ತಾಯಿ ಕಳೆದುಕೊಂಡ ನೋವಿನಲ್ಲೇ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಪೊಲೀಸ್: ಡಿಜಿಪಿಯಿಂದ ಮೆಚ್ಚುಗೆ
ಗದಗ, ಮೇ 09: ತಾಯಿಯನ್ನು ಕಳೆದುಕೊಂಡ ಪೊಲೀಸ್ ಸಿಬ್ಬಂದಿ ನೋವಿನಲ್ಲೇ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಗೆ ಕರ್ನಾಟಕ ಡಿಜಿಪಿ ಸೇರಿದಂತೆ ಸಂಪೂರ್ಣ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ಬೆಟಗೇರಿ ಬಡವಾಣೆ ಠಾಣೆಯ ಪೊಲೀಸ್ ಸಿಬ್ಬಂದಿ ಅಶೋಕ್ ಗದಗ ಅವರ ತಾಯಿ ಶಂಕ್ರವ್ವ ಸತ್ಯಪ್ಪ ಗದಗ (78) ಸೋಮವಾರ ದೀರ್ಘ ಕಾಲದ ಅನಾರೋಗ್ಯದಿಂದ ವಿಧಿವಶರಾದರು. ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಶಂಕ್ರವ್ವ ಸತ್ಯಪ್ಪ ಗದಗ ಚಿಕಿತ್ಸೆ ಫಲಿಸದೇ ನಿನ್ನೆ ಕೊನೆಯುಸಿರೆಳೆದರು. ಅಶೋಕ್ ಗದಗ ಕರ್ತವ್ಯದಲ್ಲಿರುವಾಗಲೇ ತಾಯಿ ವಿಧಿವಶರಾಗಿದ್ದು, ನಿನ್ನೆ ಮಗನಾಗಿ ತಾಯಿಯ ಅಂತಿಮ ವಿಧಿವಿಧಾನಗಳನ್ನು ಮುಗಿಸಿದ ಅವರು ಇಂದು ಪೊಲೀಸ್ ಅಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಮೂಲತಃ ಗದಗ ತಾಲೂಕಿನ ಹಾತಲಗೇರಿ ಗ್ರಾಮದ ಅಶೋಕ್ ಗದಗ ಮಂಗಳವಾರ ತಾಯಿ ಕಳೆದುಕೊಂಡ ನೋವಿನಲ್ಲೇ ಗದಗ ನಗರದ ಜೆಟಿ ಕಾಲೇಜ್ನಲ್ಲಿ ನಡೆದ ಮಸ್ಟರಿಂಗ್ ಕಾರ್ಯದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಶೋಕ್ ಗದಗ ಅವರ ಕಾರ್ಯಕ್ಕೆ ಕರ್ನಾಟಕ ಡಿಜಿಪಿ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈತ ಕರ್ತವ್ಯದಲ್ಲಿರುವಾಗಲೇ ಅವರ ತಾಯಿ ನಿಧನರಾದರು. ರಜೆಯನ್ನು ನಿರಾಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಅಶೋಕ್ ಗದಗ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಶೋಕ್ ಗದಗ ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಗದಗ ಪೊಲೀಸ್ ಇಲಾಖೆ ಸನ್ಮಾನ ಮಾಡಿ ಗೌರವ ಸೂಚಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಅಶೋಕ್ ಗದಗ 'ನಮ್ಮ ತಾಯಿಗೆ ಹುಷಾರಿರಲಿಲ್ಲ. ಅವರಿಗೆ ಎಂಬತ್ತು ವರ್ಷ ಆಸು ಪಾಸು ಇರಬಹುದು. ಒಂದು ವರ್ಷದ ಹಿಂದೆ ಬಿದ್ದು ಕಾಲಿಗೆ ನೋವು ಮಾಡಿಕೊಂಡಿದ್ದರು. ಆಪರೇಷನ್ ಮಾಡಿಸಿದರೂ ಸರಿ ಹೋಗಿರಲಿಲ್ಲ. ಉಸಿರಾಟದ ತೊಂದರೆಯಾಗಿ ತೀರಿಕೊಂಡರು. ನನಗೆ ಚುನಾವಣೆ ಕರ್ತವ್ಯ ಇತ್ತು. ಮನೆಯಲ್ಲಿ ಅಣ್ಣ ಇದ್ದಾರೆ. ಮುಂದಿನ ಕಾರ್ಯಗಳನ್ನು ಅವರು ಮಾಡುತ್ತಾರೆ. ಹಾಗಾಗಿ ನಾನು ನನ್ನ ಕರ್ತವ್ಯಕ್ಕೆ ಬಂದೆ' ಎಂದರು.

ಮಾತು ಮುಂದುವರಿಸಿದ ಅವರು, ನಾನು ಯಾವುದೇ ರಜೆಯನ್ನು ಕೇಳಿಲ್ಲ. ಅವರು ನಮ್ಮನ್ನ ಹೆತ್ತು ಹೊತ್ತು ಜೋಪಾನ ಮಾಡಿದರು ಅವರು ನಮ್ಮ ತಾಯಿ. ಈಗ ಪೊಲೀಸ್ ಇಲಾಖೆ ನಮ್ಮನ್ನು ಜೋಪಾನ ಮಾಡುತ್ತಿದೆ. ಇದು ನಮ್ಮ ತಾಯಿಯೇ, ಆ ತಾಯಿಯೂನೂ ಒಂದೇ ಈ ತಾಯಿಯೂ ಒಂದೇ. ಕರ್ತವ್ಯ ತಾಯಿಯೂ ಒಂದೇ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.'












Click it and Unblock the Notifications