ದಿನೇಶ್ ಶೆಟ್ಟಿಯ ಭ್ರಷ್ಟಾಚಾರ ಶೀಘ್ರದಲ್ಲಿ ಬಹಿರಂಗಪಡಿಸುತ್ತೇನೆ: ದಾವಣಗೆರೆ ಮೇಯರ್
ದಾವಣಗೆರೆ, ಸೆಪ್ಟೆಂಬರ್ 18: ಮಾಜಿ ಕಾರ್ಪೊರೇಟರ್ ದಿನೇಶ್ ಶೆಟ್ಟಿ ಸೋತು ಕೆಲಸ ಇಲ್ಲದೇ ಇರುವುದರಿಂದ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದು, ಇದು ಅತಿಯಾಗಿದೆ ಎಂದು ದಾವಣಗೆರೆ ಮೇಯರ್ ಬಿ.ಜಿ ಅಜಯ್ ಕುಮಾರ್ ತಿಳಿಸಿದರು.
ದಿನೇಶ್ ಶೆಟ್ಟಿ ಯಾರಿಗೆಲ್ಲ ಡೋರ್ ನಂಬರ್ ಕೊಟ್ಟಿದ್ದಾರೆ. ತಮ್ಮ ಅನುಕೂಲಕ್ಕಾಗಿ ಎಷ್ಟು ಟೆಂಡರ್ ಬದಲಾಯಿಸಿದ್ದಾರೆ, ಕರೆದಿದ್ದಾರೆ ಎಂಬ ಪಟ್ಟಿಯೇ ಇದೆ. ಅದನ್ನು ಬಹಿರಂಗಪಡಿಸಬೇಕಾಗುತ್ತದೆ ಎಂದು ಮೇಯರ್ ಅಜಯ್ ಕುಮಾರ್ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮೇಯರ್ ಮತ್ತು ಪಾಲಿಕೆ ಆಯುಕ್ತರು ಒಪ್ಪಂದ ಮಾಡಿಕೊಂಡು ಕಮಿಷನ್ ಪಡೆಯುತ್ತಿದ್ದಾರೆ ಎಂದು ದಿನೇಶ್ ಶೆಟ್ಟಿ ಆರೋಪ ಮಾಡಿದ್ದಾರೆ. ನಾನು ಮೇಯರ್ ಆದ ಮೂರು ತಿಂಗಳಿನಿಂದ ಕೊರೊನಾ ಬಂದಿದ್ದು, ಒಂದೇ ಒಂದು ಟೆಂಡರ್ ಕರೆದಿಲ್ಲ' ಎಂದರು.

10 ವರ್ಷ ತಿಂದು ಅವರಿಗೆ ಅದೇ ಅಭ್ಯಾಸವಾಗಿದೆ
'ಯಾವುದೇ ಅಭಿವೃದ್ಧಿ ಕಾರ್ಯ ಮಾಡಲೂ ಕೊರೊನಾ ಅಡ್ಡಿಯಾಗಿದೆ. ಸುಳ್ಳು ಆರೋಪ ಮಾಡುವುದಕ್ಕಾದರೂ ಕೆಲಸ ನಡೆದಿರಬೇಕಲ್ಲ. ದಿನೇಶ್ ಶೆಟ್ಟಿ ನಗರಸಭೆ ಸದಸ್ಯನಾಗಿ ಐದು ವರ್ಷ, ಪಾಲಿಕೆ ಸದಸ್ಯನಾಗಿ 10 ವರ್ಷ ತಿಂದು ತಿಂದು ಅದೇ ಅಭ್ಯಾಸವಾಗಿದೆ. ಅದನ್ನೇ ನಮ್ಮ ಮೇಲೆ ಆರೋಪಿಸುತ್ತಿದ್ದಾರೆ' ಎಂದು ಟೀಕಿಸಿದರು.

ಮಾನನಷ್ಟ ಮೊಕದ್ದಮೆ ಹೂಡಲಾಗುವುದು
ಅವರು ಭ್ರಷ್ಟಾಚಾರ ಮಾಡಿದ್ದರೆ ಯಾಕೆ ಬಹಿರಂಗಪಡಿಸುತ್ತಿಲ್ಲ ಎಂಬ ಪ್ರಶ್ನೆಗೆ, 'ಶೀಘ್ರದಲ್ಲಿ ಬಹಿರಂಗಪಡಿಸುತ್ತೇನೆ' ಎಂದು ಮೇಯರ್ ಅಜಯ್ ಕುಮಾರ್ ಹೇಳಿದರು.
'ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದರೆ, ಮಾನನಷ್ಟ ಮೊಕದ್ದಮೆ ಹೂಡಲಾಗುವುದು. ಇಂಥವರಿಂದಲೇ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಅವರನ್ನು ಕಾಂಗ್ರೆಸ್ನಿಂದ ಹೊರ ಹಾಕಲಿ' ಎಂದು ಸಲಹೆ ನೀಡಿದರು.

ಸಮಾನ ಗೌರವ ನೀಡುವ ಪಕ್ಷ ನಮ್ಮದು
'ಸ್ಮಾರ್ಟ್ ಸಿಟಿ ಯೋಜನೆಯನ್ನು ಸಂಸದ ಜಿ.ಎಂ ಸಿದ್ದೇಶ್ವರ ಅವರು ತಂದಿಲ್ಲ ಎಂದು ಇನ್ನೊಂದು ಸುಳ್ಳು ಹೇಳಿದ್ದಾರೆ. ಮನಮೋಹನ್ಸಿಂಗ್ ಪ್ರಧಾನಿ ಆಗಿರುವಾಗ ಸ್ಮಾರ್ಟ್ ಸಿಟಿ ಯೋಜನೆ ಬಂದಿಲ್ಲ. ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ಬಂದಿದೆ. ಸಿದ್ದೇಶ್ವರ ಅವರು ನಾಲ್ಕು ಬಾರಿ ಸಂಸದರಾದವರು. ಅವರಿಂದಾಗಿ ದಾವಣಗೆರೆ ಯೋಜನೆಗೆ ಸೇರಿದೆ. ಸಂಸದರು ಸರ್ವಾಧಿಕಾರಿ ಧೋರಣೆ ತೋರುತ್ತಾರೆ ಎಂಬುದು ಕೂಡ ಸುಳ್ಳು. ಸಾಮಾನ್ಯ ಕಾರ್ಯಕರ್ತನಿಂದ ಹಿಡಿದು ಶಾಸಕರು, ಸಂಸದರು ಹೀಗೆ ಎಲ್ಲರಿಗೂ ಸಮಾನ ಗೌರವ ನೀಡುವ ಪಕ್ಷ ನಮ್ಮದು' ಎಂದು ತಿರುಗೇಟು ನೀಡಿದರು.
Recommended Video

ದೇಶದಲ್ಲಿ ಗಾಂಧಿ ಕುಟುಂಬವನ್ನು ಬಿಟ್ಟು ಕಾಂಗ್ರೆಸ್ ಗೆಲ್ಲಲಿ
'ಯಡಿಯೂರಪ್ಪರನ್ನು ಬಿಟ್ಟು ಬಿಜೆಪಿ ಗೆಲ್ಲಲಿ ಎಂದು ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬವನ್ನು ಬಿಟ್ಟು, ದೇಶದಲ್ಲಿ ಗಾಂಧಿ ಕುಟುಂಬವನ್ನು ಬಿಟ್ಟು ಕಾಂಗ್ರೆಸ್ ಮೊದಲು ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಲಿ' ಎಂದು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಗೆ ಸವಾಲೆಸೆದರು.












Click it and Unblock the Notifications