ನವಲಗುಂದದಲ್ಲಿ ಹಿಂಸಾರೂಪಕ್ಕೆ ತಿರುಗಿದ ಮಹದಾಯಿ ಹೋರಾಟ
ಧಾರವಾಡ, ಜುಲೈ 28 : ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ನವಲಗುಂದದಲ್ಲಿ ಸರ್ಕಾರಿ ಕಚೇರಿಗಳಿಗೆ ಪ್ರತಿಭಟನಾನಿರತರು ಬೆಂಕಿ ಹಚ್ಚಿದ್ದಾರೆ. ಗದಗದಲ್ಲಿ ಇಬ್ಬರು ವಿದ್ಯಾರ್ಥಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗುರುವಾರ ಬೆಳಗ್ಗೆಯಿಂದ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ನಡೆಯುತ್ತಿರುವ ಪ್ರತಿಭಟನೆ ಮಧ್ಯಾಹ್ನ ಹಿಂಸಾರೂಪಕ್ಕೆ ತಿರುಗಿದೆ. ಪುರಸಭೆ ಕಚೇರಿಯ ಕಡತಗಳ ವಿಭಾಗ ಮತ್ತು ನವಲಗುಂದ ಬಿಎಸ್ಎನ್ಎಲ್ ಕಚೇರಿ ಕಟ್ಟಡಕ್ಕೆ ಬೆಂಕಿ ಹಚ್ಚಲಾಗಿದೆ.[ಮಹದಾಯಿ ಹೋರಾಟದ ಚಿತ್ರಗಳು]
ಬಿಎಸ್ಎನ್ಎಲ್ ಕಚೇರಿ ಆವರಣದಲ್ಲಿ ನಿಂತಿದ್ದ ಜೀಪ್ಗೂ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ. ಕೋರ್ಟ್ ಹಾಲ್ಗೆ ನುಗ್ಗಿದ ಪ್ರತಿಭಟನಾನಿರತರು ಪಿಠೋಪಕರಣಗಳನ್ನು ಧ್ವಂಸಗೊಳಿಸಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಧಾರವಾಡದಿಂದ ಆರ್ಎಎಫ್ಪಡೆಯನ್ನು ನವಲಗುಂದಕ್ಕೆ ಕಳುಹಿಸಲಾಗಿದೆ.[ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]
ವಿಷ ಕುಡಿದ ವಿದ್ಯಾರ್ಥಿಗಳು : ಗದಗ ಜಿಲ್ಲೆಯ ನರಗುಂದದಲ್ಲಿ ಮಹದಾಯಿ ತೀರ್ಪು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಲ್ಲಿ ಸಂಗಮೇಶ್, ನಂದೀಶ್ ಚಿರಂತಿಮಠ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು.[ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]
ಅಲ್ಲಿದ್ದವರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆತರಲಾಗಿದ್ದು, ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಆಸ್ಪತ್ರೆ ಮುಂಭಾಗಕ್ಕೆ ಬಂದು ಜಮಾಯಿಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನವಲಗುಂದ ಸರ್ಕಾರಿ ಆಸ್ಪತ್ರೆ ಬಳಿ ಮಚ್ಚು, ಲಾಂಗುಗಳನ್ನು ಹಿಡಿದು ಓಡಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದರು. ಈ ನಾಲ್ವರು ಕಾರಿನಲ್ಲಿ ಆಗಮಿಸಿದ್ದರು ಎಂದು ತಿಳಿದುಬಂದಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದರು.
ನವಲಗುಂದದಲ್ಲಿ ಮಹದಾಯಿ ಹೋರಾಟ ಹಿಂಸಾರೂಪಕ್ಕೆ ತಿರುಗಿದ್ದರಿಂದ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ನಿಷೇಧಾಜ್ಞೆ ಜಾರಿಗೊಳಿಸಿದರು.