ಬಿಜೆಪಿ ಭದ್ರಕೋಟೆ ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರ ಛಿದ್ರವಾಯಿತೇ..?
ಬಿಜೆಪಿ ಭದ್ರಕೋಟೆ ಎಂದೇ ಹೆಸರು ವಾಸಿಯಾಗಿದ್ದ ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರ ಇಂದು ಒಡೆದ ಮನೆಯಂತಾಗಿದೆ. ಜಗದೀಶ್ ಶೆಟ್ಟರ್, ಅರವಿಂದ್ ಬೆಲ್ಲದ ಮತ್ತು ನವಲಗುಂದ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲ ಕ್ಷೇತ್ರದಲ್ಲಿ ಬಂಡಾಯದ ಬಿಸಿ ಕಾಡುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಬಿಜೆಪಿ ಅಳಿವು ಉಳಿವಿನ ಚಿಂತೆಯಲ್ಲಿ ಪಕ್ಷದ ನಾಯಕರಿದ್ದಾರೆ.
ಹೌದು, ಒಂದು ಕಾಲದಲ್ಲಿ ಬಿಜೆಪಿ ಭದ್ರ ಕೋಟೆಯಾಗಿದ್ದ ಹುಬ್ಬಳ್ಳಿ-ಧಾರವಾಡದ 7 ವಿಧಾನಸಭಾ ಕ್ಷೇತ್ರದಲ್ಲಿ ಈಗ ಬಿಜೆಪಿ ಉಳಿವಿನ ಪ್ರಶ್ನೆ ಕಾಡುತ್ತಿದೆ. ಒಂದು ಕಡೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕಳೆದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಕೊಟ್ಟಿದ್ದ ಡಾ. ಮಹೇಶ್ ನಾಲವಡ್ ಮತ್ತೆ ಕಾಂಗ್ರೆಸ್ ನಿಂದ ಟಿಕೆಟ್ ತಂದಿದ್ದಾರೆ. ಹೀಗಾಗಿ ಮತ್ತೆ ಶೆಟ್ಟರ್ ಅವರಿಗೆ ಗೆಲುವಿನ ಚಿಂತೆ ಕಾಡುತ್ತಿದೆ. ಆದರೆ ಸಂಪೂರ್ಣ ಜಿಲ್ಲೆಯ ಹೊರೆ ಹೊತ್ತಿರುವ ನಾಯಕರಿಗೆ ಉಳಿದ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳ ಚಿಂತೆ ಕಾಡುತ್ತಿದೆ.
ಎಲ್ಲೆಲ್ಲಿ ಬಂಡಾಯ?
ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧೆ ಮಾಡಿ ಬಿಜೆಪಿ ಸೋಲಿಗೆ ಕಾರಣವಾಗಿದ್ದ ಎಸ್ಐ ಚಿಕ್ಕನಗೌಡ್ ಅವರು ಈ ಸಾರಿ ಬಿಜೆಪಿ ಯಿಂದ ಟಿಕೆಟ್ ಪಡೆದಿದ್ದಾರೆ. ಹೀಗಾಗಿ ಈ ಕ್ಷೇತ್ರದ ಮತ್ತೊಬ್ಬ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿ ಎಮ್.ಆರ್. ಪಾಟೀಲ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಚಿಂತೆಯಲಿದ್ದಾರೆ. ಅಲ್ಲದೇ ಪಾಟೀಲ್ ಅವರಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಕೆಲ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ನಾಯಕರು ಬಿಜೆಪಿ ಗೆ ಗುಡ್ ಬೈ ಹೇಳುವ ಸಾಧ್ಯತೆ ಹೆಚ್ಚಿದೆ.

ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಬಂಡಾಯದ ಬಿಸಿ ಹೆಚ್ಚಾಗಿದೆ. ಒಂದು ಕಡೆ ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧೆ ಮಾಡಿ, 24 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದ ಶಂಕ್ರಣ್ಣ ಬಿಜವಾಡ ಕೂಡ ಈ ಸಾರಿ ಟಿಕೆಟ್ ತಮಗೇ ಸಿಗುವ ನಂಬಿಕೆಯಲ್ಲಿದ್ದರು. ಆದರೆ ಆರ್ಎಸ್ಎಸ್ ನಲ್ಲಿ ಕಳೆದ 20 ವರ್ಷಗಳಿಂದ ಗುರುತಿಸಿಕೊಂಡಿದ್ದ ಚಂದ್ರಶೇಖರ್ ಅವರು ಟಿಕೆಟ್ ಪಡೆದಿದ್ದಾರೆ. ಇದರಿಂದ ಈ ಕ್ಷೇತ್ರದಲ್ಲಿ ಶಂಕ್ರಣ್ಣ ಬಿಜವಾಡ ಪಕ್ಷೇತರವಾಗಿ ನಿಲ್ಲುವ ಚಿಂತೆಯಲಿದ್ದಾರೆ. ಇತ್ತ ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ವೀರಭದ್ರಪ್ಪಾ ಹಾಲಹರವಿ ಕೂಡ ಟಿಕೆಟ್ ಕೈ ತಪ್ಪಿದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಒಂದು ಕಡೆ ಕಲಘಟಗಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದಿರುವ ಮಹೇಶ್ ಟೆಂಗಿನಕಾಯಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ರೆ, ಮತ್ತೊಂದೆಡೆ ಟಿಕೆಟ್ ವಂಚಿತ ನಿಂಬಣ್ಣವರ ಬಂಡಾಯಕ್ಕೆ
ಬಿಜೆಪಿ ಹೈ ಕಮಾಂಡ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ. ಹೀಗಾಗಿ ಟಿಕೆಟ್ ಮತ್ತೆ ನಿಂಬಣ್ಣವರ ಪಾಲಾಗುವ ನೀರಿಕ್ಷೆಯಲಿದ್ದಾರೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದಲ್ಲಿ, ನಿಂಬಣ್ಣವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಾಗಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
2004 ರಲ್ಲಿ ಬಿಜೆಪಿಯಿಂದ ಗೆದ್ದು ಬೀಗಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಸೀಮಾ ಮಸೂತಿ ಕೂಡ ಟಿಕೆಟ್ ಕೈತಪ್ಪಿದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ,
ಜೆಡಿಎಸ್ ನಿಂದ ವಲಸೆ ಬಂದಿರುವ ಅಮೃತ್ ದೇಸಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿರುವುದು ಇಲ್ಲಿನ ಕೆಲ ಪ್ರಮುಖರಿಗೆ ಅಸಮಾಧಾನ ತಂದಿದೆ. ಹೀಗಾಗಿ ಇಲ್ಲಿನ ನಾಯಕರನ್ನು ಅಮೃತ್ ದೇಸಾಯಿ ಅವರು ಹೇಗೆ ಸಮಾಧಾನಪಡಿಸುತ್ತಾರೆ ಎಂಬುದರಲ್ಲಿದೆ ಗೆಲುವಿನ ಲೆಕ್ಕಾಚಾರ.
ಸೆಂಟ್ರಲ್, ನವಲಗುಂದ, ಹುಬ್ಬಳ್ಳಿ-ಧಾರವಾಡ, ಪಶ್ಚಿಮ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಒಟ್ಟು ಏಳು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಂಡಾಯ ಆರಂಭವಾಗಿದೆ. ಹೀಗಾಗಿ ಈ ಬಂಡಾಯದ ಬಿಸಿ ಚುನಾವಣೆಯಲ್ಲಿ ಪಕ್ಷದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವುದು ಖಂಡಿತ.












Click it and Unblock the Notifications