ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಉತ್ತೇಜಿಸಲು ಬಹುಮಾನ ಘೋಷಿಸಿದ ಸಚಿವ ಪ್ರಹ್ಲಾದ ಜೋಶಿ
ಧಾರವಾಡ, ಸೆ.18: ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆ ಉತ್ತೇಜಿಸಲು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭಾನುವಾರ ಬಹುಮಾನ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರು ಬಹುಮಾನ ಘೋಷಿಸಿದರು.
"ಮಕ್ಕಳಲ್ಲಿ ಗಣಿತ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಗಣಿತ ಮೇಳ ವಿಭಿನ್ನ, ವಿಶಿಷ್ಟವಾದದ್ದು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧೆ ಕೂಡಾ ಆಯೋಜಿಸಬೇಕು" ಎಂದರು.
ಬಿಡಿಎ ಹಗರಣದಲ್ಲಿ ಯಡಿಯೂರಪ್ಪ ಶುದ್ಧ ಹಸ್ತರಾಗಿ ಹೊರಬರುತ್ತಾರೆ: ಪ್ರಲ್ಹಾದ್ ಜೋಶಿ ವಿಶ್ವಾಸ
ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ಅಂಗವಾಗಿ ನಗರದ ಕರ್ಷ ಜ್ಞಾನ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೆ.ಇ. ಬೋರ್ಡ್ ಸಂಸ್ಥೆ ಜಂಟಿಯಾಗಿ ಕರ್ನಾಟಕ ಪ್ರೌಢಶಾಲೆಯಲ್ಲಿ ಆಯೋಜಿಸಿರುವ ಎರಡು ದಿನಗಳ ಮೋಜಿನೊಂದಿಗೆ ಗಣಿತ ಕಲಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇಂದ್ರ ಸಚಿವರಿಂದ ನಗದು ಬಹುಮಾನ ಘೋಷಣೆ
ಎರಡು ದಿನಗಳ ಮೋಜಿನೊಂದಿಗೆ ಗಣಿತ ಕಲಿಕೆ ಮೇಳಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, "ಗಣಿತ ಕುರಿತು ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ 25 ಸಾವಿರ ರೂಪಾಯಿ, ದ್ವಿತೀಯ ಸ್ಥಾನ ಪಡೆದವರಿಗೆ 15 ಸಾವಿರ ಮತ್ತು ತೃತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗೆ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ" ಎಂದು ಘೋಷಿಸಿದರು.
ಗಣಿತ ಶಾಸ್ತ್ರಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ
ನಿತ್ಯ ಬದುಕಿನ ಭಾಗವಾಗಿರುವ ಗಣಿತದ ಕುರಿತು ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿಪ್ರಾಯಪಟ್ಟರು.
'ಭಾರತೀಯ ವೇದ, ಪುರಾಣಗಳಲ್ಲಿ ಗಣಿತದ ಉಲ್ಲೇಖವಿದ್ದು, ಗಣಿತ ಶಾಸ್ತ್ರಕ್ಕೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿಗೆ ಸೊನ್ನೆ ಪರಿಚಯಿಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ. ಭಾಸ್ಕರಾಚಾರ್ಯರಿಂದ ಹಿಡಿದು ಇತ್ತೀಚಿಗಿನ ಶ್ರೀನಿವಾಸ ರಾಮಾನುಜನ್ ಸೇರಿದಂತೆ ಅನೇಕ ಗಣಿತ ಶಾಸ್ತ್ರಜ್ಞರು ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಆದರೆ, ಬದಲಾದ ಸಂದರ್ಭದಲ್ಲಿ ಗಣಿತ ಕಬ್ಬಿಣದ ಕಡಲೆ ಎಂದು ವಿದ್ಯಾರ್ಥಿಗಳು ಭಾವಿಸುತ್ತಿದ್ದು, ಆ ಭಯ ತೊಡೆದು ಗಣಿತದಲ್ಲಿ ಆಸಕ್ತಿ ಮೂಡಿಸಲು ಈ ಮೇಳ ಆಯೋಜಿಸಿರುವುದು ಅಭಿನಂದನೀಯ ಕಾರ್ಯ' ಎಂದರು.
ಸಾಮಾಜಿಕ ಕಾರ್ಯಗಳ ಮೂಲಕ ಮೋದಿ ಜನ್ಮದಿನ
'ರಾಜಕೀಯ ಎಂದರೆ ತಿರಸ್ಕೃತ ಎನ್ನುವ ಭಾವನೆ ಬಲವಾಗುತ್ತಿರುವ ಸಂದರ್ಭದಲ್ಲಿ, ಆ ವ್ಯವಸ್ಥೆಯಲ್ಲಿ ವಿಶ್ವಾಸ ಮೂಡುವಂತೆ ಮಾಡಿದ, ಪ್ರತಿಯೊಂದರಲ್ಲೂ ಭಾರತೀಯ ಭಾವನೆಯನ್ನು ಉದ್ದೀಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಹಲವು ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ದೇಶಾದ್ಯಂತ ಆಚರಿಸಲಾಗುತ್ತಿದೆ' ಎಂದರು.
'ಇದೇ ವೇಳೆ ಇಲ್ಲಿ ಗಣಿತವನ್ನು ಮಕ್ಕಳಿಗೆ ಸುಲಭವಾಗಿಸುವ ಮತ್ತು ಅರ್ಥೈಸುವ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ' ಎಂದು ಕರ್ಷ ಜ್ಞಾನ ಫೌಂಡೇಶನ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೆ.ಇ. ಬೋರ್ಡ್ ಸಂಸ್ಥೆ ಜಂಟಿಯಾಗಿ ನಡೆಸುತ್ತಿರುವ ಗಣಿತ ಮೇಳವನ್ನು ಅಭಿನಂದಿಸಿದರು.
ಸೇವಾ ಪಾಕ್ಷಿಕದ ಹೆಸರಲ್ಲಿ ಬೃಹತ್ ರಕ್ತದಾನ ಶಿಬಿರ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 72 ನೇ ಜನ್ಮ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲಿ ರಕ್ತದಾನ ಮಾಡುವ ಮೂಲಕ ಮಾದರಿಯಾಗಿ ಆಚರಿಸಲಾಯಿತು. ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಸ್ವತಃ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಕ್ತದಾನ ಮಾಡಿದರು. ಕೇಂದ್ರ ಸಚಿವರಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಾಥ್ ನೀಡಿದರು.
ಸೇವಾ ಪಾಕ್ಷಿಕದ ಹೆಸರಲ್ಲಿ ಬೃಹತ್ ರಕ್ತದಾನ ಶಿಬಿರವನ್ನ ಹಮ್ಮಿಕೊಳ್ಳಲಾಗಿದ್ದು, ಗಿನ್ನಿಸ್ ದಾಖಲೆ ಬರೆಯುವ ಗುರಿ ಹೊಂದಲಾಗಿದೆ. " ಪ್ರಧಾನಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಹಲವು ಕಡೆ ಸ್ವಯಂ ಪ್ರೇರಿತವಾಗಿ ರಕ್ತದಾನ ಸೇರಿ ವಿವಿದ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಯುವಕರು ಸಾಕಷ್ಠು ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡುತ್ತಿದ್ದಾರೆ. ದಾಖಲೆಯ ಮಟ್ಟದಲ್ಲಿ ರಕ್ತದಾನ ನಡೆಯಲಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.