ಹೊಳಲ್ಕೆರೆಯಲ್ಲಿ ಕೋತಿಗೆ ಹೆದರಿ ಪ್ರಾಣ ಬಿಟ್ಟ ಮಹಿಳೆ
ಹೊಳಲ್ಕೆರೆ ತಾಲ್ಲೂಕಿನ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಪೂಜೆ ಮಾಡುತ್ತಿದ್ದ ವೇಳೆ ಕೋತಿ ದಾಳಿ ಮಾಡಿದ್ದು, ಮಹಿಳೆ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಚಿತ್ರದುರ್ಗ, ನವೆಂಬರ್, 28: ಸಿಂಹ, ಹುಲಿ, ಚಿರತೆಯಂತಹ ಕ್ರೂರಪ್ರಾಣಿಗಳ ದಾಳಿಗೆ ಜನ ಸಾವನ್ನಪ್ಪಿರುವ ಸುದ್ದಿಗಳನ್ನು ನಾವು ಕೇಳಿದ್ದೇವೆ. ಆದರೆ ಮಹಿಳೆಯೊಬ್ಬರು ಕೋತಿಗೆ ಹೆದರಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ನಡೆದಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊರಕೆದೇವರಪುರದ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರು ಕೋತಿಗಳಿಗೆ ಹೆದರಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಹಿರಿಯೂರು ತಾಲ್ಲೂಕಿನ ಧರ್ಮಪುರದ ವಿದ್ಯಾಶ್ರೀ (20) ಎಂಬುವವರು ಪತಿ ಹಾಗು ಅಜ್ಜಿ ಜತೆ ಶನಿವಾರ ದೇವಸ್ಥಾನಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ವಿದ್ಯಾಶ್ರೀ ಅವರು ದೇವಸ್ಥಾನದ ಸಂತೆ ಮೈದಾನದ ಪಕ್ಕದಲ್ಲಿರುವ ಹೊಂಡದಲ್ಲಿ ಗಂಗಾಪೂಜೆ ಮಾಡುತ್ತಿದ್ದಾಗ ಕೋತಿಯೊಂದು ಅವರ ಮೇಲೆ ಎರಗಿದ ಪರಿಣಾಮ ಅವರು ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ವಿದ್ಯಾಶ್ರೀ ಅವರು ಪೂಜೆ ಮಾಡುತ್ತಿದ್ದ ವೇಳೆ ಅವರ ಕೈಯಲ್ಲಿದ್ದ ಬಾಳೆಹಣ್ಣನ್ನು ಕೋತಿ ಕಸಿದುಕೊಳ್ಳಲು ಪ್ರಯತ್ನಿಸಿ ಮೇಲೆರಗಿದೆ. ಇದರಿಂದ ಅವರು ಹೆದರಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಹಿಳೆ ಹೊಂಡಕ್ಕೆ ಬಿದ್ದ ಕೂಡಲೇ ಸಾರ್ವಜನಿಕರು ರಕ್ಷಿಸಿ ಹೊಳಲ್ಕೆರೆ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪ್ತಯತ್ನಿಸಿದ್ದಾರೆ. ಆದರೆ ಮಹಿಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ತಾಲ್ಲೂಕಿನ ಚಿತ್ರಹಳ್ಳಿ ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications