ಹಿರಿಯೂರು: ಜೆಜೆ ಹಳ್ಳಿ ಭಾಗದ ಕೆರೆಗಳಿಗೆ ನೀರು ಬಿಡುಗಡೆ ಯಾವಾಗ.?
ಹಿರಿಯೂರು, ಆಗಸ್ಟ್, 25: ನನಗೆ ಸುಳ್ಳು ಹೇಳುವುದು ಬರುವುದಿಲ್ಲ. ಈಗಾಗಲೇ ವಾಣಿವಿಲಾಸ ಜಲಾಶಯಕ್ಕೆ ನೀರಿನ ಅಲೋಕೇಶನ್ ಆಗಿದ್ದು, ನೀರು ಹಂಚಿಕೆ ಮಾಡಲು ಸಾಧ್ಯವಿಲ್ಲ. ಆದರೂ ನಾನು ಭದ್ರಾ ಮೇಲ್ದಂಡೆ ಯೋಜನೆಯಿಂದ ಹೆಚ್ಚುವರಿ ನೀರು ಅಲೋಕೇಶನ್ ಮಾಡಿಸಿ 0.25 ಟಿಎಂಸಿ ನೀರನ್ನು ಜೆಜೆ ಹಳ್ಳಿ ಭಾಗಕ್ಕೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ (ಆಗಸ್ಟ್ 25) ಸಂಜೆ ಜೆಜಿ ಹಳ್ಳಿ ಭಾಗದ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಬಗ್ಗೆ ರೈತರ ಮುಖಂಡರ ಜೊತೆ ಸಭೆ ನಡೆಸಿ ಮಾತನಾಡಿದರು.

ಜೆಜಿ ಹಳ್ಳಿ ಭಾಗದ ಎಲ್ಲಾ ಕೆರೆಗಳಿಗೆ ನೀರು ಹರಿಸಲು ಲೈನಿಂಗ್, ಎಸ್ಟಿಮೆಂಟ್ ಮಾಡುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ನಂತರ ಸರ್ಕಾರದಿಂದ ಡಿಪಿಆರ್ ಮಾಡಿಸಲಾಗುತ್ತದೆ. ಬಳಿಕ ಸರ್ಕಾರದಿಂದ ಹಣ ಮಂಜೂರಾತಿ ಮಾಡಿಸಿ ಆ ಭಾಗಕ್ಕೆ ನೀರು ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನ್ನ ಅವಧಿಯಲ್ಲಿ ಆ ಭಾಗಕ್ಕೆ ನೀರು ಬಂದರೆ ಸಾರ್ಥಕವಾಗುತ್ತದೆ. ದಯಮಾಡಿ ರೈತರು ಧರಣಿ ಸ್ಥಗಿತಗೊಳಿಸಿ ಎಂದು ಮನವಿ ಮಾಡಿದರು.
ಸಚಿವರ ಮಾತಿಗೆ ಪ್ರತಿಕ್ರಿಯಿಸಿದ ರೈತರು ಮೊದಲು ಡಿ ಪಿಆರ್ ರೆಡಿ ಮಾಡಿ ಅಲೋಕೇಶನ್ ಆದೇಶ ಬರುವವರೆಗೂ ಹೋರಾಟ ನಿಲ್ಲುವುದಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿ ರಾಜೇಶ್ ಕುಮಾರ್,ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಆಲೂರು ಸಿದ್ದರಾಮಣ್ಣ,ಈರಣ್ಣ, ಕನ್ಯಪ್ಪ, ತಿಮ್ಮರಾಯಪ್ಪ , ಎಂಆರ್ ಈರಣ್ಣ, ನಾಗೇಂದ್ರಪ್ಪ, ವಿಶ್ವನಾಥ್, ಪಾಪಣ್ಣ, ವಜೀರ್ ಸಾಬ್, ಕಲೀಮ್ ಸಾಬ್, ಕೆ ಆರ್ ಹಳ್ಳಿ ರಾಜಪ್ಪ, ರಾಮಯ್ಯ, ಜೈರಾಮಯ್ಯ, ರಾಮಕೃಷ್ಣ, ಸುರೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನೀರಿನ ಮಟ್ಟ ಎಷ್ಟಿದೆ?: ಈ ಬಾರಿ ಮುಂಗಾರು ಮಳೆ ಅಬ್ಬರಿಸಿ ಬೊಬ್ಬೆರೆದ ಹಿನ್ನೆಲೆ ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಈಗಾಗಲೇ ಕೆಲವು ಜಲಾಶಯಗಳಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಣೆ ಮಾಡಲಾಗಿದೆ. ಇತ್ತ ಚಿತ್ರದುರ್ಗ ಜಿಲ್ಲೆಯ ಏಕೈಕ ರೈತರ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ನಿಧಾನವಾಗಿ 120 ಅಡಿ ಮುಟ್ಟುವ ಹಂತ ತಲುಪಿದೆ.
ಇಂದಿನ ವರದಿಯಲ್ಲಿ ವಾಣಿ ವಿಲಾಸ ಜಲಾಶಯಕ್ಕೆ 2,195 ಕ್ಯೂಸೆಕ್ ಒಳಹರಿವು ನೀರು ಹರಿದುಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 117.70 ಅಡಿ ತಲುಪಿದೆ. ಡ್ಯಾಂನಿಂದ ಯಾವುದೇ ಹೊರಹರಿವು ಇಲ್ಲ. ಮತ್ತೊಂದು ಕಡೆ ಭದ್ರಾ ಜಲಾಶಯದಿಂದ ಕಾಲುವೆ ಮೂಲಕ ಸುಮಾರು ಪ್ರತಿದಿನ 700 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಡ್ಯಾಂ 120 ಅಡಿಯತ್ತ ತಲುಪಲಿದೆ.
ಮತ್ತೊಂದು ಕಡೆ ಎತ್ತಿನಹೊಳೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯ ಯಶಸ್ವಿಯಾಗಿದೆ. ಎತ್ತಿನಹೊಳೆ, ಭದ್ರಾ ನೀರಿನ ಜೊತೆಗೆ ಹೆಚ್ಚು ಮಳೆ ನೀರು ಬಂದರೆ ಪ್ರಸಕ್ತ ಸಾಲಿನಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. 135 ಅಡಿ ಎತ್ತರ ಇರುವ ಡ್ಯಾಂ ಒಟ್ಟು 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ.
89 ವರ್ಷಗಳ ಬಳಿಕ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದು ನಿರ್ಮಿಸಿತ್ತು. ಸುಮಾರು ಒಂದು ತಿಂಗಳ ಕಾಲ ವೇದಾವತಿ ನದಿ ಹರಿದಿತ್ತು. ಇದರಿಂದ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿತ್ತು. 2023ರಲ್ಲಿ ಡ್ಯಾಂಗೆ ಯಾವುದೇ ಹೇಳಿಕೊಳ್ಳುವಂತಹ ನೀರು ಹರಿದು ಬಂದಿರಲಿಲ್ಲ. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.
ಇದೇ ರೀತಿ ಇನ್ನೂ ಒಂದೆರಡು ತಿಂಗಳಲ್ಲಿ ಹೆಚ್ಚು ಮಳೆ ಬಂದು ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದರೆ, ಜಲಾಶಯ ಈ ಬಾರಿ ಕೋಡಿ ಬೀಳುವ ಸಾಧ್ಯತೆ ಇರುತ್ತದೆ. ಸುಮಾರು 12 ಅಡಿ ನೀರು ಜಲಾಶಯಕ್ಕೆ ಹರಿದು ಬಂದರೇ ಜಲಾಶಯದ ಕೋಡಿ ಬೀಳುವುದು ಬಹುತೇಕ ನಿಶ್ಚಿತವಾಗಿದೆ.












Click it and Unblock the Notifications