ಸದನದಲ್ಲಿ ನಾಳೆಯಿಂದ ಕಾಂಗ್ರೆಸ್ ಬೋಗಸ್ ಗ್ಯಾರಂಟಿಗಳ ವಿರುದ್ಧ ಪ್ರತಿಭಟನೆ: ಪ್ರಲ್ಹಾದ್ ಜೋಶಿ
ಧಾರವಾಡ, ಜೂನ್, 02: ವಿಧಾನ ಮಂಡಲ ಅಧಿವೇಶನ ಹಿನ್ನೆಲೆ ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ಬೋಗಸ್ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಪ್ರತಿಭಟನೆ ಮಾಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಜನವಿರೋಧಿ ಯೋಜನೆಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು. ಹಾಗೆಯೇ ರಾಜ್ಯ ಸರ್ಕಾರ 10 ಕೆ.ಜಿ. ಅಕ್ಕಿಯ ಹಣ ಕೊಡಬೇಕು, ಇಲ್ಲವೇ ಕ್ಷಮೆ ಕೇಳಬೇಕು. ಕೇಂದ್ರದಿಂದ 5 ಕೆ.ಜಿ. ಅಕ್ಕಿಯ ಹಣ ಕೊಡುತ್ತಿರುವ ಬಗ್ಗೆ ಸತ್ಯವನ್ನು ಹೇಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ರೇಣುಕಾಚಾರ್ಯರಿಗೆ ನೋಟಿಸ್ ಕೊಟ್ಟಿರುವ ಕುರಿತು ಮಾತನಾಡಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಬಿಎಸ್ವೈ ಅವರೂ ರೇಣುಕಾಚಾರ್ಯ ಕರೆದು ಮಾತನಾಡಿದ್ದಾರೆ. ನಾನು ಸಹ ಇವತ್ತು ಮಾತನಾಡುವೆ. ನಮ್ಮದು ಒಂದು ಪರಿವಾರ ಇದ್ದಂತೆ ಎಂಬುದನ್ನು ಮನವರಿಕೆ ಮಾಡಿಕೊಡುವೆ. ಸ್ವಲ್ಪ ಆಕ್ರೋಶದಲ್ಲಿ ಕೆಲವರು ಮಾತನಾಡಿದ್ದರು. ಪಕ್ಷದ ಮೇಲೆ ಯಾರಿಗೂ ಬೇಸರವಿಲ್ಲ. ಅಂತಹವರಿಗೆ ಸಾರ್ವಜನಿಕವಾಗಿ ಹೇಳಿಕೆ ನೀಡದಂತೆ ಸೂಚಿಸಲಾಗಿದೆ ಎಂದರು.
ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ, ಜೋಶಿ ಹೇಳಿದ್ದೇನು?
ಹಾಗೆಯೇ ಮತ್ತೊಂದೆಡೆ ಧಾರವಾಡ-ಬೆಂಗಳೂರು ವಂದೇ ಭಾರತ ರೈಲಿಗೆ ಕಲ್ಲೆಸೆದಿದ್ದು ವಿಕೃತ ಮನೋಭಾವ ಬಿಂಬಿಸುತ್ತದೆ. ದೇಶದ ಅನೇಕ ಭಾಗದಲ್ಲಿ ಈ ರೀತಿ ಆಗುತ್ತಿದೆ, ಇದು ಒಳ್ಳೆಯ ಬೆಳವಣಿಗೆಯಲ್ಲ. ವಂದೇ ಭಾರತ್ ರೈಲು ದೇಶದ ಆಸ್ತಿ, ದೇಶದಲ್ಲಿ ಆಧುನಿಕ ಸೌಲಭ್ಯ ಬೆಳೆಯಲು ಈ ರೈಲಿನ ಪಾತ್ರ ಅತ್ಯಂತ ಪ್ರಮುಖವಾಗಿದೆ
ಈ ರೈಲುಗಳು ಭಾರತದಲ್ಲಿ ತಯಾರಾಗಬೇಕೆಂಬುದು ಪ್ರಧಾನಿ ಮೋದಿ ಅವರ ಕಾಳಜಿಯಾಗಿದೆ. ಕೆಲ ಕಿಡಿಗೇಡಿಗಳು ರಸ್ತೆ ಪಕ್ಕಕ್ಕೆ ನಿಂತು ಕಲ್ಲು ಎಸೆಯುತ್ತಿದ್ದಾರೆ. ಹೀಗಾಗಿ ರೈಲಿನ ಒಳಗೆ ಇದ್ದವರಿಗೆ ಅವರು ಯಾರು ಅಂತಾ ಗೊತ್ತಾಗುವುದಿಲ್ಲ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಬಲಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಿಎಂಐಟಿ ಕಾಲೇಜು ಬಳಿ ಘಟನೆ
ಶನಿವಾರ (ಜುಲೈ 01) ಕಿಡಿಗೇಡಿಗಳು ವೇಗವಾಗಿ ಚಲಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ ಘಟನೆ ದಾವಣಗೆರೆಯ ಹರಿಹರ ರಸ್ತೆಯಲ್ಲಿರುವ ಜಿಎಂಐಟಿ ಕಾಲೇಜು ಹಿಂಭಾಗ ನಡೆದಿದೆ. ಪರಿಣಾಮ ವಂದೇ ಭಾರತ್ ರೈಲಿನ ಕಿಟಕಿ ಗಾಜು ಜಖಂಗೊಂಡಿದೆ. ಸದ್ಯ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ದಾವಣಗೆರೆ ಹೊರವಯಲದಲ್ಲಿರುವ ಜಿಎಂಐಟಿ ಕಾಲೇಜಿನ ಹಿಂಭಾಗ ಶನಿವಾರ ಕೆಲವು ಕಿಡಿಗೇಡಿಗಳು ಚಲಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲು ತೂರಾಟ ನಡೆಸಿದ್ದು, ಇದರ ಪರಿಣಾಮ ವಂದೇ ಭಾರತ್ ಎಕ್ಸ್ಪ್ರೆಸ್ನ ಕಿಟಕಿಯ ಗಾಜು ಜಖಂಗೊಂಡಿದೆ. ಈ ರೈಲು ಧಾರವಾಡದಿಂದ ಬೆಂಗಳೂರು ಕಡೆಗೆ ಸಂಚರಿಸುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ನೈಋತ್ಯ ರೈಲ್ವೆಯ ಅಧಿಕಾರಿಗಳು ಈ ಘಟನೆಯನ್ನು ಆರ್ಪಿಎಫ್ ಸಿಬ್ಬಂದಿಗೆ ವರದಿ ಮಾಡಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆಗೆ ಸೂಚಿಸಿದ್ದಾರೆ. ದಾವಣಗೆರೆಯ ಜಿಎಂಐಟಿ ಕಾಲೇಜು ಬಳಿ ಘಟನೆ ನಡೆದಿದ್ದು, ಸಿ4 ಕೋಚ್ನ ಕಿಟಕಿಯ ಹಲಗೆಗೆ ಹಾನಿಯಾಗಿದೆ ಎಂದು ಎಸ್ಡಬ್ಲ್ಯೂಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಉತ್ತರ ಕರ್ನಾಟಕ ಭಾಗದ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇತ್ತೀಚೆಗಷ್ಟೇ ವಿದ್ಯುಕ್ತವಾಗಿ ಚಾಲನೆ ದೊರೆತಿತ್ತು. ಈ ರೈಲು ಧಾರವಾಡದಿಂದ ಬೆಂಗಳೂರಿಗೆ ಸಂಚಾರ ಮಾಡುತ್ತಿದೆ. ಅಲ್ಲದೆ ಇದೇ ವಂದೇ ಭಾರತ್ ರೈಲಿಗೆ ಸಿಲುಕಿ ಧಾರವಾಡದಲ್ಲಿ ಮೊದಲ ಬಲಿಯಾದ ಘಟನೆಯೂ ನಡೆದಿತ್ತು.












Click it and Unblock the Notifications