ದುಬೈ ವಿದ್ಯಾರ್ಥಿಗಳಿಗೆ ಭಾರತದ ಸಮಗ್ರತೆಯ ಪಾಠ ಮಾಡಿದ ರಾಹುಲ್
ದುಬೈ, ಜನವರಿ 12: ಭಾರತವನ್ನು ಗಡಿಗಳ ಮೂಲಕ ಗುರುತಿಸುವುದು ಸೂಕ್ತವಲ್ಲ ಅದು ಎಲ್ಲೆಲ್ಲೂ ಹರಡಿದೆ. ಭಾರತದ ಸಮಗ್ರತೆಯನ್ನು, ವೈವಿದ್ಯತೆಯನ್ನು, ಸುಂದರತೆಯನ್ನು ವಿಶ್ವಕ್ಕೆ ಸಾರುವ ಕಾರ್ಯವನ್ನು ಅನಿವಾಸಿ ಭಾರತೀಯರು ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ದುಬೈನಲ್ಲಿ ಹೇಳಿದರು.
ದುಬೈನಲ್ಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಟೆಕ್ನಾಲಜಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳಿಂದ ಪ್ರಖರ ಪ್ರಶ್ನೆಗಳನ್ನು ಎದಿರಿಸಿದರು ಆದರೆ ಸಮಂಜಸ ಉತ್ತರಗಳನ್ನೇ ನೀಡಿದರು. ರಾಹುಲ್ ಸಹ ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿದರು.
ಭಾರತವು ಅಂಹಿಂಸೆ ಪಾಲಿಸುವ ದೇಶ. ಪ್ರಶ್ನೆ ಕೇಳಿದ್ದಕ್ಕೆ, ಇಷ್ಟದ ಆಹಾರ ತಿನ್ನುವುದಕ್ಕೆ, ಭಿನ್ನ ಅಭಿಪ್ರಾಯ ಹೊಂದಿರುವುದಕ್ಕೆ ಹಿಂಸೆಗಳು ನಡೆಸಲಾಗುತ್ತಿದೆ. ಈ ರೀತಿಯ ಭಾರತ ಈ ಹಿಂದೆ ಇರಲಿಲ್ಲ, ಈ ಹಿಂಸಾತ್ಮಕತೆಯನ್ನು ಬೆಳೆಯಲು ಬಿಡಬಾರದಾಗಿದೆ ಎಂದು ಅವರು ಹೇಳಿದರು.
ಎನ್ಆರ್ಐ ಗಳಿಗೆ ಮತ ಚಲಾವಣೆ ಹಕ್ಕು ಏಕೆ ನೀಡಲಾಗುತ್ತಿಲ್ಲ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಈ ವಿಷಯದಲ್ಲಿ ಚರ್ಚೆ ಅಗತ್ಯವಿದೆ ಎಂದು ನನ್ನ ಅಭಿಪ್ರಾಯ. ಆದರೆ ಭಾರತದಲ್ಲಿನ ಹಲವರು ಇದಕ್ಕಿಂತಲೂ ಬೇರೆಯದಾದ ಅಭಿಪ್ರಾಯ ಹೊಂದಿದ್ದಾರೆ. ಈ ಬಗ್ಗೆ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಧನಾತ್ಮಕ ಭರವಸೆ ನೀಡಿದರು.
ದಕ್ಷಿಣ ಭಾರತ ಶೈಕ್ಷಣಿಕವಾಗಿ ಮುಂದಿದೆ
ಭಾರತದ ಶಿಕ್ಷಣ ವ್ಯವಸ್ಥೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಭಾರತದ ಶಿಕ್ಷಣ ವ್ಯವಸ್ಥೆಗೆ ಕೆಲವು ಬದಲಾವಣೆಗಳ ಅವಶ್ಯಕತೆ ಇದೆ. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತ ಶೈಕ್ಷಣಿಕವಾಗಿ ಉತ್ತಮವಾಗಿದೆ. ನಮ್ಮಲ್ಲಿನ ಹಲವು ಐಐಟಿಗಳು ಉತ್ತಮ ಮಾದರಿಯನ್ನು ಹಾಕಿಕೊಟ್ಟಿವೆ ಎಲ್ಲ ಶಿಕ್ಷಣ ಸಂಸ್ಥೆಗಳು ಅದನ್ನು ಪಾಲಿಸಬೇಕಿದೆ ಎಂದು ಹೇಳಿದರು.
ಪ್ರತಿಭಾ ಪಲಾಯನ ಭಾರತಕ್ಕೆ ಸಮಸ್ಯೆ ಅಲ್ಲ
ಪ್ರತಿಭಾ ಪಲಾಯನ ಭಾರತಕ್ಕೆ ಸಮಸ್ಯೆಯಾಗಿ ಕಾಡುತ್ತಿದೆಯೇ? ಎಂಬ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ರಾಹುಲ್, ನಾನದನ್ನು ಪ್ರತಿಭಾ ಪಲಾಯನ ಎನ್ನುವುದಿಲ್ಲ, ಭಾರತದ ಕೀರ್ತಿಯನ್ನು ವಿಶ್ವಕ್ಕೆ ಸಾರುವ ಯತ್ನವೆಂದು ನೋಡುತ್ತೇನೆ ಎಂದರು. ರಾಹುಲ್ ಉತ್ತರಕ್ಕೆ ಉತ್ತಮ ಪ್ರತಿಕ್ರಿಯೆ ಭಾರತೀಯ ವಿದ್ಯಾರ್ಥಿಗಳಿಂದ ವ್ಯಕ್ತವಾಯಿತು.
ವಿದ್ಯಾರ್ಥಿಗಳಿಗೂ ಪ್ರಶ್ನೆ ಕೇಳಿದ ರಾಹುಲ್
ವಿದ್ಯಾರ್ಥಿಗಳಿಗೂ ಕೆಲವು ಪ್ರಶ್ನೆಗಳನ್ನು ಕೇಳಿದ ರಾಹುಲ್ ಗಾಂಧಿ, ವಿದ್ಯಾರ್ಥಿಯೊಬ್ಬರಿಗೆ ಸಲಹೆ ನೀಡುತ್ತಾ, ರಾಜಕಾರಣಿ ಆಗುವ ಕನಸು ಕಾಣುತ್ತಿದ್ದೀರಾ ಎಂದರು. ರಾಜಕಾರಣಿ ಆಗುವುದು ಸುಲಭದ ಕೆಲಸವಲ್ಲ. ರಾಜಕಾರಣಿಗಳ ಕೆಲಸ ಸುಲಭದಂತೆ ಕಾಣುತ್ತದೆ ಆದರೆ ಅದು ಸುಲಭವಲ್ಲ ಎಂದರು.
'ಕ್ರೀಡೆ ಭಾರತದ ಮೊದಲ ಆದ್ಯತೆ ಪ್ರಸ್ತುತ ಆಗಲಾರದು'
ಕ್ರೀಡೆಯಲ್ಲಿ ಏಕೆ ಭಾರತ ನಿರೀಕ್ಷಿತ ಸಾಧನೆಗಳನ್ನು ಮಾಡುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಕ್ರೀಡೆಯನ್ನು ಭಾರತದ ಮೊದಲ ಆದ್ಯತೆ ಮಾಡಲು ಪ್ರಸ್ತುತ ಪರಿಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಹಸಿವು, ನಿರುದ್ಯೋಗಗಳಂತಹಾ ಅದಕ್ಕಿಂತಲೂ ಮುಖ್ಯವಾದ ಸಮಸ್ಯೆಗಳಿವೆ. ಅತಿ ಹೆಚ್ಚಿನ ಪ್ರಾಧಾನ್ಯತೆಯನ್ನು ನಾವು ಕ್ರೀಡೆಗೆ ಕೊಡಲು ಆಗುತ್ತಿಲ್ಲ ಆದರೆ ಇತ್ತೀಚಿನ ದಿನಗಳಲ್ಲಿ ಭಾರತದ ಕ್ರೀಡಾಳುಗಳು ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಸಾಧನೆ ಮಾಡುತ್ತಿದ್ದಾರೆ ಎಂದರು.
ದೀರ್ಘಕಾಲೀನ ಫಲದಾಯಕ ಯೋಜನೆಗಳು ನಮ್ಮ ಆದ್ಯತೆ
ನೀವು ಅಧಿಕಾರಕ್ಕೆ ಬಂದರೆ ನಿಮ್ಮ ಆದ್ಯತೆಯ ಕ್ಷೇತ್ರಗಳಾವುವು? ಎಂಬ ಪ್ರಶ್ನೆಗೆ ಸುದೀರ್ಘವಾಗಿ ಉತ್ತರಿಸಿದ ರಾಹುಲ್, ಯಾವುದೇ ಕ್ಷೇತ್ರದಲ್ಲಾಗಲಿ ದೀರ್ಘಕಾಲೀನ ಪ್ರತಿಫಲ ನೀಡುವ ಯೋಜನೆಗಳು ನಮ್ಮ ಆದ್ಯತೆ ಆಗಲಿವೆ. ನಮ್ಮ ಕೃಷಿ ಪದ್ಧತಿ ಜಾಗತಿಕ ಮಟ್ಟದಲ್ಲಿಲ್ಲ ಅದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಭಾರತದ ಅಹಿಂಸೆ ಮತ್ತು ಸೋದರತ್ವವನ್ನು ವಿಶ್ವಕ್ಕೆ ಸಾರುವಂತೆ ನಮ್ಮ ವಿದೇಶಾಂಗ ನೀತಿ ಇರಲಿದೆ ಎಂದು ಅವರು ಹೇಳಿದರು.