ದಾವಣಗೆರೆ : ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಅರಿವು ಮೂಡಿಸಿದ ಡಿಡಿಪಿಐ
ಇಂದು ಅಂತರ್ಜಾಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನ ಮಟ್ಟ ಸುಧಾರಿಸಲು, ಬದಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು, ವಿವಿಧ ವೃತ್ತಿಗಳಲ್ಲಿ ಮುಂದೆ ಬರಲು ಅಂತರ್ಜಾಲ ಮಹತ್ವದ ಪಾತ್ರ ವಹಿಸುತ್ತಿದೆ'
ದಾವನಗೆರೆ, ಫೆಬ್ರವರಿ 07: 'ಇಂದು ಅಂತರ್ಜಾಲ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನ ಮಟ್ಟ ಸುಧಾರಿಸಲು, ಬದಕನ್ನು ಉತ್ತಮವಾಗಿ ಕಟ್ಟಿಕೊಳ್ಳಲು, ವಿವಿಧ ವೃತ್ತಿಗಳಲ್ಲಿ ಮುಂದೆ ಬರಲು ಅಂತರ್ಜಾಲ ಮಹತ್ವದ ಪಾತ್ರ ವಹಿಸುತ್ತಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಹೆಚ್ ಎಂ ಪ್ರೇಮಾ ಹೇಳಿದ್ದಾರೆ.
ದಾವಣಗೆರೆಯ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ಅಂತರ್ಜಾಲ ಪ್ರಪಂಚ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
'ಇಂದಿನ ಜ್ಞಾನ ಸ್ಫೋಟದ ಆವೇಗಕ್ಕೆ ಅಂತರ್ಜಾಲ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳು ವಿಶೇಷವಾಗಿ ಗ್ರಾಮೀಣ ಶಾಲಾ ಮಕ್ಕಳಿಗೆ ಫೆ. 6 ಮತ್ತು 7 ರಂದು ಅಂತರ್ಜಾಲ ಕುರಿತು ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ರಮದಲ್ಲಿ 1500 ಗ್ರಾಮೀಣ ವಿದ್ಯಾರ್ಥಿಗಳಿಗೆ ಅಂತರ್ಜಾಲ ಕುರಿತು ಬಾಪೂಜಿ ಸಂಸ್ಥೆಯ ನುರಿತ ಶಿಕ್ಷಕರು ತರಬೇತಿ ನೀಡುವರು.
ಅಂತರ್ಜಾಲ ಎಂದರೇನು? ಇದರ ಬಳಕೆ ಹೇಗೆ ಮಾಡುವುದು? ಗೂಗಲ್ ಸರ್ಚ್ ಮಾಡುವುದು, ಮಲ್ಟಿ ಮೀಡಿಯಾ ಎಂದರೇನು? ಸ್ಪ್ರೆಡ್ಶೀಟ್ಸ್, ಎಕ್ಸೆಲ್ ಮತ್ತು ಇತರೆ ಗಣಕಯಂತ್ರದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಈ ಕಾರ್ಯಕ್ರಮದಿಂದ ಗ್ರಾಮೀಣ ವಿದ್ಯಾರ್ಥಿಗಳೂ ಆತ್ಮವಿಶ್ವಾಸದಿಂದ ನಗರದ ಮಕ್ಕಳೊಂದಿಗೆ ಸಾಗಬಹುದು ಎಂದರು.
ಜಿಲ್ಲೆಯಲ್ಲಿ 158 ಪ್ರೌಢಶಾಲೆಗಳಿದ್ದು ಅದರಲ್ಲಿ 64 ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಪ್ರಪಂಚದ ಜ್ಞಾನವನ್ನು ಅಂಗೈಯಲ್ಲೇ ಪಡೆಯಲು ಅವಕಾಶ ಮಾಡಿಕೊಡುವ, ನಾವೀನ್ಯ ಆಲೋಚನೆಗಳಿಗೆ ಅವಕಾಶ ಮಾಡಿಕೊಡುವ ಒಟ್ಟಾರೆ ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಕ್ಕೆ ಅನುಕೂಲಕರ ಹಾಗೂ ಅನಿವಾರ್ಯವಾಗಿರುವ ಅಂತರ್ಜಾಲ ಶಿಕ್ಷಣದ ಸದುಪಯೋಗವನ್ನು ಮಕ್ಕಳು ಪಡೆದುಕೊಳ್ಳಬೇಕು. ಜೊತೆಗೆ ಮಾತೃಭಾಷೆಯೊಂದಿಗೆ ಸಂವಾದಿಯಾಗಿ ಇಂಗ್ಲಿಷನ್ನು ಕಲಿತರೆ ಉಪಯುಕ್ತ.
ಮುಂದೆ ಪರೀಕ್ಷೆಗಳೂ ಆನ್ಲೈನ್ಲ್ಲೇ ನಡೆಯುವ ದಿನವೂ ದೂರವಿಲ್ಲ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಂತರ್ಜಾಲವನ್ನು ತಮ್ಮ ಅಧ್ಯಯನಕ್ಕೆ ಪೂರಕವಾಗುವಂತೆ ಕಲಿತು, ಮುಂದೆ ಬರಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು ಹಾಗೂ ಬಾಪೂಜಿ ಸಂಸ್ಥೆ ಎಂದಿಗೂ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಿ, ಸಹಕರಿಸುತ್ತಾ ಬಂದಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ನಿರ್ದೇಶಕ ಪ್ರೊ. ವೃಷಭೇಂದ್ರಯ್ಯ ಮಾತನಾಡಿ, ಅಂತರ್ಜಾಲ ಎಂದರೆ ಒಂದು ಅದ್ಭುತ ಮಾಹಿತಿ ಸಂಗ್ರಹಕಾರ. ಇದರಲ್ಲಿನ ಅಧ್ಯಯನ ಪೂರಕ ಮಾಹಿತಿ ಪಡೆದು ವಿದ್ಯಾರ್ಥಿಗಳು ತಮ್ಮ ಆಸಕ್ತ ವಿಷಯದಲ್ಲಿ ಯಶಸ್ಸು ಸಾಧಿಸಬಹುದು. ಮನುಷ್ಯನ ಮೆದುಳಿನಂತಹ ಅದ್ಭುತ ಕಂಪ್ಯೂಟರ್ ಮತ್ತೊಂದಿಲ್ಲ. ಆದರೂ ಎಲ್ಲ ಕ್ಷೇತ್ರಗಳ ಮಾಹಿತಿ ಪಡೆಯಲು ಅಂತರ್ಜಾಲ ಇಂದು ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ಅಧ್ಯಯನಶೀಲರಾಗಲು ಪೂರಕವಾಗಿದೆ.
ವಿದ್ಯಾರ್ಥಿಗಳು ಯಾವುದು ಒಳ್ಳೆಯದು ಮತ್ತು ಕೆಟ್ಟದ್ದು ಎಂದು ಗುರುತಿಸಿ, ತಮಗೆ ಪೂರಕವಾದ ಮಾಹಿತಿ ಪಡೆದು ಕಲಿಕೆಯನ್ನು ಮುನ್ನುಗ್ಗಬೇಕು. ಸರ್ಕಾರ ವಿದ್ಯಾರ್ಥಿಗಳಿಗೆ ಅನೇಕ ಯೋಜನೆಗಳನ್ನು ನೀಡುತ್ತಿದೆ. 27 ರೀತಿಯ ವಿದ್ಯಾರ್ಥಿವೇತನ ಇದೆ. ಎಲ್ಲೆಡೆ ಆನ್ಲೈನ್ ಅರ್ಜಿ ವ್ಯವಸ್ಥೆ ಇದೆ. ನಗದುರಹಿತ ವ್ಯವಹಾರ ಜಾರಿಗೆ ಬರುತ್ತಿದೆ. ಈ ನಿಟ್ಟಿನಲ್ಲಿ ಅಂತರ್ಜಾಲ ಜ್ಞಾನ ಎಲ್ಲರಿಗೂ ಅವಶ್ಯ. ದಾವಣಗೆರೆಯ ಆನಗೋಡು ಸಮೀಪ ನಿರ್ಮಿಸಲಾಗುತ್ತಿರುವ ವಿಜ್ಞಾನ ಕೇಂದ್ರದಲ್ಲೂ ಮಕ್ಕಳಿಗೆ ಉತ್ತಮ ಅವಕಾಶಗಳು ಒದಗಿಬರಲಿವೆ ಎಂದು ಹೇಳಿದರು.