ಒಂದು ಗ್ರಾಮ, ಏಳು ಜನರ ಸಾವು! ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ಯಾಕೆ...?
ದಾವಣಗೆರೆ, ಜುಲೈ 10: ನಗರಕ್ಕೆ ಸಮೀಪದ ಗ್ರಾಮ ಅದು. ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತೆ. ಈ ಗ್ರಾಮದಲ್ಲಿ ಐದು ಸಾವಿರ ಜನರು ವಾಸವಾಗಿದ್ದಾರೆ. ಆದ್ರೆ, ಈ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಏಳು ಜನರ ಸಾವು.
ಅರೆರೆ.. ಅಂಥದ್ದೇನಾಯ್ತು ಅಂತೀರಾ. ಈ ಗ್ರಾಮದಲ್ಲಿ ಒಂದೇ ದಿನ ವಿವಿಧ ಕಾರಣಗಳಿಂದ ಏಳು ಮಂದಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ, ಅನಾರೋಗ್ಯ, ನವಜಾತ ಶಿಶು ಸಹ ಮೃತಪಟ್ಟಿದೆ. ಆದ್ರೆ, ಈ ಗ್ರಾಮದಲ್ಲಿ ಶವಸಂಸ್ಕಾರ ನಡೆಸಲು ರುದ್ರಭೂಮಿ ಇಲ್ಲ. ಈ ಕಾರಣಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ವಿರುದ್ಧ ಗ್ರಾಮಸ್ಥರು, ಮೃತರ ಕುಟುಂಬದವರು, ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಅಂತ್ಯಸಂಸ್ಕಾರಕ್ಕೆ ಜಾಗ ನೀಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಆ ಗ್ರಾಮ ಯಾವುದು...?
ದಾವಣಗೆರೆಯಿಂದ ಏಳೂವರೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹೊಸ ಕುಂದುವಾಡ ಗ್ರಾಮದಲ್ಲಿ ಬುಧವಾರ ರಾತ್ರಿ ವಿವಿಧ ಕಾರಣಗಳಿಂದ ಏಳು ಮಂದಿ ಕೊನೆಯುಸಿರೆಳೆದಿದ್ದಾರೆ. ನಾಲ್ವರು ವಯೋಸಹಜದಿಂದ ಮೃತಪಟ್ಟರೆ, ಮೂವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
ಎರಡು ದಿನದ ನವಜಾತ ಶಿಶು ಸಹ ಕಣ್ಣುಮುಚ್ಚಿದೆ. ಈ ಗ್ರಾಮದಲ್ಲಿ ರುದ್ರಭೂಮಿ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬರುವ ಹೊಸಕುಂದುವಾಡ ಗ್ರಾಮದವರು ಹಳೇ ಕುಂದುವಾಡ ಗ್ರಾಮದ ರುದ್ರಭೂಮಿಯಲ್ಲಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಹಳೇ ಕುಂದುವಾಡ ಗ್ರಾಮದಲ್ಲಿ ನೆರವೇರಿಸುತ್ತಿದ್ದರು. ದೇವರ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗ್ರಾಮಗಳ ನಡುವಿನ ಜಟಾಪಟಿಯಿಂದಾಗಿ ಮೃತರ ಅಂತ್ಯಕ್ರಿಯೆಗೆ ನಿರಾಕರಿಸಿದ್ದಾರೆ. ಇದರಿಂದಾಗಿ ಸಮಸ್ಯೆ ತಲೆದೋರಿದೆ.
ಮೃತರು ಯಾರು....?
ಮಾರಿಯಕ್ಕ(70), ಸಂತೋಷ (30), ಈರಮ್ಮ (60), ಸುನಿಲ್ (25), ಶಾಂತಮ್ಮ ( 65)ಬಿಮಕ್ಕ (70), ಎರಡು ದಿನದ ನವಜಾತ ಶಿಶು ಮೃತಪಟ್ಟಿದ್ದು, ಅಂತ್ಯಕ್ರಿಯೆಗೆ ಸ್ಥಳ ನೀಡುವಂತೆ ಗ್ರಾಮಸ್ಥರು, ಸಂಬಂಧಿಕರು ಒತ್ತಾಯಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆಯ ಹೊಸಕುಂದವಾಡದಲ್ಲಿ ನಡೆದಿದೆ.

ಗ್ರಾಮದಲ್ಲಿ 5000ಕ್ಕೂ ಹೆಚ್ಚು ಜನರು ವಾಸವಿದ್ದು, ಇದುವರೆಗೂ ಪಕ್ಕದ ಹಳೇ ಕುಂದುವಾಡ ಗ್ರಾಮಕ್ಕೆ ಹೋಗಿ ಗ್ರಾಮಸ್ಥರು ಶವಸಂಸ್ಕಾರ ನಡೆಸುತ್ತಿದ್ದರು. ಇತ್ತೀಚೆಗೆ ಹಬ್ಬದ ವಿಚಾರದಲ್ಲಿ ಎರಡು ಗ್ರಾಮಸ್ಥರ ಮಧ್ಯೆ ಮನಸ್ತಾಪ ಮೂಡಿತ್ತು. ಮನಸ್ತಾಪ ಹಿನ್ನೆಲೆ ಶವಸಂಸ್ಕಾರಕ್ಕೆ ಹಳೆಕುಂದುವಾಡ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದರು. ಶವಸಂಸ್ಕಾರಕ್ಕೆ ನಮ್ಮ ಗ್ರಾಮಕ್ಕೆ ಬರುವುದು ಬೇಡ. ನಿಮ್ಮ ಊರಿನಲ್ಲಿಯೇ ಶವಸಂಸ್ಕಾರ ಮಾಡಿ ಎಂದು ಹೇಳಿದರು. ಆದ್ರೆ, ಹಳೇ ಕುಂದುವಾಡ ಗ್ರಾಮದಲ್ಲಿ ಅಂತ್ಯಕ್ರಿಯೆಗೆ ರುದ್ರಭೂಮಿ ಇಲ್ಲದ ಕಾರಣ ಹೊಸಕುಂದುವಾಡದವರು ಹಳೇ ಕುಂದುವಾಡದಲ್ಲಿಯೇ ಶವಸಂಸ್ಕಾರ ನಡೆಸುತ್ತಿದ್ದರು.
ಗ್ರಾಮಸ್ಥರ ಪ್ರತಿಭಟನೆ
ನಿಮ್ಮ ಗ್ರಾಮದಲ್ಲಿ ನೀವು ಶವಸಂಸ್ಕಾರ ಮಾಡಿ ಎಂದು ಹೇಳುತ್ತಿದ್ದಾರೆ ಎಂದು ಹೊಸಕುಂದುವಾಡ ಗ್ರಾಮಸ್ಥರು ಆರೋಪಿಸಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಪಾಲಿಕೆಯ ಅಧಿಕಾರಿಗಳು ಸ್ಥಳಕ್ಕೆ ಹೋಗಿದ್ದು, ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಮಾತ್ರವಲ್ಲ, ಈ ಸಂಬಂಧ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ.












Click it and Unblock the Notifications