ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ವಿರೋಧಿಸಿ ದಾವಣಗೆರೆಯಲ್ಲಿ ಅಭಿಮಾನಿಗಳ ಪ್ರತಿಭಟನೆ
ದಾವಣಗೆರೆ, ಡಿಸೆಂಬರ್, 20: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮೇಲೆ ಚಪ್ಪಲಿ ಎಸೆದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕಾನೂನು ರೀತಿಯಲ್ಲಿ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಜಿಲ್ಲಾ ಹಾಗೂ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಅಭಿಮಾನಿಗಳು ಹಾಗೂ ಸಮಿತಿಯ ಪದಾಧಿಕಾರಿಗಳು, ಗಾಂಧಿ ಸರ್ಕಲ್, ಪಿ. ಬಿ. ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಕಳೆದ ಡಿಸೆಂಬರ್ 18ರ ರಾತ್ರಿ ವಿಜಯನಗರ ಜಿಲ್ಲೆಯ ಹೊಸಪೇಟೆಗೆ ದರ್ಶನ್ ತೂಗುದೀಪ, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಕ್ರಾಂತಿ ಸಿನಿಮಾ ಪ್ರಮೋಷ ಗೆ ಚಿತ್ರತಂಡ ಬಂದಿತ್ತು. ಈ ವೇಳೆ ಕೆಲ ಕಿಡಿಗೇಡಿಗಳು ನಟ ದರ್ಶನ್ ಮೇಲೆ ಚಪ್ಪಲಿ ತೂರಿ ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಇಷ್ಟಾದರೂ ದರ್ಶನ್ ತೂಗುದೀಪ ಅವರು ಮಾತನಾಡಿ, ಆಯ್ತು ಚಿನ್ನ ಎಂದು ಹೇಳಿ ರಚಿತಾ ರಾಮ್ ಅವರಿಗೆ ಮಾತನಾಡಲು ಮೈಕ್ ನೀಡಿದ್ದಾರೆ. ಇದು ಅವರ ದೊಡ್ಡ ಗುಣ ತೋರಿಸುತ್ತದೆ ಎಂದು ದರ್ಶನ್ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ಹರಿಹರದಲ್ಲಿ "ನಮ್ಮೂರ ಮಸೀದಿ ನೋಡ ಬನ್ನಿ" ಕಾರ್ಯಕ್ರಮ, ವಿಶೇಷತೆ ಏನು?
ದಾವಣಗೆರೆಯಲ್ಲಿ ದರ್ಶನ್ ಅಭಿಮಾನಿಗಳ ಆಕ್ರೋಶ
ಕರ್ನಾಟಕ ಮಾತ್ರವಲ್ಲದೇ, ಬೇರೆ ರಾಜ್ಯಗಳಲ್ಲಿಯೂ ದರ್ಶನ್ ತೂಗುದೀಪ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅವರನ್ನಯ ದೇವರಂತೆ ಆರಾಧಿಸುತ್ತಾರೆ. ಇಷ್ಟೊಂದು ಫ್ಯಾನ್ಸ್ ಹೊಂದಿರುವ ಖ್ಯಾತ ನಟನ ಏಳಿಗೆ ಸಹಿಸದೇ ಕೆಲವರು ಇಂತಹ ಕುಕೃತ್ಯ ನಡೆಸಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗುತ್ತಿವೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಬಯಲಿಗೆಳೆಯಬೇಕು. ದುರ್ವರ್ತನೆ ತೋರಿದವರ ವಿರುದ್ಧ ಕಠಿಣ ಕ್ರಮ ಆಗಲೇಬೇಕು. ಇಲ್ಲದಿದ್ದರೆ, ದರ್ಶನ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಸುಮ್ಮನಿರಲ್ಲ ಎಂದು ಎಚ್ಚರಿಕೆ ನೀಡಿದರು.
ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹ
ಕೂಡಲೇ ಎಲ್ಲಾ ಕಿಡಿಗೇಡಿಗಳ ಬಂಧನ ಆಗಬೇಕು. ಬಂಧನವಾದರೆ ಸಾಲದು, ಕಠಿಣ ಕ್ರಮ ಆಗಲೇಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಯಾವ ಕಲಾವಿದರಿಗೂ ಈ ರೀತಿ ಆಗದಂತೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು. ಪೊಲೀಸರ ಸಮ್ಮುಖದಲ್ಲಿ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಆತಂಕ ವ್ಯಕ್ತಪಡಿದ್ದಾರೆ.
ಸಿನಿಮಾ ವೀಕ್ಷಿಸಲು ಅಭಿಮಾನಿಗಳ ಕಾತರ
ರಾಜ್ಯದಲ್ಲಿ ಕ್ರಾಂತಿ ಸಿನಿಮಾದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದರ್ಶನ್ ಅಭಿನಯದ ಈ ಚಿತ್ರವನ್ನು ವೀಕ್ಷಿಸಲು ಅಭಿಮಾನಿಗಳು ತುದಿಗಾಲ ಮೇಲೆ ಕಾಯುತ್ತಿದ್ದಾರೆ. ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿವೆ. ದರ್ಶನ್ ಅವರು ನಟಿಸಿರುವ ಕ್ರಾಂತಿ ಸಿನಿಮಾ ಕನ್ನಡ ಭಾಷೆಯಷ್ಟೇ ಅಲ್ಲ, ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ಆಗುತ್ತಿದೆ. ಎಲ್ಲಾ ಅಭಿಮಾನಿಗಳು ಕ್ರಾಂತಿ ಸಿನಿಮಾ ನೋಡಲು ಜಾತಕ ಪಕ್ಷಿಗಳಂತೆ ಎದುರು ನೋಡುತ್ತಿದ್ದಾರೆ. ದರ್ಶನ್ ತೂಗುದೀಪ ಅವರ ಸಿನಿಮಾ ನೋಡುವ ಮೂಲಕ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಕಲಾವಿದರನ್ನ ಗೌರವಿಸುವ ಕೆಲಸ ಆಗಬೇಕಿದೆ
ಇಂದು ದರ್ಶನ್ ಅವರಿಗೆ ಅವಮಾನ ಮಾಡಿರಬಹುದು. ಮುಂದೆ ಯಾವ ಕಲಾವಿದರೂ ಸಹ ಇಂತಹ ಮುಜುಗರ ಸನ್ನಿವೇಶವನ್ನು ಎದುರಿಸುವಂತಹ ವಾತಾವರಣ ನಿರ್ಮಾಣ ಆಗಬಾರದು ಎಂಬುದೇ ನಮ್ಮ ಅಪೇಕ್ಷೆಯಾಗಿದೆ. ಪ್ರತಿಯೊಬ್ಬ ನಟರಿಗೂ ಅವರದ್ದೇ ಆದ ಅಭಿಮಾನಿಗಳ ಬಳಗ ಇರುತ್ತದೆ. ಕಲೆ, ಕಲಾವಿದರನ್ನು ಗೌರವಿಸುವ ಕೆಲಸ ಆಗಬೇಕಿದೆ. ಎಲ್ಲರೂ ಸಹನೆ, ಸಂಯಮದಿಂದ ವರ್ತಿಸಬೇಕು. ನಟರಿಗೆ ಯಾರೇ ಅಪಮಾನ ಮಾಡಿದರೂ ಅದು ತಪ್ಪು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕೆ.ಜಿ. ಚಂದ್ರಣ್ಣ, ಉಪಾಧ್ಯಕ್ಷ ಮಂಜಣ್ಣ, ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ಅಜಯ್, ಸುರೇಶ್ ಆವರಗೆರೆ, ಕೃಷ್ಣ, ಮಧು, ನಗರ ಘಟಕದ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ವಿಜಯಕುಮಾರ್, ಶಿವು ಸೇರಿದಂತೆ ನೂರಾರು ಅಭಿಮಾನಿಗಳು ಪಾಲ್ಗೊಂಡಿದ್ದರು.