ಬಿಜೆಪಿಯಿಂದ ಟಿಕೆಟ್ ಕೊಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧೆ-ಗೂಳಿಹಟ್ಟಿ ಶೇಖರ್
ಚಿತ್ರದುರ್ಗ, ಡಿಸೆಂಬರ್ 13: ಮುಂಬರುವ 2023ರ ವಿಧಾನಸಭಾ ಚುನಾವಣೆ, ದಿನ ಕಳೆದಂತೆ ರಂಗೇರುತ್ತಿದೆ. ಟಿಕೆಟ್ ಗಿಟ್ಟಿಸಿಕೊಳ್ಳಲು ಆಯಾ ಪಕ್ಷದಲ್ಲಿ ನಾಯಕರ ನಡುವೆ ಪ್ರಬಲ ಪೈಪೋಟಿ ಎದುರಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರ ನಾಯಕರ ನಡುವೆ ಟಿಕೆಟ್ ಕದನ ಆರಂಭವಾಗಿದೆ. ಬಿಜೆಪಿ ಪಕ್ಷದಿಂದ ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ, ಒಂದು ವೇಳೆ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆ ಎದುರಿಸುತ್ತೇನೆ ಎಂದು ಹಾಲಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆ 2023: ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ಗಾಗಿ ಐವರ ಪೈಪೋಟಿ, ಇಲ್ಲಿದೆ ವಿವರ
ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್. ಲಿಂಗಮೂರ್ತಿ ಇವರಿಬ್ಬರ ನಡುವೆ ಈಗಾಗಲೇ ಅಸಮಾಧಾನ ಉಂಟಾಗಿದ್ದು, ಟಿಕೆಟ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಇದಲ್ಲದೆ ಒಬ್ಬರ ವಿರುದ್ಧ ಇನ್ನೊಬ್ಬರು ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
ಈ ಇಬ್ಬರ ನಾಯಕರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ಹೀಗಾಗಿ ಅಸಮಾಧಾನಗೊಂಡಿರುವ ನಾಯಕರನ್ನು ಸಮಾಧಾನ ಪಡಿಸಿ, ಒಂದೇ ಪಕ್ಷದವರು ಎಂದು ಒಗ್ಗೂಡಿಸುವ ಕೆಲಸಕ್ಕೆ ಎಂಎಲ್ಸಿ ಕೆ.ಎಸ್ ನವೀನ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಹಾಗೂ ಇತರರು ಮುಂದಾಗಿದ್ದರು.
ಇನ್ನು ಈ ಸಂಧಾನ ಸಭೆಯಲ್ಲಿ ಮಾತನಾಡಿರುವ ಶಾಸಕ ಗೂಳಿಹಟ್ಟಿ ಡಿ.ಶೇಖರ್ " ಬಿಜೆಪಿಯಿಂದ ಟಿಕೆಟ್ ಕೊಟ್ಟರೆ ಸಂತೋಷವಾಗಿ ಸ್ಪರ್ಧಿಸಿ, ಮತ್ತೊಮ್ಮೆ ಗೆಲುವು ಸಾಧಿಸಲಾಗುತ್ತದೆ. ಒಂದು ವೇಳೆ ಟಿಕೆಟ್ ತಪ್ಪಿದರೆ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಪಕ್ಷದ ನಾಯಕರಿಗೆ ನೇರವಾಗಿಯೇ ತಿಳಿಸಿದ್ದಾರೆ.
30 ಸಾವಿರ ವಿದ್ಯುತ್ ಚಾಲಿತ ಬಸ್ಗಳನ್ನಾಗಿ ಪರಿವರ್ತನೆಗೆ ನಿರ್ಧಾರ: ಹಿರಿಯೂರಿನಲ್ಲಿ ರಾಮುಲು ಭರವಸೆ
ಮಾತು ಮುಂದುವರಿಸಿದ ಅವರು, "ಪಕ್ಷದ ಜವಾಬ್ದಾರಿ ಇರುವವರು ಶಿಸ್ತು ಹಾಗೂ ಸಂಯಮದಿಂದ ವರ್ತಿಸಬೇಕು. ನಮ್ಮಲ್ಲಿರುವ ಗೊಂದಲಗಳಿಂದ ಬೇರೆಯವರಿಗೆ ಲಾಭ ಪಡೆದುಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಅವಕಾಶ ನೀಡಬಾರದು. ನಮ್ಮಲ್ಲಿರುವ ಗುಂಪುಗಾರಿಕೆ ಬಿಟ್ಟು ವರಿಷ್ಠರ ಸೂಚನೆ ಮೇರೆಗೆ ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸಿಕೊಂಡು ಚುನಾವಣೆ ಎದುರಿಸಬೇಕು. ಈ ಬಾರಿ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ" ಎಂದು ಹೇಳಿದರು.