ರಾಜ್ಯದಲ್ಲಿ ಮೊದಲು ವಿಲನ್ ಸರ್ಕಾರ, ಈಗ ಹೀರೋ ಸರ್ಕಾರ: ಕಟೀಲ್
ಗದಗ, ಸೆಪ್ಟೆಂಬರ್ 18: ರಾಜ್ಯದಲ್ಲಿ ಮೊದಲು ವಿಲನ್ ಸರ್ಕಾರವಿತ್ತು, ಈಗ ಹೀರೋ ಸರ್ಕಾರ ಬಂದಿದೆ ಮುಂದೆಲ್ಲವೂ ಒಳ್ಳೆಯದೇ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹಿಂದೂ ಕಾರ್ಯಕರ್ತರು ಮೃತಪಟ್ಟರೂ ಅವರಿಗೆ ಕಣ್ಣೀರು ಬಂದಿರಲಿಲ್ಲ, ಸಮಾಜವನ್ನು ಒಡೆದು ಅವರು ವಿಲನ್ ಆದರು, ನಾವು ಸಮಾಜವನ್ನು ಕಟ್ಟುವ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಕುಮಾರಸ್ವಾಮಿ ಸರ್ಕಾರವಿದ್ದರೂ ಕೂಡ ಅವರ ಮಾತು ನಡೆಯುತ್ತಿರಲಿಲ್ಲ, ಎಲ್ಲವೂ ಕಾಂಗ್ರೆಸ್ ಹೇಳಿದಂತೆಯೇ ಆಗಬೇಕಿತ್ತು, ಮೈತ್ರಿ ಪಕ್ಷವಾಗಿದ್ದರೂ ಕೂಡ ಸಿಎಂ ಅಲ್ಲಿ ವಿಲನ್ ಆಗಿದ್ದರು ಎಂದು ದೂರಿದರು.

ಕುಮಾರಸ್ವಾಮಿ ಪಾರ್ಟ್ ಟೈಂ ಸಿಎಂ ಎಂದ ಕಟೀಲು
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಾರ್ಟ್ ಟೈಂ ಸಿಎಂ. ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡುವೆ ಎಚ್.ಡಿ.ಕುಮಾರಸ್ವಾಮಿ ಸೈಡ್ ಆ್ಯಕ್ಟರ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಈಗ ಹೀರೋ ಸರ್ಕಾರ ಬಂದಿದೆ
ಕಳೆದ ವರ್ಷ ಸಂಭವಿಸಿದ ಪ್ರವಾಹದಲ್ಲಿ ಅನೇಕರು ಮೃತಪಟ್ಟಿದ್ದರು. ಅಷ್ಟೇ ಅಲ್ಲದೆ ಅಪಾರ ಪ್ರಮಾಣದ ಆಸ್ತಿ, ಮನೆಯನ್ನು ಸಂತ್ರಸ್ತರು ಕಳೆದುಕೊಂಡಿದ್ದರು. ಆಗ ಅಧಿಕಾರದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ಸಮರ್ಪಕ ಪರಿಹಾರ ಘೋಷಣೆ ಮಾಡಲಿಲ್ಲ.
ಬಿ.ಎಸ್.ಯಡಿಯೂರಪ್ಪನವರು ನೆರೆ-ಬರ ಸವಾಲುಗಳ ನಡುವೆ ಸರ್ಕಾರ ರಚನೆ ಮಾಡಿದ್ದಾರೆ. ಆದರೂ ಎರಡೂ ಸವಾಲುಗಳನ್ನ ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಆದರೆ ಈಗ ಬಿ.ಎಸ್.ಯಡಿಯೂರಪ್ಪ ಅವರು ಮನೆಗಳ ನಿರ್ಮಾಣಕ್ಕೆ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ಬಿಜೆಪಿ ಸರ್ಕಾರದ ಕಾರ್ಯವೈಖರಿ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕವೇ ನಮ್ಮ ಗುರಿ
ರಾಜ್ಯದಲ್ಲಿ ಪಕ್ಷ ಸಂಘನೆ ಮತ್ತಷ್ಟು ಚುರುಕುಗೊಳಿಸಲಾಗುತ್ತಿದೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಲ್ಯಾಣ ಕರ್ನಾಟಕ ಮಾಡುವುದೇ ನಮ್ಮ ಗುರಿ.

ಡಿಕೆ ಶಿವಕುಮಾರ್ ಬಂಧನದ ಹಿಂದೆ ಸಿದ್ದರಾಮಯ್ಯ ಕೈವಾಡ
ಡಿಕೆ ಶಿವಕುಮಾರ್ ಮೇಲೆ ಇಡಿ ಕೇಸ್ ದಾಖಲಾಗಲು ಮಾಜಿ ಸಿಎಂ ಸಿದ್ದರಾಮಯ್ಯನವರೇ ಕಾರಣ. ಕಾಂಗ್ರೆಸ್ನಲ್ಲಿ ಡಿಕೆಶಿ ಬೆಳೆಯುತ್ತಾರೆಂದು ಅವರನ್ನು ಮಟ್ಟ ಹಾಕಲು ಸಿದ್ದರಾಮಯ್ಯ ಪ್ರಯತ್ನ ಮಾಡುತ್ತಲೇ ಇದ್ದರು. ದ್ವೇಷ ರಾಜಕಾರಣ ಮಾಡುತ್ತಿರುವುದು ಬಿಜೆಪಿಯಲ್ಲ, ಸಿದ್ದರಾಮಯ್ಯನವರು ಎಂದು ನಳಿನ್ ಕುಮಾರ್ ಕಟೀಲು ಹೇಳಿದ್ದರು.












Click it and Unblock the Notifications