ದಂಪತಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಶಾಸಕ, 3 ಕೋಟಿ ಜಾಗ ಬಿಚ್ಚಿಡಲಿದೆ ಜಾತಕ!
ಗದಗ, ಜೂನ್ 17: ಬ್ಯಾಂಕಿನಲ್ಲಿ ಮಾಡಿರುವ 60 ಲಕ್ಷ ಸಾಲ ತೀರಿಸಲಾಗದ್ದಕ್ಕೆ 3 ಕೋಟಿ ರೂ ಆಸ್ತಿಯನ್ನು ಬರೆದುಕೊಡಿ ಎಂದು ಗದಗದ ಸೋಮಾಪುರದ ದಂಪತಿ ಮೇಲೆ ಬಿಜೆಪಿ ಶಾಸಕನಿಂದ ಗೂಂಡಾಗಿರಿ ನಡೆಸಿರುವ ಆರೋಪ ಕೇಳಿ ಬರುತ್ತಿದೆ.
ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಬ್ಯಾಂಕ್ ಸಾಲದ ವಿಷಯಕ್ಕೆ, ಗದಗ ತಾಲೂಕಿನ ಅಡವಿಸೋಮಾಪುರ ತಾಂಡಾ ನಿವಾಸಿ ಮಲ್ಲಯ್ಯ ಹಾಗೂ ಆತನ ಪತ್ನಿ ಲಕ್ಷ್ಮೀ ಹಿರೇಮಠ ಎಂಬವವರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮಲ್ಲಯ್ಯ ಮತ್ತು ಲಕ್ಷೀ ದಂಪತಿ ಬೇಳೂರು ಗುರುಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ನಲ್ಲಿ ಅವಲಕ್ಕಿ ಫ್ಯಾಕ್ಟರಿ ಕಟ್ಟುವುದಕ್ಕಾಗಿ 60 ಲಕ್ಷ ರೂ ಸಾಲ ಪಡೆದಿದ್ದರು. ಆದರೆ ಫ್ಯಾಕ್ಟರಿ ಆಕಸ್ಮಿಕ ಘಟನೆಯಲ್ಲಿ ಬೆಂಕಿ ಬಿದ್ದು ಸುಟ್ಟುಹೋಗಿದೆ. ಇದರಿಂದ ಈ ದಂಪತಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಫ್ಯಾಕ್ಟರಿ ಬೆಂಕಿಗಾಹುತಿಯಾಗಿರುವುದರಿಂದ ಸಾಲ ಮರುಪಾವತಿ ಮಾಡುವುದಕ್ಕೆ ಈ 60 ಲಕ್ಷಕ್ಕೆ 30 ಲಕ್ಷ ಬಡ್ಡಿಯಾಗಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿದ್ದ 20 ಕುಂಟೆ ಜಾಗವನ್ನು ಮಾರಿ ಸಾಲವನ್ನು ತೀರಿಸುತ್ತೇವೆ ಎಂದು 3 ತಿಂಗಳು ಕಾಲವಕಾಶ ಕೇಳಲು ದಂಪತಿ ಹೋಗಿದ್ದಾರೆ. ಆದರೆ ನೀವೇನು ಸಾಲ ತೀರಿಸುವುದು ಬೇಡ ಈ ಜಾಗವನ್ನು ಬರೆದುಕೊಡಿ, ಇಲ್ಲ ಅಂದ್ರೆ ಈಗಲೇ ಹಣವನ್ನು ಬಡ್ಡಿ ಸಮೇತ ತುಂಬು ಎಂದು ಹಲ್ಲೆ ಮಾಡಿದ್ದಾರೆ ಎಂದು ಲಕ್ಷ್ಮಿ ಆರೋಪ ಮಾಡಿದ್ದಾರೆ.

ಶಾಸಕರಿಂದ ಹಲ್ಲೆ ಆರೋಪ
ಅವಲಕ್ಕಿ ಫ್ಯಾಕ್ಟರಿ ನಡೆಸಲು ಎರಡು ಬ್ಯಾಂಕ್ಗಳಲ್ಲಿ ಈ ದಂಪತಿ ಸಾಲ ಮಾಡಿದ್ದರು. ಫ್ಯಾಕ್ಟರಿಗೆ ಬೆಂಕಿ ಬಿದ್ದಿದ್ದರಿಂದ ಒಂದು ಬ್ಯಾಂಕಿನಲ್ಲಿ ಮಾಡಿದ್ದ ಒಂದು ಕೋಟಿ ರೂ ಸಾಲ ಮನ್ನಾ ಆಗಿದೆ. ಮೂರು ಕೋಟಿ ಬೆಲೆಬಾಳುವ ಜಾಗವನ್ನು ಮಾರಿ ಸಾಲ ತೀರಿಸಬೇಕೆಂದು ನವನಗರಕ್ಕೆ ಹೋಗಿದ್ದೆವು. ಆದರೆ ಶಾಸಕ ವೀರಣ್ಣ ಚರಂತಿಮಠ ನಮ್ಮನ್ನು ಅವರ ಗೆಸ್ಟ್ಹೌಸ್ಗೆ ಕೆರಸಿ ಜಾಗವನ್ನು ಗುರುಬಸವೇಶ್ವರ ಬ್ಯಾಂಕ್ನ ಉಪಾಧ್ಯಕ್ಷ ಮುರುಗಪ್ಪ ನಾರಾಯಣ ಎಂಬುವವರ ಹೆಸರಿಗೆ ಬರೆದುಕೊಡು ಎಂದು ಧಮ್ಕಿ ಹಾಕುತ್ತಿದ್ದಾರೆ. ನಾವು ಒಪ್ಪದಿದ್ದಕ್ಕೆ ನನ್ನ ಮೇಲೆ ಮತ್ತು ನನ್ನ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಲ್ಲಯ್ಯ ಮಾಧ್ಯಮದ ಮುಂದೆ ಆರೋಪಿಸಿದ್ದಾರೆ.

ಸಾಲ ತೀರಿಸಿ, ಇಲ್ಲ ಜಾಗ ಬರೆದುಕೊಡಿ ಎಂದು ಧಮ್ಕಿ
ಶಾಸಕ ಚರಂತಿಮಠ ಗುರುಬಸವೇಶ್ವರ ಪತ್ತಿನ ಸಹಕಾರ ಬ್ಯಾಂಕ್ನ ಅಧ್ಯಕ್ಷರಾಗಿದ್ದಾರೆ. ಈ ದಂಪತಿ 3 ಕೋಟಿ ರೂ. ಬೆಲೆ ಬಾಳುವ ಜಾಗ ಮತ್ತು ಕಟ್ಟಡವನ್ನು ಮಾರಿ ಸಾಲವನ್ನು ತೀರಿಸಬೇಕು ಎಂದು ತೆರಳಿದೆ. ಆದರೆ ದಂಪತಿಯನ್ನು ಈಗಲೇ ಸಾಲ ತೀರಿಸಿ, ಇಲ್ಲ ಜಾಗವನ್ನು ಬರೆದುಕೊಡಿ. ಇಲ್ಲವಾದರೆ ನೇಣು ಹಾಕಿಕೊಳ್ಳಿ ಎಂದು ಶಾಸಕ ಮತ್ತು ಸಂಗಡಿಗರು ಸಿಕ್ಕಾಬಟ್ಟೆ ಹಿಂಸೆ ಕೊಡುತ್ತಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ.

ಮಾತುಕತೆಗೆಂದು ಕರೆಸಿ ಹಲ್ಲೆ
ಸಾಲ ತೀರಿಸುವ ಸಲುವಾಗಿ ಬ್ಯಾಂಕಿಗೆ ಭೇಟಿ ನೀಡಿದ್ದ ವೇಳೆ ಮಾತುಕತೆಗೆ ಎಂದು ಶಾಸಕರು ದಂಪತಿಯನ್ನು ತಮ್ಮ ಗೆಸ್ಟ್ ಹೌಸ್ಗೆ ಕರೆಸಿಕೊಂಡಿದ್ದಾರೆ. ಆದರೆ ಶಾಸಕರು ಒಂದೂ ಮಾತನಾಡದೆ ಏಕಾಎಕಿ ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಮಗೆ ನ್ಯಾಯ ಕೊಡಿಸಬೇಕು ಎಂದು ನೊಂದ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

ದೂರು ದಾಖಲಿಸಿಕೊಳ್ಳದ ಪೊಲೀಸರು
ಶಾಸಕರು ನಮ್ಮ ಹಲ್ಲೆ ಮಾಡಿ, ನಮ್ಮ ಮೊಬೈಲ್ಗಳನ್ನು ಕಸಿದುಕೊಂಡಿದ್ದಾರೆ. ಕಟ್ಟಿಹಾಕಿ ಎಂದಿರುವುದರಿಂದ ನಮಗೆ ಭಯ ಆಗಿತ್ತು. ಆದರೂ ಈ ಬಗ್ಗೆ ನವನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದರು. ಅಲ್ಲದೆ ನಮ್ಮನ್ನು ಕಟ್ಟಿಹಾಕಿ ಎಂದು ಹೇಳಿದ್ದರಿಂದ ನಾವು ಮತ್ತೆ ಬಾಗಲಕೋಟೆಗೆ ಹೋಗಲಿಲ್ಲ ಎಂದು ದಂಪತಿ ಹೇಳಿದ್ದಾರೆ. ಪ್ರಸ್ತುತ ದಂಪತಿ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications