ಧಾರವಾಡದ ನೆರೆ ಸಂತ್ರಸ್ತರಿಗೆ ಆಹಾರ ಕಿಟ್ಗಳ ಆಸರೆ
ಧಾರವಾಡ, ಆಗಸ್ಟ್ 31 : ಧಾರವಾಡ ಜಿಲ್ಲೆಯಲ್ಲಿ ನೆರೆ ಸಂತ್ರಸ್ತರಿಗೆ ಆಸರೆಯಾಗಲು ಜಿಲ್ಲಾಡಳಿತ ಆಹಾರದ ಕಿಟ್ಗಳನ್ನು ವಿತರಣೆ ಮಾಡುತ್ತಿದೆ. 33,852 ಆಹಾರ ಧಾನ್ಯಗಳ ಕಿಟ್ ಸಿದ್ಧಪಡಿಸಲಾಗಿದ್ದು, ವಿತರಣೆ ಕಾರ್ಯ ಆರಂಭವಾಗಿದೆ.
ಜಿಲ್ಲಾಡಳಿತ ಆಹಾರಧಾನ್ಯಗಳ ಕಿಟ್ ವಿತರಣೆ ಮಾಡುತ್ತಿದೆ. ಹುಬ್ಬಳ್ಳಿಯ ಅಮರಗೋಳ ಎ. ಪಿ. ಎಂ. ಸಿ. ಆವರಣದ ಗೋದಾಮುಗಳಲ್ಲಿ ಆಹಾರ ಧಾನ್ಯದ ಪೊಟ್ಟಣಗಳನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ಬೇಡಿಕೆಗಳಿಗೆ ಅನುಸಾರವಾಗಿ ಜಿಲ್ಲೆಯ ತಾಲೂಕುಗಳಿಗೆ ಕಿಟ್ ಸರಬರಾಜು ಮಾಡಲಾಗುತ್ತಿದೆ.
ಪ್ರಕೃತಿ ವಿಕೋಪಕ್ಕೆ ಒಳಗಾದ ಸಂತ್ರಸ್ತರಿಗೆ ನೀಡುತ್ತಿರುವ ವಿಶೇಷ ಆಹಾರ ಕಿಟ್ ಇದಾಗಿದೆ. ಕಿಟ್ನಲ್ಲಿ 10ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿ ಬೇಳೆ, 1 ಕೆ.ಜಿ ಸಕ್ಕರೆ, 1 ಕೆ.ಜಿ. ಅಯೋಡಿನ್ ಯುಕ್ತ ಉಪ್ಪು, 1ಲೀಟರ್ ತಾಳೆ ಎಣ್ಣೆ ಹಾಗೂ ಪ್ರತ್ಯೇಕವಾಗಿ 5 ಲೀಟರ್ ಸೀಮೆ ಎಣ್ಣೆಯ ಕ್ಯಾನ್ ನೀಡಲಾಗುತ್ತಿದೆ.

ಪೊಟ್ಟಣ ತಯಾರಿಕೆ ಕಾರ್ಯದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಹಾಗೂ ಕರ್ನಾಟಕ ಆಹಾರ ಸರಬರಾಜು ನಿಗಮದ ವ್ಯವಸ್ಥಾಪಕಿ ರಾಜಶ್ರೀ ಜೈನಾಪುರ ನೇತೃತ್ವದಲ್ಲಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಹಾಗೂ 80 ಕ್ಕೂ ಹೆಚ್ಚು ಕಾರ್ಮಿಕರು ಕಿಟ್ ತಯಾರು ಮಾಡುತ್ತಿದ್ದಾರೆ.
ಧಾರವಾಡ ತಾಲೂಕಿಗೆ 6635, ಹುಬ್ಬಳ್ಳಿ ಶಹರಕ್ಕೆ 7200, ಹುಬ್ಬಳ್ಳಿ ಗ್ರಾಮೀಣಕ್ಕೆ 6151, ಕಲಘಟಗಿಗೆ 1875, ನವಲಗುಂದಕ್ಕೆ 3995, ಅಳ್ನಾವರಕ್ಕೆ 2300, ಕುಂದಗೋಳಕ್ಕೆ 4692, ಅಣ್ಣಿಗೇರಿಗೆ 1304 ಸೇರಿ ಒಟ್ಟು 33,852 ಆಹಾರ ಕಿಟ್ಗಳಿಗೆ ಬೇಡಿಕೆ ಸಲ್ಲಿಕೆಯಾಗಿದೆ.
ಕಿಟ್ ತಯಾರು ಮಾಡಲು 350 ಮೆಟ್ರಿಕ್ ಟನ್ ಅಕ್ಕಿಯನ್ನು ಆಹಾರ ನಿಗಮದ ಉಗ್ರಾಣದಿಂದ ಪಡೆಯಲಾಗಿದೆ. ಉಳಿದಂತೆ ಟೆಂಡರ್ ಆಹ್ವಾನಿಸಿ 350 ಕ್ವಿಂಟಾಲ್ ತೊಗರಿ ಬೇಳೆ, 350 ಕ್ವಿಟಾಲ್ ಸಕ್ಕರೆ, 350 ಕ್ವಿಂಟಾಲ್ ಉಪ್ಪು ಖರೀದಿ ಮಾಡಲಾಗಿದೆ.

ಕರ್ನಾಟಕ ಬೀಜ ನಿಗಮದಿಂದ 35000 ಲೀಟರ್ ತಾಳೆ ಎಣ್ಣೆ ಖರೀದಿಸಲಾಗಿದೆ. ಕಳೆದ ಎಂಟು ದಿನಗಳಿಂದ ಪ್ಯಾಕಿಂಗ್ ಕಾರ್ಯ ನಡೆಯುತ್ತಿದೆ. ಸುಮಾರು 1,70,000 ಲೀಟರ್ ಸೀಮೆಯಣ್ಣೆಯನ್ನು ತಲಾ 5 ಲೀಟರ್ ಕ್ಯಾನ್ಗಳ ಮೂಲಕ ವಿತರಿಸಲಾಗುತ್ತಿದೆ.
ಇದಕ್ಕಾಗಿ 392 ಮಾರ್ಗಗಳನ್ನು ಗುರುತಿಸಲಾಗಿದೆ. ಈಗಾಗಲೇ 5130 ಕಿಟ್ ಪೂರೈಸಲಾಗಿದೆ. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಂತ್ರಸ್ತರಿಗೆ ವಿತರಿಸಲಿದ್ದಾರೆ.












Click it and Unblock the Notifications