ಒಳ ಮೀಸಲಾತಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಬಂಜಾರ ಮಠಾಧೀಶರ ವಿರುದ್ಧ ಪ್ರಕರಣ
ಗದಗ, ಏಪ್ರಿಲ್. 15: ರಾಜ್ಯದಲ್ಲಿ ಒಳ ಮಿಸಲಾತಿ ಕಿಚ್ಚು ಇನ್ನು ತಣ್ಣಗಾಗುವಂತೆ ಕಾಣುತ್ತಿಲ್ಲ. ಬಂಜಾರ ಸಮುದಾಯ ಇನ್ನು ಶಾಂತಿವಾಗಿಲ್ಲ. ಇದರ ಬೆನ್ನಲ್ಲೆ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬಂಜಾರ ಸಮುದಾಯದ ಮಠಾಧೀಶರ ಮೇಲೆ ಗದಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ವರದಿಯಾಗಿದೆ.
ಗದಗದ ಲಕ್ಷ್ಮೇಶ್ವರ ತಾಲೂಕಿನ ಅದ್ರಳ್ಳಿಯ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ ವಿರುದ್ಧ ಗದಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಂಜಾರ ಸಮುದಾಯದ ಮುಖಂಡರು ಮತ್ತು ಜನರೊಂದಿಗೆ ಸಭೆ ನಡೆಸಿದ ಮಠಾಧೀಶರು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದಿದ್ದರು.

ರಾಜ್ಯದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಜಾರಿಗೆ ತಂದಿರುವ ಒಳ ಮೀಸಲಾತಿಯನ್ನು ಬಂಜಾರ (ಲಂಬಾಣಿ) ಸಮುದಾಯವು ತೀವ್ರವಾಗಿ ವಿರೋಧಿಸುತ್ತಿದೆ. ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದೆ. ರಾಜ್ಯ ಸರ್ಕಾರದ ಈ ಕ್ರಮವು ತನ್ನ ಮೀಸಲಾತಿ ಹಂಚಿಕೆಯನ್ನು ಕಡಿಮೆ ಮಾಡಿದೆ ಎಂದು ಸಮುದಾಯ ಆರೋಪಿಸುತ್ತಿದೆ.
ಈ ಪ್ರತಿಭಟನೆಗಳ ಮುಂದುವರಿದ ಭಾಗವಾಗಿ ಬಂಜಾರ ಮಠಾಧೀಶರು ಜನರನ್ನು ಒಗ್ಗೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹೀಗಾಗಿ ಬಂಜಾರ ಸಮುದಾಯದ ಜನರೊಂದಿಗೆ ಸಭೆ ನಡೆಸಿದ ಮಠಾಧೀಶರು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕದಂತೆ ಬಹಿರಂಗ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವಂತೆ ಸಮುದಾಯದವರಿಗೆ ಕರೆ ನೀಡಿದ್ದರು ಎನ್ನಲಾಗಿದೆ.
ಅದ್ರಳ್ಳಿಯ ಶ್ರೀ ಕುಮಾರ ಮಹಾರಾಜ ಸ್ವಾಮೀಜಿ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಳಮೀಸಲಾತಿ ಆದೇಶದ ವಿರುದ್ಧ ಲಕ್ಷ್ಮೇಶ್ವರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಮುದಾಯ ಮುಂದಾಗಿದ್ದು, ನಿರ್ಧಾರದ ಬಗ್ಗೆ ಜನರಿಗೆ ತಿಳಿಸುವಾಗ ಸ್ವಾಮೀಜಿ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮಾರುತಿ ರಾಥೋಡ್ ಅವರು ಮಠಾಧೀಶರ ವಿರುದ್ಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ವಾಮೀಜಿಯ ವಿರುದ್ಧ ಐಪಿಸಿಯ ಸೆಕ್ಷನ್ 295 (ಧರ್ಮವನ್ನು ಅವಮಾನಿಸುವುದು) ಮತ್ತು 171-ಸಿ ಮತ್ತು ಜನರ ಪ್ರಾತಿನಿಧ್ಯ ಕಾಯ್ದೆ-1951 u/s-125(2) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ನೀಡಿದ ದೂರಿನ ಮೇರೆಗೆ ಕುಮಾರ ಮಹಾರಾಜ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಇತರರನ್ನು ಸ್ವಾಮೀಜಿ ಪ್ರಚೋದಿಸಿ ಪ್ರಮಾಣ ವಚನ ಸ್ವೀಕರಿಸುವ ವಿಡಿಯೋ ತುಣುಕು ನಮಗೆ ಸಿಕ್ಕಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ ಎಂದು ಲಕ್ಷ್ಮೇಶ್ವರ ವೃತ್ತ ನಿರೀಕ್ಷಕ ವಿಕಾಸ ಲಮಾಣಿ ಶುಕ್ರವಾರ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಎಸ್ಸಿ ಒಳ ಮೀಸಲಾತಿಯ ಘೋಷಣೆ ಮಾಡಿರುವುದರಿಂದ ಬಂಜಾರ ಸಮುದಾಯದ ಮೀಸಲಾತಿ ಪಾಲು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ನೀಡಲು ನಿರ್ಧರಿಸಿತ್ತು.
ಪರಿಶಿಷ್ಟ ಜಾತಿಯ ಎಸ್ಸಿ (ಎಡ) ಕ್ಕೆ ಶೇಕಡಾ 6, ಎಸ್ಸಿ (ಬಲಕ್ಕೆ) ಶೇಕಡಾ 5.5, "ಸ್ಪೃಶ್ಯರಿಗೆ" (ಬಂಜಾರ, ಭೋವಿ, ಕೊರ್ಮಾ ಮತ್ತು ಕೊರ್ಚಾ ಇತ್ಯಾದಿ) 4.5 ಪ್ರತಿಶತ ಮತ್ತು ಇತರರಿಗೆ ಶೇಕಡಾ ಒಂದರಷ್ಟು ಒಳ ಮೀಸಲಾತಿಯನ್ನು ಶಿಫಾರಸು ಮಾಡಿದೆ. ನಂತರ ರಾಜ್ಯ ಸರ್ಕಾರ ಈ ಶಿಫಾರಸನ್ನು ಕೇಂದ್ರಕ್ಕೆ ಅನುಮೋದನೆಗಾಗಿ ರವಾನಿಸಿದೆ. ಇದನ್ನು ವಿರೋಧಿಸಿ ಹಾವೇರಿಯ ಗುಂಡೂರು ಗ್ರಾಮದ ತಿಪ್ಪೇಸ್ವಾಮಿ ಶ್ರೀಗಳು ಆತ್ಮಹತ್ಯೆಗೆ ಯತ್ನಿಸಿದ್ದರು.












Click it and Unblock the Notifications