Get Updates
Get notified of breaking news, exclusive insights, and must-see stories!

Shanti Sagara: ಬತ್ತುತ್ತಿದೆ ಏಷ್ಯಾದ 2ನೇ ಅತಿ ದೊಡ್ಡ ಕೆರೆ.! ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ

ದಾವಣಗೆರೆ, ಫೆಬ್ರವರಿ, 20: ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದ್ದು, ನೀರಿಗೆ ಹಾಹಾಕಾರ ಎದುರಾಗಿದೆ. ಕೃಷಿಗಷ್ಟೇ ಅಲ್ಲ, ಕುಡಿಯುವ ನೀರಿಗೂ ತಾತ್ವರ ಎದುರಾಗಿದೆ. ಏಷ್ಯಾಖಂಡದ ಎರಡನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆ ಹೊಂದಿರುವ ಸೂಳೆಕೆರೆ ಬಿಸಿಲಿನ ಬೇಗೆ ಹೆಚ್ಚಳವಾಗುತ್ತಿದ್ದಂತೆ ಇದರ ಒಡಲು ಬರಿದಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರಿನ ಸೆಲೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ, ಚಿತ್ರದುರ್ಗಕ್ಕೆ ಸೂಳೆಕೆರೆ ಅಥವಾ ಶಾಂತಿಸಾಗರದ ನೀರೇ ಆಧಾರ. ಆದರೆ ಬರ ಭೀಕರತೆ ಎಷ್ಟೊಂದು ಸಮಸ್ಯೆ ತಂದಿಟ್ಟಿದೆ ಎಂದರೆ ಬೆಳೆದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ವರ್ಷವಂತೂ ಭೀಕರ ಬರಗಾಲದ ಛಾಯೆ ಮೂಡಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಿಸಿಲನ ಧಗೆಗೆ ನೀರು ಬತ್ತುತ್ತಿದೆ. ಕೆರಗಳು ಸಂಪೂರ್ಣವಾಗಿ ಬರಿದಾಗುತ್ತಿವೆ. ಜಿಲ್ಲೆಯಲ್ಲಿನ ನೂರು ಕೆರೆಗಳು ಬತ್ತಿ ಹೋಗಿವೆ ಎಂದರೆ ಇದು ಬರಗಾದ ಭೀಕರತೆಗೆ ಸಾಕ್ಷಿಯಾಗಿದೆ.

Shanti Sagara: Asias 2nd largest lake is reached drying up

ಶಾಂತಿಸಾಗರ ಅಥವಾ ಸೂಳೆಕೆರೆ ನೀರನ್ನೇ ಹೆಚ್ಚಾಗಿ ಚನ್ನಗಿರಿ ತಾಲೂಕಿನ ರೈತರು ಹಾಗೂ ಜನರು ಅವಲಂಬಿಸಿದ್ದಾರೆ. ಈ ಕೆರೆಯು ಬತ್ತಿ ಹೋಯ್ತೆಂದರೆ ಜನರಿಗೆ ಕುಡಿಯು ನೀರು ಸಿಗುವುದು ಕಷ್ಟವಾಗುತ್ತದೆ. ಕೃಷಿಗಾಗುವ ಸಮಸ್ಯೆ ಹೇಳತೀರದ್ದು. ಹೆಚ್ಚಾಗಿ ಅಡಿಕೆ ಬೆಳೆಗಾರರ ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತಿದೆ. ಈ ಬಾರಿ ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಹರಸಾಹಸಪಡುವಂತಾಗಿದೆ.

ಒಂದೆಡೆ ಭದ್ರಾ ಡ್ಯಾಂ ನೀರು ಸಹ ಸಮರ್ಪಕವಾಗಿ ಸಿಗುತ್ತಿಲ್ಲ. ಸೂಳೆಕೆರೆಗೆ ಭದ್ರಾ ನಾಲೆಯ ಮೂಲಕ ಬರುವ ನೀರು ಬರುವುದಿಲ್ಲ. ರೈತರಿಗೆ ಸಮೃದ್ಧಿಯಾಗಿ ನೀರು ಸಿಕ್ಕ ಬಳಿಕವಷ್ಟೇ ಸೂಳೆಕೆರೆ ನೀರನ್ನು ಹರಿಸಲಾಗುತ್ತದೆ. ಭದ್ರಾ ಡ್ಯಾಂನಲ್ಲಿ ನೀರಿನ ಸಂಗ್ರಹ ಕಡಿಮೆ ಇರುವ ಕಾರಣಕ್ಕೆ ಇದು ಸಹ ಅಸಾಧ್ಯ. ಭದ್ರಾ ಡ್ಯಾಂ ನೀರು ಸೂಳೆಕೆರೆಗೆ ಈ ಬೇಸಿಗೆಯಲ್ಲಿ ಬರುವುದಿಲ್ಲ. ಅವಧಿಗೆ ಮುನ್ನ ಮಳೆಯಾದರೆ ರೈತರ ಬದುಕು ಸ್ವಲ್ಪ ಮಟ್ಟಿಗೆ ಚೇತರಿಕೆಯಾಗುತ್ತದೆ. ಇಲ್ಲದಿದ್ದರೆ ಸಮಸ್ಯೆ ತೀವ್ರತೆ ಊಹಿಸಲು ಆಗದು.

ಸಂಪೂರ್ಣ ಬರಿದಾಗುವ ಆತಂಕ: ಸೂಳೆಕೆರೆ ನೀರು ಕುಡಿಯಲೂ ಬೇಕು, ತೋಟ ಉಳಿಸಿಕೊಳ್ಳಲೂ ಬೇಕು ಎಂಬುದು ರೈತರ, ಜನರ ಅಭಿಮತವಾಗಿದೆ. ಈ ಹಪಾಹಪಿತನದಿಂದ ಶಾಂತಿಸಾಗರ ಕೆರೆ ಸಂಪೂರ್ಣವಾಗಿ ಖಾಲಿಯಾಗುವ ಆತಂಕವೂ ಎದುರಾಗಿದೆ. ತೋಟಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸೂಳೆಕೆರೆ ಹಿನ್ನೀರು ಭಾಗದಲ್ಲಿ ನೂರಾರು ಪಂಪ್‌ಸೆಟ್‌ಗಳನ್ನು ಅಳವಡಿಸಲಾಗಿದೆ. ನಿರಂತರ ತೋಟಗಳಿಗೆ ನೀರು ಹಾಯಿಸಲಾಗುತ್ತಿದೆ.

ಕೊಳವೆ ಬಾವಿ ಬರಿದಾಗಿ ರೈತರಿಗೆ ಈ ನೀರಿನ ಅವಲಂಬನೆ ಅನಿವಾರ್ಯವಾಗಿದ್ದು, ತೋಟ ನೀರಿಲ್ಲದೇ ಬದುಕು ಮೂರಾಬಟ್ಟೆಯಾಗುವ ಆತಂಕದಲ್ಲಿದ್ದಾರೆ. ಈಗ ತೋಟ ಉಳಿಸಿಕೊಳ್ಳೋಣ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಇದು ಸಮಸ್ಯೆ ಮತ್ತಷ್ಟು ಜಟಿಲವಾಗುವಂತೆ ಮಾಡಿದೆ. ಗ್ರಾಮೀಣ ಭಾಗದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಈ ಬಾವಿಗಳಲ್ಲಿನ ನೀರು ಬತ್ತಿ ಹೋಗಿದೆ. ಅಂತರ್ಜಲ ಮಟ್ಟವೂ ದಿನ ಕಳೆದಂತೆ ಕುಸಿಯುತ್ತಿದೆ. ಕೆರೆಯ ಹಿನ್ನೀರಿಗೆ ಮೋಟಾರ್ ಅಳವಡಿಸಿಕೊಂಡು ತೋಟ ರಕ್ಷಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಚನ್ನಗಿರಿ ತಾಲೂಕಿನ ದೇವರಹಳ್ಳಿ, ಹಿರೇಉಡ, ಚಿಕ್ಕದೇವರಹಳ್ಳಿ, ಕೊಂಡದಹಳ್ಳಿ, ಚಿನ್ನಾಪುರ, ಕಗತೂರು, ಬುಳುಸಾಗರ, ಆಕಳಕಟ್ಟೆ, ಗುಳ್ಳಳ್ಳಿ ಸೇರಿದಂತೆ ಸುಮಾರು 200 ಪಂಪ್ ಸೆಸ್‌ಗಳು ಕೆರೆಯ ಹಿನ್ನೀರು ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ಭದ್ರಾ ನಾಲೆಯ ನೀರನ್ನು ಶಾಂತಿಸಾಗರಕ್ಕೆ ಕೂಡಲೇ ಹರಿಸಬೇಕು. ಆಗ ರೈತರು ಉಸಿರಾಡಬಹುದು, ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಬಹುದು ಎನ್ನುತ್ತಾರೆ ಚನ್ನಗಿರಿ ಭಾಗದ ರೈತರು.

ಕೇವಲ ಚನ್ನಗಿರಿ ಮಾತ್ರವಲ್ಲ, ಚಿತ್ರದುರ್ಗ ಜಿಲ್ಲೆಯ ಜನರ ಪಾಡಂತೂ ಹೇಳತೀರದ್ದಾಗುತ್ತದೆ. ಯಾಕೆಂದರೆ ಚಿತ್ರದುರ್ಗ, ಹೊಳಲ್ಕೆರೆ ಭಾಗದ ಜನರಿಗೂ ಇದೇ ಜೀವ ಸೆಲೆ. ಸದ್ಯ ಸಂಗ್ರಹವಿರುವ ನೀರು ಕೇವಲ 30 ದಿನಗಳಿಗಷ್ಟೇ ಆಗಲಿದೆ. ಒಂದು ತಿಂಗಳ ಬಳಿಕ ಏನು ಮಾಡಬೇಕು ಎಂಬ ಚಿಂತೆಯೂ ಕಾಡಲಾರಂಭಿಸಿದೆ. ಜೂನ್‌ವರೆಗೆ ಕುಡಿಯುವ ನೀರು ಪೂರೈಸಲು 0.54 ಟಿಎಂಸಿ ನೀರು ಅವಶ್ಯಕವಾಗಿ ಬೇಕು. ಭದ್ರಾ ನಾಲೆಯಿಂದ ನೀರು ಹರಿಸಿದರೆ ಮಾತ್ರ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ. ಇಲ್ಲದಿದ್ದರೆ ಸಂಕಷ್ಟ ದಿನಗಳು ಎದುರಾಗುವುದು ಖಚಿತ.

ಶಾಂತಿಸಾಗರದಿಂದ ಬೇರೆ ಜಿಲ್ಲೆಗಳಿಗೆ ಹೋಗುವ ನೀರಿನ ಪ್ರಮಾಣ ನಿಗದಿ ಮಾಡಬೇಕು. ಎಷ್ಟು ಹೋಗಬೇಕು ಎಂಬ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸ್ಥಳೀಯವಾಗಿ ಸಮಸ್ಯೆಗಳು ಸಾಕಷ್ಟಿದ್ದು, ಕುಡಿಯುವ ನೀರಿಗೂ ಸಮಸ್ಯೆಯಾಗಲಿದೆ. ಮೊದಲು ಸ್ಥಳೀಯವಾಗಿ ಆದ್ಯತೆ ನೀಡಬೇಕು. ಆಮೇಲೆ ಬೇರೆ ಜಿಲ್ಲೆಯವರಿಗೆ ನೀಡಲಿ ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.

ಬರಗಾಲದಲ್ಲಿ ನೀರು ಹರಿಸಲು ತುಂಬಾನೇ ಲೆಕ್ಕಾಚಾರ ಹಾಕಲಾಗುತ್ತಿದೆ. ಪಂಪ್ ಸೆಟ್‌ಗಳ ಅಕ್ರಮ, ಸಕ್ರಮದ ಬಗ್ಗೆ ಈಗ ಚರ್ಚಿಸಲಾಗುತ್ತಿದೆ. ಈ ಹಿಂದೆಯೇ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್ ಸೆಟ್ ತೆರವುಗೊಳಿಸಿದ್ದರೆ ಈಗ ಸಮಸ್ಯೆ ಎದುರಾಗುತ್ತಿರಲಿಲ್ಲ. ಸಮಸ್ಯೆ ಬಂದಾಗ ವೆಂಕಟರಮಣ ಎಂದು ಕೊರಗುವ ಬದಲು ಮೊದಲೇ ಎಚ್ಚುತ್ತುಕೊಂಡಿದ್ದರೆ ಇಂದಿನ ಪರಿಸ್ಥಿತಿ ಸ್ವಲ್ಪವಾದರೂ ಬದಲಾಗಿರುತಿತ್ತು ಎನ್ನುತ್ತಾರೆ ರೈತರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+