ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮುನ್ನೆಲೆಗೆ: ಎಂ.ಬಿ. ಪಾಟೀಲ್ ವರ್ತನೆಗೆ ಶಿವಶಂಕರಪ್ಪ ಕೆಂಡ!
ದಾವಣಗೆರೆ, ಸೆಪ್ಟೆಂಬರ್ 4: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ್ ಹೊತ್ತಿಸಿದ ಕಿಡಿಯನ್ನು ಅವರೇ ತಣ್ಣಗಾಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಸದ್ಯಕ್ಕೆ ಇದು ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ.
ನಾನೆಲ್ಲಿಯೂ ಪ್ರತ್ಯೇಕ ಲಿಂಗಾಯತ ಧರ್ಮವಾಗಬೇಕು ಎಂಬ ಮಾತು ಹೇಳಿಲ್ಲ. ಚುನಾವಣೆ ಮುಗಿದ ಬಳಿಕ ಸಮಾಲೋಚನೆ ಮಾಡುವುದಾಗಿ ಹೇಳಿದ್ದೆ ಎಂದು ಎಂ. ಬಿ. ಪಾಟೀಲ್ ಭುಗಿಲೆದ್ದಿದ್ದ ವಿವಾದಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಈ ವಿಚಾರ ಸಾಕಷ್ಟು ವಿರೋಧ- ಪರ ಹೋರಾಟವೂ ನಡೆದಿದ್ದವು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಲಿಂಗಾಯತ ಧರ್ಮದ ಪ್ರತ್ಯೇಕ ವಿಚಾರ ಕೈಸುಡುವಂತೆ ಮಾಡಿತ್ತು.

ಶಾಮನೂರು ಶಿವಶಂಕರಪ್ಪ ಆಕ್ರೋಶ
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ತಮ್ಮದೇ ಪಕ್ಷದ ಶಾಸಕ ಎನ್ನುವುದನ್ನು ಬದಿಗೊತ್ತಿ ಎಂ.ಬಿ. ಪಾಟೀಲ್ರಿಗೆ ಟಾಂಗ್ ನೀಡಿದ್ದಾರೆ.
"ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎನ್ನುವವರು ಹೋರಾಟ ಮಾಡಲಿ. ಅವರು ಮಾಡಿಕೊಂಡರೆ ಏನೂ ಆಗಲ್ಲ. ಮತ್ತೆ ಕಚ್ಚಾಡ್ತಾರೆ, ಅದರ ಬಗ್ಗೆ ಹೆಚ್ಚು ಚರ್ಚೆ ಬೇಡ. ಅವನೇನು ಹೋಗ್ತಾನೆ, ಅವನ ಹಣೆಬರಹ, ನಾಯಕರಾಗಬೇಕು ಅಂತಾ ಬಹಳ ಜನ ಹೋಗ್ತಾರೆ. ನಾನು ಹೋಗಿ ನಾಯಕನಾಗಬೇಕೆಂದರೆ ಆಗುತ್ತಾ. ಜನರು ಆರಿಸಬೇಕು, ಒಪ್ಪಿಕೊಳ್ಳಬೇಕು ನಾಯಕರು ಅಂತ. ಜನ ಇವರು ನಮ್ಮ ನಾಯಕರು ಎಂದು ಹೇಳಿದಾಗ ನಾಯಕರಾಗುವುದು,'' ಎಂದು ಹೇಳಿದ್ದಾರೆ.
ಎಲ್ಲರೂ ಒಂದೇ ಎಂಬ ನಿಲುವು ಅಚಲ
"ವೀರಶೈವ ಲಿಂಗಾಯತರು ಎಲ್ಲರೂ ಒಂದೇ ಎಂಬ ನಿಲುವು ಅಚಲ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಚಿವ ಮುರುಗೇಶ್ ನಿರಾಣಿ ಸರಿಯಾಗಿಯೇ ಹೇಳಿದ್ದಾರೆ. ಸಾದರು, ಪಂಚಮಸಾಲಿ, ಗಾಣಿಗರು, ಬಣಜಿಗರು ಸೇರಿದಂತೆ ಎಲ್ಲಾ ಪಂಗಡದವರೂ ವೀರಶೈವ ಲಿಂಗಾಯತರೇ. ಇದರಲ್ಲಿ ಎರಡು ಮಾತಿಲ್ಲ. ಮಹಾಸಭಾ ಎಲ್ಲರನ್ನೂ ವೀರಶೈವ ಲಿಂಗಾಯತರೆಂದೇ ಪರಿಗಣಿಸುತ್ತದೆ." ಯಡಿಯೂರಪ್ಪರ ನಂತರ ಲಿಂಗಾಯತ ನಾಯಕರಾಗಲು ಎಂ. ಬಿ. ಪಾಟೀಲ್ ಹೊರಟಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಿವಶಂಕರಪ್ಪ, "ಅವರೂರಲ್ಲಿ ನಿಂತು ಗೆದ್ದು ಬರಲಿ," ಎಂದು ಕುಟುಕಿದರು.
ಇನ್ನು ಲಿಂಗಾಯತ ಧರ್ಮ ಬೇಕು ಎಂಬ ಎಸ್. ಎ. ಜಾಮದಾರ್ ಮಾತಿಗೆ ಪ್ರತಿಕ್ರಿಯೆ ನೀಡಿದ ಶಾಮನೂರು, ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಜಾಮದಾರ್ ಹೆಸರು ಹೇಳಬೇಡ. ಸವಕಲು ನಾಣ್ಯ. ಸುಮ್ಮನೆ ಮಾತನಾಡ್ತಾರೆ ಎಂದರು.
ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರು ಪಾಠ ಕಲಿಸಿದ್ದಾರೆ
ಇನ್ನು ನ್ಯಾಮತಿಯಲ್ಲಿ ಮಾತನಾಡಿದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ, "ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಕೈ ಹಾಕಿದ್ದಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಜನರು ಪಾಠ ಕಲಿಸಿದ್ದಾರೆ. ಶಾಸಕ ಎಂ. ಬಿ. ಪಾಟೀಲ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಎತ್ತಿದ್ದರು. ಮತ್ತೆ ಈ ಬಗ್ಗೆ ಪ್ರಸ್ತಾಪ ಮಾಡಿರುವುದು ಸರಿಯಲ್ಲ. ಅಖಂಡ ವೀರಶೈವ ಲಿಂಗಾಯತ ಸಮುದಾಯ ಬೇಕು. ಪ್ರತ್ಯೇಕ ಧರ್ಮದ ಅವಶ್ಯಕತೆ ಇಲ್ಲ. ಇದೇ ರೀತಿ ಮಾತನಾಡಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ,'' ಎಂದಿದ್ದಾರೆ.

ಯಡಿಯೂರಪ್ಪ ಸೈಡ್ಲೈನ್ ಮಾಡಿಲ್ಲ
"ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ಮಾಧ್ಯಮಗಳಲ್ಲಿ ತಪ್ಪಾಗಿ ಬಿಂಬಿಸಲಾಗುತ್ತಿದೆ. ಯಡಿಯೂರಪ್ಪರನ್ನು ಸೈಡ್ಲೈನ್ ಮಾಡಿದರು, ಜಗದೀಶ್ ಶೆಟ್ಟರ್ರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬುದು ಶುದ್ಧ ಸುಳ್ಳು," ಎಂದು ರೇಣುಕಾಚಾರ್ಯ ತಿಳಿಸಿದರು.
"ಮುಂದಿನ ಚುನಾವಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದು, ಯಾರು ಮುಖ್ಯಮಂತ್ರಿ ಆಗಿರುತ್ತಾರೋ ಅವರ ನೇತೃತ್ವದಲ್ಲಿ ಹೋಗುವುದು ಸಹಜ. ಯಡಿಯೂರಪ್ಪರ ಮಾರ್ಗದರ್ಶನವೂ ಇರುತ್ತದೆ," ಎಂದಿದ್ದಾರೆ.Recommended Video

ಪಕ್ಷ ಕಟ್ಟಲು ಯಡಿಯೂರಪ್ಪ ಕೊಡುಗೆ
"ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ನಿಯಂತ್ರಣಕ್ಕೆ ಹಾಗೂ ಅಭಿವೃದ್ಧಿಯಂತಹ ಒಳ್ಳೆಯ ಕೆಲಸ ಮಾಡಿದ್ದಾರೆ. ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೆಚ್ಚಿಕೊಂಡಿದ್ದಾರೆ. ಯಡಿಯೂರಪ್ಪರ ಮಾರ್ಗದರ್ಶನ ಪಡೆಯಲಾಗುತ್ತದೆ. ಹಾಗೆಂದ ಮಾತ್ರಕ್ಕೆ ಸೈಡ್ಲೈನ್ ಮಾಡಲಾಗುತ್ತದೆ ಎಂಬ ರೀತಿಯಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ. ಯಡಿಯೂರಪ್ಪ ಪಕ್ಷ ಕಟ್ಟಲು ದೊಡ್ಡ ಕೊಡುಗೆ ನೀಡಿದ್ದಾರೆ," ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದರು.












Click it and Unblock the Notifications