ವಾಹನ ಸವಾರರೇ ಎಚ್ಚರ: ನಿಮಯ ಉಲ್ಲಂಘಿಸಿದ್ರೆ ಮನೆಗೆ ಬರುತ್ತೆ ನೋಟಿಸ್!
ದಾವಣಗೆರೆ, ಅಕ್ಟೊಬರ್ 16: ಜಿಲ್ಲೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದರೂ ಪೊಲೀಸರು ದಂಡ ಹಾಕಿಲ್ಲ ಎಂದು ವಾಹನ ಸವಾರರು ಖುಷಿ ಪಡಬೇಕಾಗಿಲ್ಲ. ಯಾಕೆಂದರೆ ಇನ್ನು ಮುಂದೆ ನಿಯಮ ಉಲ್ಲಂಘಿಸಿದರೆ ಮನೆಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆಯು ದಾವಣಗೆರೆ ಸ್ಮಾರ್ಟ್ ಸಿಟಿ ಸಹಯೋಗದೊಂದಿಗೆ ನಗರದಲ್ಲಿ ಸಂಚಾರಿ ವ್ಯವಸ್ಥೆ ಬಲಪಡಿಸಲು ಮುಂದಾಗಿದೆ. ಇದಕ್ಕಾಗಿ ಸಿಟಿ ಸರ್ವೆಲೆನ್ಸ್ ಪದ್ಧತಿ ಅನ್ನು ಜಾರಿಗೊಳಿಸಿದೆ.
ದಾವಣಗೆರೆ ಧಾರಾಕಾರ ಮಳೆ; ಹಲವು ವರ್ಷಗಳ ನಂತರ ಕೋಡಿ ಬಿದ್ದ ಕೆರೆಗಳು ಇವೆ ನೋಡಿ
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಯಾರೇ ಸಂಚಾರಿ ನಿಯಮ ಉಲ್ಲಂಘಿಸಿದರೆ ಮನೆಗೆ ದಂಡದ ನೋಟಿಸ್ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
"ನಗರದಲ್ಲಿ 109 ಜಂಕ್ಷನ್ಗಳಲ್ಲಿ 211 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅಪರಾಧ ಪ್ರಕರಣಗಳನ್ಬು ಪತ್ತೆ ಹಚ್ಚಲು ಅನುಕೂಲವಾಗಲಿದೆ. ನಗರದ 20 ಜಂಕ್ಷನ್ಗಳಲ್ಲಿ ಪಬ್ಲಿಕ್ ಅಡ್ರೆಸ್ ಸಿಸ್ಟಮ್ಗಳು ಕಾರ್ಯ ನಿರ್ವಹಿಸಲಿದ್ದು, ಇವುಗಳು ಕಾನೂನು ಉಲ್ಲಂಘನೆಯ ಸ್ಥಳದ ಬಗ್ಗೆ ಮಾಹಿತಿ ನೀಡುತ್ತವೆ. ಅಲ್ಲದೆ ಶಬ್ದಗಳ ಮೂಲಕ ಮಾಹಿತಿ ನೀಡುತ್ತವೆ. ದಾವಣಗೆರೆ ನಗರದ 5 ಕಡೆಗಳಲ್ಲಿ ಸೈನ್ ಬೋರ್ಡ್ಗಳನ್ನು ಅಳವಡಿಸಿದ್ದು, ವೇಗದ ಮಿತಿ, ತುರ್ತು ಕರೆಗಳ ಸಂಖ್ಯೆ, ಸಂಚಾರಿ ನಿಯಮಗಳು ಹಾಗೂ ರಸ್ತೆಯ ತಿರುವುಗಳ ಬಗ್ಗೆ ಮಾಹಿತಿ ನೀಡಲಿವೆ. ದಾವಣಗೆರೆ ನಾಗರಿಕರಿಗೆ ಹಲವು ಮಾಹಿತಿಗಳನ್ನು ಮೊಬೈಲ್ ಸರ್ವೆಲೆನ್ಸ್ ನೀಡಲಿವೆ," ಎಂದು ವಿವರಿಸಿದರು.
ಮಾತು ಮುಂದುವರಿಸಿದ ಸಿ.ಬಿ.ರಿಷ್ಯಂತ್, "ಜಿಲ್ಲೆಯಲ್ಲಿ ಸಂಚಾರಿ ನಿಯಮ ಪಾಲನೆ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ಪೊಲೀಸರು ದಂಡ ವಿಧಿಸಿದರೂ ಪುನರಾವರ್ತನೆ ಆಗುತ್ತಿದೆ. ಕಳೆದ 3 ತಿಂಗಳಲ್ಲಿ 29,080 ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು, ಮನೆಗೆ ನೋಟಿಸ್ ಕಳುಹಿಸಲಾಗಿದೆ. ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಜನರು ಸಹ ಸಂಚಾರಿ ನಿಯಮ ಪಾಲನೆಗೆ ಮುಂದಾಗಬೇಕು. ಹೆಚ್ಚುತ್ತಿರುವ ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಮನೆಗೆ ದಂಡ ವಿಧಿಸಿ, ನೋಟಿಸ್ ಕಳುಹಿಸಲಾಗುತ್ತದೆ. ಜನರು ದಂಡ ಕಟ್ಟಿದ ಬಳಿಕ ಎಚ್ಚೆತ್ತುಕೊಳ್ಳುತ್ತಾರೆ," ಎಂದು ಮಾಹಿತಿ ನೀಡಿದರು.
"ನಗರದಲ್ಲಿ ಟ್ರಾಫಿಕ್ ಸಹ ಹೆಚ್ಚಾಗುತ್ತಿದೆ. ನಿಯಂತ್ರಿಸಲು ಸಹ ಹೆಚ್ಚಿನ ಒತ್ತು ನೀಡಲಾಗುವುದು. ಸಿಸಿಟಿವಿ ಅಳವಡಿಕೆ ಮಾಡಿರುವುದರಿಂದ ಬೇಕಾಬಿಟ್ಟಿಯಾಗಿ ವಾಹನ ಓಡಿಸುವವರು ಹಾಗೂ ಸಂಚಾರಿ ನಿಯಮ ಪಾಲನೆ ಮಾಡದವರನ್ನು ಬೇಗ ಗುರುತಿಸಲು ಸಾಧ್ಯವಾಗುತ್ತದೆ," ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಕಂದಾಯ ಅಧಿಕಾರಿ ಲಕ್ಷ್ಮಿ, ಪಿಆರ್ಓ ಸುನಿಲ್ ಉಪಸ್ಥಿತರಿದ್ದರು.