Lakkundi Utsava 2023: ಫೆಬ್ರವರಿ 10ರಿಂದ ಲಕ್ಕುಂಡಿ ಉತ್ಸವ, ಕಾರ್ಯಕ್ರಮದ ವಿವರ ಇಲ್ಲಿದೆ
ಗದಗ, ಫೆಬ್ರವರಿ, 02: ಫೆಬ್ರವರಿ 10 ರಿಂದ 12ರವರೆಗೆ ಮೂರು ದಿನಗಳ ಕಾಲ ಜರುಗಲಿರುವ ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಯಶಸ್ವಿಗೊಳಿಸಬೇಕೆಂದು ಲೋಕೊಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಲಕ್ಕುಂಡಿಯಲ್ಲಿ ಹೇಳಿದರು.
ಲಕ್ಕುಂಡಿಯ ಅನ್ನದಾನೀಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಲಕ್ಕುಂಡಿ ಉತ್ಸವದ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಹಾಗೆಯೇ ಪ್ರೋಮೋ ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಲಕ್ಕುಂಡಿ ಉತ್ಸವದ ಯಶಸ್ವಿಗೆ ರಚಿಸಲಾದ ವಿವಿಧ ಸಮಿತಿಗಳ ಸಭೆಗಳನ್ನು ಜರುಗಿಸಿ ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜನೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಶೆಟ್ಟೆಕೆರೆಯಲ್ಲಿ ಅಪರೂಪದ ನೀರು ನಾಯಿ ಪ್ರತ್ಯಕ್ಷ, ಹರಿದು ಬಂದ ಜನರ ದಂಡು
ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಸಮಯ ಹೊಂದಾಣಿಕೆ ಮಾಡಲಾಗಿದೆ. ಖ್ಯಾತ ಕಲಾವಿದರು, ಸಾಹಿತ್ಯಕಾರರಿಗೂ ಆದ್ಯತೆ ನೀಡಲಾಗಿದೆ. ಫೆಬ್ರವರಿ 10ರಂದು ಮಧ್ಯಾಹ್ನ ಜರುಗಲಿರುವ ಮೆರವಣಿಗೆಗೆ ಹೆಚ್ಚಿನ ಮೆರಗು ನೀಡುವ ಉದ್ದೇಶದಿಂದ ಸ್ಥಳೀಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾತಂಡಗಳನ್ನು ಕರೆತರಲಾಗುತ್ತಿದೆ. ಉತ್ಸವದ ಉದ್ಘಾಟನಾ ಕಾರ್ಯಕ್ರಮದ ನಂತರ ರಂಗಾಯಣ ಕಲಾವಿದರಿಂದ ವೀರ ರಾಣಿ ಕಿತ್ತೂರ ರಾಣಿ ಚನ್ನಮ್ಮ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಉತ್ಸವಕ್ಕೆ ಜನರ ಸಹಕಾರ ಅಗತ್ಯವಾಗಿದೆ
ಕಾರ್ಯಕ್ರಮವನ್ನು ಹಸರೀಕರಣದ ಮಹತ್ವಾಕಾಂಕ್ಷೆಯೊಂದಿಗೆ ಸಸಿ ನೆಡುವ ಮೂಲಕ ಉದ್ಘಾಟಿಸಲಾಗುವದು. ಉತ್ಸವದ ಯಶಸ್ವಿಗಾಗಿ ಎಲ್ಲರ ಸಹಕಾರ ಅಗತ್ಯವಾಗಿದ್ದು, ಲಕ್ಕುಂಡಿಯ ವೈಭವವನ್ನು ನಾಡಿನಾದ್ಯಂತ ಪಸರಿಸಲು ಎಲ್ಲರ ಪಾಲ್ಗೊಳ್ಳುವಿಕೆ ಹಾಗೂ ಸಹಕಾರ ಅಗತ್ಯವಾಗಿದೆ. ಉತ್ಸವಕ್ಕೆ ಆಗಮಿಸುವ ಎಲ್ಲರಿಗೂ ಮೂರು ದಿನಗಳ ಕಾಲ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದರು.
ಗ್ರಾಮದ ಸೌಂದರ್ಯ ಹೆಚ್ಚಿಸಲು ಮನವಿ
ಉತ್ಸವದ ಸಾಂಸ್ಕೃತಿ ಕಾರ್ಯಕ್ರಮಗಳಿಗಾಗಿ ರಾಷ್ಟ್ರ ಮಟ್ಟದ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. ಉತ್ಸವದ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ರಂಗೋಲಿ ಹಾಗೂ ಬಾಳೆ ಕಂಬಗಳನ್ನು ಕಟ್ಟುವ ಮೂಲಕ ಗ್ರಾಮದ ಸೌಂದರ್ಯವನ್ನು ಹೆಚ್ಚಿಸಬೇಕು. ಸದರಿ ಉತ್ಸವವನ್ನು ಪಕ್ಷಾತೀತವಾಗಿ ಆಚರಿಸಲಾಗುತ್ತಿದ್ದು, ಉತ್ಸವದಲ್ಲಿ ಸರ್ವರೂ ಭಾಗಿಯಾಗುವಂತೆ ಸಚಿವ ಸಿ.ಸಿ.ಪಾಟೀಲ್ ಮನವಿ ಮಾಡಿದರು.
ಜನರನ್ನು ರಂಜಿಸಲಿರುವ ಗಾಯಕರು
ಫೆಬ್ರವರಿ 11ರಂದು ಜಿಲ್ಲೆಯ ಹಾಗೂ ರಾಜ್ಯದ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಖ್ಯಾತ ಗಾಯಕಿ ಅನನ್ಯ ಭಟ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಫೆಬ್ರವರಿ 12 ರಂದು ಸಾಯಂಕಾಲ ಸಮಾರೋಪ ಸಮಾರಂಭ ನಡೆಯಲಿದ್ದು, ನಂತರ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಕೊನೆಯಲ್ಲಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಅವರು ಸಂಗೀತ ರಸದೌತಣ ನೀಡಲಿದ್ದಾರೆ. ಈ ನಡುವೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ ಎಂದರು.
ಈ ಸಂದರ್ಭದಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷ ಸಿದ್ದು ಮುಳಗುಂದ, ಗ್ರಾಮ ಪಂಚಾಯತ್ ಸದಸ್ಯರು, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್, ಜಿಪಂಚಾಯತ್ ಸಿ.ಇ.ಓ ಡಾ.ಸುಶೀಲಾ ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡರ, ಡಿ.ಎಫ್.ಓ ದೀಪಿಕಾ ಬಾಜಪೇಯಿ, ಉಪ ವಿಭಾಗಾಧಿಕಾರಿ ಅನ್ನಪೂರ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ವಿವಿಧ ಸಮಿತಿಗಳ ಸದಸ್ಯರುಗಳು ಹಾಜರಿದ್ದರು.
ಸ್ಥಳ ಪರೀಶಿಲನೆ ಮಾಡಿದ ಸಿ.ಸಿ.ಪಾಟೀಲ
ಹಾಗೆಯೇ ಲೋಕೊಪಯೋಗಿ ಇಲಾಖೆ ಸಚಿವರಾದ ಸಿ.ಸಿ.ಪಾಟೀಲ ಅವರು ಲಕ್ಕುಂಡಿ ಉತ್ಸವದ ವೇದಿಕೆಯ ಸ್ಥಳವನ್ನು ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ಉತ್ಸವದಲ್ಲಿ ಲಕ್ಕುಂಡಿಯ ಇತಿಹಾಸ, ಪರಂಪರೆ, ಐತಿಹಾಸಿಕವಾಗಿಸುವದು ನಮ್ಮ ಉದ್ದೇಶವಾಗಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಕಲಾವಿದರಿಗೆ ಗ್ರಾಮಸ್ಥರು, ಆಯೋಜಕರು ಸೂಕ್ತ ಸಹಕಾರ ಕಲ್ಪಿಸಬೇಕು ಎಂದು ಮನವಿ ಮಾಡಿದರು.