊಫೆಸರ್ ಬಂಧನ
ಗುವಾಹಟಿ, ಫೆಬ್ರವರಿ 18: ಪುಲ್ವಾಮಾ ಭಯೋತ್ಪಾದನಾ ದಾಳಿಯ ಬಳಿಕ ಭಾರತೀಯ ಸೇನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಅಸ್ಸಾಂನ ಕಾಲೇಜೊಂದರ ಮಹಿಳಾ ಪ್ರೊಫೆಸರ್ರನ್ನು ಬಂಧಿಸಲಾಗಿದೆ.
ಗುವಾಹಟಿಯ ಐಕಾನ್ ಕಾಮರ್ಸ್ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರೊಫೆಸರ್ ಪಾಪ್ರಿ ಬ್ಯಾನರ್ಜಿ ಪುಲ್ವಾಮಾ ದಾಳಿಯ ಬಳಿಕ ಜಾಲತಾಣದಲ್ಲಿ ಸೇನೆಯ ಕುರಿತು ಅವಹೇಳನಾಕಾರಿ ಬರಹ ಬರೆದಿದ್ದರು.
'45 ಧೈರ್ಯಶಾಲಿ ಯುವಕರು ನಿನ್ನೆ ಬಲಿಯಾಗಿದ್ದಾರೆ. ಇದು ಯುದ್ಧವಲ್ಲ. ಅವರಿಗೆ ಮರಳಿ ಹೋರಾಟ ಮಾಡಲು ಅವಕಾಶವೇ ದೊರಕಲಿಲ್ಲ. ಇದು ವಿಪರೀತ ಹೇಡಿತನದ ಸ್ಥಿತಿ. ಇದು ಯಾವುದೇ ಭಾರತೀಯನ ಹೃದಯಕ್ಕೆ ಗಾಸಿ ಉಂಟುಮಾಡುತ್ತದೆ. ಆದರೆ, ಆದರೆ, ಆದರೆ ಕಣಿವೆಯಲ್ಲಿ ಭದ್ರತಾ ಪಡೆಗಳು ಏನನ್ನು ಮಾಡಿಲ್ಲ! ಅವರ ಮಹಿಳೆಯರನ್ನು ಅತ್ಯಾಚಾರ ಮಾಡಿದ್ದೀರಿ, ಅವರ ಮಕ್ಕಳನ್ನು ಕತ್ತರಿಸಿ ಕೊಂದು ಹಾಕಿದ್ದೀರಿ. ಅವರ ಪುರುಷರನ್ನು ತುಂಡು ಮಾಡಿದ್ದೀರಿ. ಮಾಧ್ಯಮಗಳು ಅವರನ್ನು ನಿರಂತರವಾಗಿ ಕೆಟ್ಟದಾಗಿ ಬಿಂಬಿಸಿವೆ. ಮತ್ತು ನೀವು ಪ್ರತೀಕಾರ ನಿರೀಕ್ಷಿಸುವುದಿಲ್ಲವೇ? ನಿಮಗೆ ಗೊತ್ತೇ? ಭಯೋತ್ಪಾದನೆ ಇಸ್ಲಾಮಿಕ್ ಇರಬಹುದು. ಆದರೆ, ಕರ್ಮ ಎನ್ನುವುದು ಸಂಪೂರ್ಣ ಭಾರತೀಯ, ಪರಿಪೂರ್ಣ ಸನಾತನ ಧರ್ಮದ ಪರಿಕಲ್ಪನೆ. ಹೋಗಿ ಅದನ್ನು ಸವಿಯಿರಿ' ಎಂದು ಪಾಪ್ರಿ ಬ್ಯಾನರ್ಜಿ ಫೇಸ್ಬುಕ್ ಪುಟದಲ್ಲಿ ಬರೆದಿದ್ದರು.

ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದಲ್ಲದೆ, ಜನರ ಆಕ್ರೋಶಕ್ಕೆ ಗುರಿಯಾಗಿತ್ತು. ಅಸ್ಸಾಂ ಪೊಲೀಸರು ಗುವಾಹಟಿಯ ಚಂದಮರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದ್ದಾರೆ.
ಈ ಪೋಸ್ಟ್ ವೈರಲ್ ಆಗಿ, ಜನರ ಕೆಂಗಣ್ಣಿಗೆ ತುತ್ತಾಗುತ್ತಿದ್ದಂತೆಯೇ ಐಕಾನ್ ಕಾಮರ್ಸ್ ಕಾಲೇಜ್, ಪಾಪ್ರಿ ಅವರನ್ನು ಅಮಾನತು ಮಾಡಿದೆ.
ಪುಲ್ವಾಮಾ ದಾಳಿಯ ಬಳಿಕ ಸೇನೆ ಮತ್ತು ಸರ್ಕಾರವನ್ನು ಲೇವಡಿ ಮಾಡುವ ಅನೇಕ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಂಬಂಧ ಅನೇಕರ ವಿರುದ್ಧ ಪ್ರಕರಣ ದಾಖಲಾಗಿವೆ.












Click it and Unblock the Notifications