ವಿನೋದ ಅಸೂಟಿಯವರಿಗೆ ಟಿಕೇಟ್: ರಾಜೀನಾಮೆ ನೀಡಿದ ಕೆ.ಎನ್.ಗಡ್ಡಿ
ಧಾರವಾಡ, ಏಪ್ರಿಲ್ 17 : ಕಾಂಗ್ರೆಸ್ , ಬಿಜೆಪಿ, ಜೆಡಿಎಸ್ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2018 ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಟಿಕೇಟ್ ವಂಚಿತ ಅಭ್ಯರ್ಥಿಗಳು ಬಂಡಾಯವೇಳುತ್ತಿರುವುದು ಒಂದೆರೆಡು ದಿನಗಳಿಂದ ಸಾಮಾನ್ಯವಾಗಿದೆ. ಇತ್ತ ತಂತಮ್ಮ ಪಕ್ಷಗಳ ಅಭ್ಯರ್ಥಿಗಳು ಬಂಡಾಯವೇಳುತ್ತಿದ್ದಂತೆ ಪಕ್ಷದ ಮುಖಂಡರುಗಳು ಓಲೈಕೆಗೆ ಮುಂದಾಗುತ್ತಿದ್ದರೆ. ಇನ್ನು ಕೆಲವೆಡೆ ಟಿಕೇಟ್ ವಂಚಿತ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸುತ್ತೇವೆ ಎಂದು ತಮ್ಮ ಬೆಂಬಲಿಗರಿಗೆ ಆಶ್ವಾಸನೆ ನೀಡುತ್ತಿದ್ದಾರೆ.
ಇಲ್ಲೂ ಹಾಗೇ ಆಗಿದೆ. ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ವಿನೋದ ಅಸೂಟಿಯವರಿಗೆ ನೀಡಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಟಿಕೆಟ್ ಆಕಾಂಕ್ಷಿ ಕೆ.ಎನ್.ಗಡ್ಡಿ ಅವರು ರಾಜೀನಾಮೆ ನೀಡಿದ್ದಾರೆ. ಗಡ್ಡಿ ಅವರು ರಾಜೀನಾಮೆ ಕೊಡುತ್ತಿದ್ದಾರೆ ಎಂಬ ಸುದ್ದಿ ಅರಿತ ಅವರ ಬೆಂಬಲಿಗರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಎಲ್ಲವೂ ಸರಿಯಾಗುತ್ತದೆ ಎಂದು ಗಡ್ಡಿ ಅವರ ಕಾಲಿಗೆ ಬಿದ್ದು, ಬೇಡಿಕೊಂಡಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಗಡ್ಡಿ ಅವರು ಈ ಹಿಂದೆ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಕಾಂಗ್ರೆಸ್ ಟಿಕೇಟ್ ಸಿಕ್ಕರೆ ಗೆಲುವು ಖಚಿತ ಎನ್ನುವ ಲೆಕ್ಕಾಚಾರದಲ್ಲಿದ್ದರು. ಆದರೆ, ಕಾಂಗ್ರೆಸ್ ಅವರನ್ನು ಕಡೆಗಣಿಸಿ ಅಸೂಟಿಯವರಿಗೆ ಟಿಕೇಟ್ ನೀಡಿದ್ದರಿಂದ ಗಡ್ಡಿ ಅಸಮಾಧಾನಗೊಂಡಿದ್ದಾರೆ.
ಅಲ್ಲದೆ ಕಾಂಗ್ರೆಸ್ ಪಕ್ಷ ಸಂಘಟನೆಗೆ ಕಳೆದ 30 ವರ್ಷಗಳಿಂದ ಹಗಲಿರುಳು ದುಡಿದಿದ್ದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಟಿಕೆಟ್ ಕೊಡುವ ಭರವಸೆ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡು ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಕಳೆದ ಮೂರು ಚುನಾವಣೆಗಳಲ್ಲಿ ನಾನು ಸೋತಿದ್ದೆ. ಅದಕ್ಕೆ ಕಾರಣಗಳು ಬೇರೆ ಇದ್ದವು. ಆದರೆ ಈ ಚುನಾವಣೆಯಲ್ಲಿ ಅನುಕಂಪದ ಆಧಾರ ಹಾಗೂ ಎಲ್ಲ ಸಮಾಜದವರು ನನ್ನನ್ನೇ ಬೆಂಬಲಿಸಿ ಗೆಲ್ಲಿಸುತ್ತೇವೆಂದು ಭರವಸೆ ನೀಡಿದ್ದರು. 15 ವರ್ಷಗಳಿಂದ ನಾನು ಸೋತಿದ್ದರೂ, ಪಕ್ಷದ ಸಂಘಟನೆ ಬಿಟ್ಟಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ನನ್ನ ಬೆಂಬಲಿಗರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧನಾಗಿರುತ್ತೇನೆ. ಯಾವುದೇ ಕಾರಣಕ್ಕೂ ಬೇಸತ್ತಿರುವ ನನ್ನ ಬೆಂಬಲಿಗರನ್ನು ಬಿಟ್ಟುಕೊಡುವುದಿಲ್ಲ. ಅವರ ನಿರ್ಧಾರವೇ ಅಂತಿಮ. ಅವರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ ಕ್ಷೇತ್ರದ ಎಲ್ಲ ಜನರ, ನನ್ನ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.