60 ದಿನದಲ್ಲಿ ವಾಣಿಜ್ಯ ಗ್ಯಾಸ್ ದರ 1308 ರೂ ಏರಿಕೆ: ಶೇ18 ಜಿಎಸ್ಟಿ ಕಡಿತಕ್ಕೆ ಆಗ್ರಹ: ಪಿ.ಸಿ ರಾವ್
ಬೆಂಗಳೂರು: ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಅನಿಲದ ಬೆಲೆ ಹೆಚ್ಚಿಸಿದ್ದನ್ನು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ (BBHA) ಅಧ್ಯಕ್ಷ ಪಿ.ಸಿ.ರಾವ್ ಖಂಡಿಸಿದ್ದಾರೆ. ಗೃಹ ಬಳಕೆಯ ಸಿಲಿಂಡರ್ಗಿಂತ ವಾಣಿಜ್ಯ ಬಳಕೆಯ ಗ್ಯಾಸ್ ಮೇಲೆ ಸರಕು ಸೇವಾ ತೆರಿಗೆ (GST) ಶೇ.18 ರಷ್ಟು ವಿಧಿಸಲಾಗಿದೆ. ಎರಡು ಕಡೆಯಿಂದ ಆದಾಯ ಪಡೆಯುವ ಸರ್ಕಾರ ಕೂಡಲೇ ಜಿಎಸ್ಟಿಯನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ಅವರ ಮುಂದಿನ ನಡೆ ಕುರಿತು 'ಒನ್ ಇಂಡಿಯಾ ಕನ್ನಡ' ಜೊತೆಗೆ ಅವರು ಮಾತನಾಡಿದ್ದು, ವಿವರ ಇಲ್ಲಿದೆ.
ಕೇಂದ್ರ ಸರ್ಕಾರವು ಕೇವಲ 60 ದಿನಗಳಲ್ಲಿ (ಮಾರ್ಚ್ 1-ಮೇ 1)ರವರೆಗೆ ಬರೋಬ್ಬರಿ 1308 ರೂಪಾಯಿ ವಾಣಿಜ್ಯ ಬಳಕೆಯ ಎಲ್ಪಿಜಿ ದರ ಹೆಚ್ಚಿಸಲಾಗಿದೆ. ಇದರಿಂದ ಹೋಟೆಲ್ ಉದ್ಯಮ ಮೇಲೆ ನೇರ ಪರಿಣಾಮ ಬೀರುತ್ತದೆ. ನಮಗೆ ಅನುಕೂಲವಾಗುವಂತೆ ವಾಣಿಜ್ಯ ಸಿಲಿಂಡರ್ ಮೇಲಿನ ಶೇ.18ರಷ್ಟು ಜಿಎಸ್ಟಿ ಅನ್ನು ಕಡಿತಗೊಳಿಸಿ ಶೇ.5ಕ್ಕೆ ಸಿಮಿತ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಇಂದಿನ (ಮೇ 1) ಗ್ಯಾಸ್ ಬೆಲೆ 993 ರೂಪಾಯಿ ಹೆಚ್ಚಾಗಿದ್ದು ಕಂಡು ಆಶ್ಚರ್ಯವಾಗಿದೆ. ಹೋಟೆಲ್ ಉದ್ಯಮ ಮೇಲೆ ದರ ಏರಿಕೆಯಿಂದ ದೊಡ್ಡ ಪರಿಣಾಮ ಉಂಟಾಗಲಿದ್ದು, ನಾವು ಅನಿವಾರ್ಯವಾಗಿ ಊಟ, ತಿಂಡಿ ತಿನಿಸು ದರ ಹಚ್ಚಿಸಬೇಕಾಗುತ್ತದೆ. ಇದರ ಹೊರೆ ಗ್ರಾಹಕರ ಮೇಲೂ ಆಗುತ್ತದೆ. ಒಂದು ಕಡೆ ಗ್ಯಾಸ್ ದರವನ್ನೂ ಹೆಚ್ಚಿಸಲಾಗಿದೆ. ಈಗಾಗಲೇ ಜಿಎಸ್ಟಿ ಪ್ರಮಾಣವು ಹೆಚ್ಚಿದೆ. ಎರಡು ಕಡೆಯಿಂದ ಸರ್ಕಾರ ಹೋಟೆಲ್ ಉದ್ಯಮದಿಂದ ಆದಾಯ ಸಂಗ್ರಹಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಾಣಿಜ್ಯ ಸಿಲಿಂಡರ್ ಬೆಲೆ 1308 ರೂ ಹೆಚ್ಚಳ!
ಮಾರ್ಚ್ 1 ರಿಂದ ಈವರೆಗೆ ಆದ ವಾಣಿಜ್ಯ ಬಳಕೆಯ ಸಿಲಿಂದರ್ ದರ ಏರಿಕೆ ಮಾಹಿತಿ ನೀಡಿದರು. ಎರಡು ತಿಂಗಳಲ್ಲಿ ಮೊದಲ ಬಾರಿ ಇಷ್ಟೊಂದು ಹೇರಳ ಪ್ರಮಾಣದಲ್ಲಿ ಗ್ಯಾಸ್ ಬೆಲೆ ಹೆಚ್ಚಿಸಲಾಗಿದೆ ಎಂದು ಅವರು ಉದ್ಯಮದ ಭವಿಷ್ಯ ನೆನೆದು ಕಳವಳ ವ್ಯಕ್ತಪಡಿಸಿದರು.
ಮಾರ್ಚ್ 1ರಂದು ಇದೇ ಎಲ್ಪಿಜಿ ದರ 1844 ರೂ. ಹೆಚ್ಚಿದರೆ, ಅಲ್ಲಿಂದ ಒಂದು ವಾರದಲ್ಲಿ (ಮಾರ್ಚ್ 7 ರಂದು) 1959 ರೂ.ಗೆ ಜಿಗಿಯಿತು. ನಂತರ 2162 ರೂ. ಇದ್ದ ಬೆಲೆ ಇದೀಗ 993 ರೂಪಾಯಿಗೆ ಹಚ್ಚಾಗುವ ಮೂಲಕ ದರ 3152 ರೂಪಾಯಿ ತಲುಪಿದೆ. ಇಷ್ಟೊಂದು ಗರಿಷ್ಠ ಮಟ್ಟದಲ್ಲಿ ಎಲ್ಪಿಜಿ ಬೆಲೆ ಏರಿಕೆ ಆಗಿದ್ದು, ಇದೇ ಮೊದಲು ಎಂದಿರುವ ಅವರು ಕೇಂದ್ರದ ನಿರ್ಧಾರದ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಕೇಂದ್ರಕ್ಕೆ ಪಿಸಿ ರಾವ್ ಪತ್ರ, ಮನವಿ
ವಾಣಿಜ್ಯ ದರ ಹೆಚ್ಚಳ ಬೆನ್ನಲ್ಲೆ ಕೇಂದ್ರ ಸರ್ಕಾರಕ್ಕೆ ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು ಶೀಘ್ರವೇ (ಎರಡು ದಿನದಲ್ಲಿ) ಪತ್ರ ಬರೆದು ಮನವಿ ಮಾಡಲಿದ್ದಾರೆ. ವಾಣಿಜ್ಯ ಗ್ಯಾಸ್ ಮೇಲಿನ ಜಿಎಸ್ಟಿಯನ್ನು ಶೇ. 18 ರಿಂದ 5ಕ್ಕೆ ಇಳಿಸಬೇಕೆಂದು ಒತ್ತಾಯಿಸಲಿದ್ದಾರೆ. ಗೃಹ ಬಳಕೆ ಗ್ಯಾಸ್ನಷ್ಟೇ (5%) ವಾಣಿಜ್ಯ ಬಳಕೆ ಸಿಲಿಂಡರ್ಗೆ ಜಿಎಸ್ಟಿ ವಿಧಿಸಿದರೆ ಸುಮಾರು 350-400 ರೂಪಾಯಿವರೆಗೆ ಬೆಲೆ ಇಳಿಕೆ ಆಗುತ್ತದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಅನುಕೂಲವಾಗುತ್ತದೆ. ಹೆಚ್ಚಿನ ತೆರಿಗೆ ಹಾಗೂ ಬೆಲೆ ಹೆಚ್ಚಳದಿಂದ ಅತ್ಯಧಿಕ ಹಣ ಹೋಟೆಲ್ ಉದ್ಯಮದಿಂದ ಕಸಿದುಕೊಂಡರೆ ನಮ್ಮ ಗತಿ ಏನು? ಎಂದು ಅವರು ಪ್ರಶ್ನಿಸಿದ್ದಾರೆ. ಪರಿಸ್ಥಿತಿ ವಿವರಿಸಿ ಕೇಂದ್ರಕ್ಕೆ ಅವರು ಪತ್ರ ಬರೆಯುವುದಾಗಿ ಮಾಹಿತಿ ನೀಡಿದ್ದಾರೆ.












Click it and Unblock the Notifications