ಪಂಚಮಸಾಲಿ ಪೀಠ ಏಕೆ ಬೇಕಿತ್ತು: ವಚನಾನಂದ ಸ್ವಾಮೀಜಿ ಆಕ್ರೋಶ
ಗದಗ ನವೆಂಬರ್12: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ನಡೆದ ಭಕ್ತರ ಸಭೆಯಲ್ಲಿ ಪಂಚಪೀಠಾಧಿಪತಿಗಳ ವಿರುದ್ಧ ವಚನಾನಂದ ಸ್ವಾಮೀಜಿ ಆಕ್ರೋಶ ಹೊರ ಹಾಕಿದ್ದಾರೆ. ಪಂಚಪೀಠಾಧಿಗಳ ವಿರುದ್ಧ ಆಕ್ರೋಶ ಹೊರಹಾಕಿರುವ ವಿಡಿಯೋ ವೈರಲ್ ಆಗಿದೆ.
ನಾಡಿನಲ್ಲಿ ಮೂರರಿಂದ ನಾಲ್ಕು ಸಾವಿರ ಮಠಗಳು ಇದ್ದವು. ಎಲ್ಲ ಮಠಗಳ ಶ್ರೀಗಳು ಇದ್ದರು. ಅವರಿಗೆ ದವಸ ಧಾನ್ಯ ನೀಡುತ್ತಿದ್ದೇವು. ಪಂಚಪೀಠಗಳ ಸ್ವಾಮೀಜಿಗಳನ್ನು ಪಲ್ಲಕ್ಕಿ ಮೆರವಣಿಗೆ ಮಾಡಿದ್ದೇವೆ. ಆ ಮಠಗಳು ಕಟ್ಟಿರುವ ಶಿಕ್ಷಣ ಸಂಸ್ಥೆಗಳಿಗೆ ದಾನ ಧರ್ಮ ಮಾಡಿದ್ದೇವೆ. ಅಷ್ಟೇ ಅಲ್ಲದೇ ಅವರೇ ನಮ್ಮ ಗುರುಗಳು ಎಂದು ತಿಳಿದುಕೊಂಡಿದ್ದೆವು. ಅಂದ ಮೇಲೆ ಮತ್ತೇಕೆ ಪಂಚಮಸಾಲಿ ಪೀಠ ಮಾಡಬೇಕಿತ್ತು. ಯಾವ ಅವಶ್ಯಕತೆ ಇತ್ತು. ಯಾಕೆ ಪಂಚಮಸಾಲಿ ಜಗದ್ಗುರು ಪೀಠ ಆಯ್ತು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀಗಳು ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
2003ರಲ್ಲಿ ವಾಜಪೇಯಿ ಪ್ರಧಾನಿ ಆಗಿದ್ದರು. ಅಡ್ವಾನಿ ಉಪಪ್ರಧಾನಿ ಆಗಿದ್ದರು. ಅಂದು ಐದು ಜನ ಜಗದ್ಗುರುಗಳು ಅವರನ್ನು ಭೇಟಿಯಾಗಿ ಒಂದು ಮನವಿ ಮಾಡಿದ್ದರು. ನಾವು ಬೇಡ ಜಂಗಮರು ಬೇಡಿಕೊಂಡು ತಿನ್ನುವರು. ನಮಗೆ ಎಸ್ಸಿ ಸರ್ಟಿಫಿಕೇಟ್ ಕೊಡಿ ಎಂದು ಕೇಳಿದ್ದರು. ಅದು ಪತ್ರಿಕೆಗಳಲ್ಲಿ ಬಂತು. ಅಂದು ಪಂಚಮಸಾಲಿ ಮುಖಂಡರು ಯೋಚನೆ ಮಾಡಿದ್ದು. ನೀವು ಯಾವ ಆಧಾರದ ಮೇಲೆ ಎಸ್ಸಿ ಸರ್ಟಿಫಿಕೆಟ್ ಕೇಳ್ತೀರಾ..? ನಿಮಗೆ ನಡೆದುಕೊಳ್ಳುವ ಭಕ್ತರು ನಾವು ಇದ್ದೇವೆ. ನಿಮಗೆ ಗುರುಗಳು ಅಂತ ಎತ್ತರದ ಮೇಲೆ ಕೂಡಿಸಿಕೊಂಡು ಪೂಜೆ ಪುನಸ್ಕಾರ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತೇವೆ. ಇಂಥವರು ಹೇಗೆ ಎಸ್ಸಿ ಆಗುತ್ತೀರ ಎಂದು ಕೇಳಿದ್ದರು.

ದಾನಧರ್ಮ ಮಾಡೋರು ನಾವು ಭಕ್ತರು ಪಂಚಮಸಾಲಿಗಳು. ನಿಮ್ಮ ಮಠಕ್ಕೆ ಅಕ್ಕಿ, ಜೋಳ ಮನೆಯಲ್ಲಿ ಪ್ರತಿನಿತ್ಯ ಮೊದಲ ರೊಟ್ಟಿ ಮಠಕ್ಕೆ ಇಟ್ಟವರು ನಾವು. ನಿಮ್ಮ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಜಮೀನುಗಳು ದಾನ ಮಾಡಿದವರು ನಾವು. ನೀವು ನಿಮ್ಮ ಜಾತಿಗಾಗಿ ಕೇಳಿದ್ದೀರಿ. ಆದರೆ, ಪಂಚಮಸಾಲಿ ಸಮುದಾಯಕ್ಕೆ ಭಕ್ತರಿಗಾಗಿ ಏನೂ ಕೇಳಿಲ್ಲ ವಚನಾನಂದ ಶ್ರೀಗಳು ವಾಗ್ದಾಳಿ ನಡೆಸಿದ್ದಾರೆ.












Click it and Unblock the Notifications