ನ್ಯಾಯಾಧೀಶರತ್ತ ಚಪ್ಪಲಿ ತೂರಿದ ಕೊಲೆ ಆರೋಪಿ
ಹುಬ್ಬಳ್ಳಿ, ಏಪ್ರಿಲ್ 22 : ಕೊಲೆ ಆರೋಪದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರ ಮೇಲೆ ಆರೋಪಿಯೋರ್ವ ಚಪ್ಪಲಿ ಎಸೆದ ಘಟನೆ ಗುರುವಾರ ನಡೆದಿದೆ. ಕೊಲೆ ಆರೋಪ ಎದುರಿಸುತ್ತಿದ್ದ ಸಿಆರ್ ಪಿಎಫ್ ಯೋಧನಾಗಿದ್ದ ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಶಂಕ್ರಪ್ಪ ಭಜಂತ್ರಿ ಎಂಬಾತನೇ ನ್ಯಾಯಾಧೀಶರತ್ತ ಚಪ್ಪಲಿ ಎಸೆದವನು.
ಘಟನೆಯ ವಿವರ : ಆರೋಪಿ ಶಂಕ್ರಪ್ಪನು ನಗರದ ಯುವತಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಯುವತಿಯ ತಂದೆ-ತಾಯಂದಿರಿಗೂ ವಿಷಯ ಗೊತ್ತಿರಲಿಲ್ಲ. ನಂತರ ತನ್ನ ಮನೆಯಲ್ಲಿ ತನ್ನ ತಂದೆ-ತಾಯಿ ಬಳಿ ಹೆಂಡತಿಯನ್ನು ಬಿಟ್ಟು ಕರ್ತವ್ಯಕ್ಕೆ ಹೋಗಿದ್ದ. ನಂತರ ಯುವತಿಯ ತಂದೆ-ತಾಯಿಯವರು ಬಂದು ಅವಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. [ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ]

ಇದರಿಂದ ಆಕ್ರೋಶಗೊಂಡಿದ್ದ ಶಂಕ್ರಪ್ಪ ಹೆಂಡತಿಯ ಮನೆಯವರೊಂದಿಗೆ ಜಗಳವಾಡಿದ್ದ. ತನ್ನ ಸಂಬಂಧಿಕನಾಗಿದ್ದ ಯಲ್ಲಪ್ಪ ಭಜಂತ್ರಿಯೇ ಹೆಂಡತಿ ತವರು ಮನೆಗೆ ಹೋಗಲು ಕಾರಣವೆಂದು ಊರಿಗೆ ಬಂದಾಗ ಯಲ್ಲಪ್ಪನ ಮನೆಗೆ ತೆರಳಿ ಪಿಸ್ತೂಲ್ ನಿಂದ ಗುಂಡು ಹಾರಿಸಿದ್ದ. ಗುಂಡಿನ ದಾಳಿಯಿಂದ ಯಲ್ಲಪ್ಪನ ಮಕ್ಕಳಾದ ಐಶ್ವರ್ಯ, ಸೋಮು ಎಂಬುವರು ಮೃತಪಟ್ಟಿದ್ದರು. ಯಲ್ಲಪ್ಪನ ಪತ್ನಿ ಗೀತಾಗೆ ಗುಂಡು ತಗುಲಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ವಿಚಾರಣೆ ನಡೆಯುತ್ತಿದ್ದ ವೇಳೆ ಸಿಟ್ಟಿಗೆದ್ದ ಶಂಕ್ರಪ್ಪ ಭಜಂತ್ರಿ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದಿದ್ದಾನೆ. ಆತನನ್ನು ಮತ್ತೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications