Vani Vilasa Sagara Dam: ವಾಣಿ ವಿಲಾಸ ಜಲಾಶಯ ಕೋಡಿ ಬೀಳಲು ಕೆಲವು ಅಡಿಯಷ್ಟೇ ಬಾಕಿ: ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ?
Vani Vilasa Sagara Dam: ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಆದರೂ ಕೂಡ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಒಳಹರಿವು ಹರಿದುಬರುತ್ತಲೇ ಇದೆ. ಕೆವಲ 9 ಅಡಿ ನೀರು ಬಂದರೆ ಜಲಾಶಯ ಮೂರನೇ ಬಾರಿಗೆ ಕೋಡಿ ಬೀಳಲಿದೆ. ಹಾಗಾದರೆ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ ಎಂದು ತಿಳಿಯಿರಿ.
ಶನಿವಾರದ ವರದಿಯಲ್ಲಿ ಜಲಾಶಯಕ್ಕೆ ಭದ್ರಾ ನೀರು ಸೇರಿದಂತೆ 1,386 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 121.05 ಅಡಿ ತಲುಪಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಜಲಾಶಯದ ಮೇಲ್ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಇದರಿಂದ ಡ್ಯಾಂಗೆ ಒಳಹರಿವಿನಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚಿದೆ.

ಜಲಾಶಯದ ಒಟ್ಟು ಎತ್ತರ 135 ಅಡಿ ಇದೆ. 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ. ಡ್ಯಾಂ ಒಟ್ಟು 30 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಪ್ರಸಕ್ತ ಸಾಲಿನಲ್ಲಿ 113 ಅಡಿ ನೀರು ಸಂಗ್ರಹವಾಗಿದ್ದ ಜಲಾಶಯದಲ್ಲಿ ಸುಮಾರು 8 ಅಡಿ ಮಳೆ ಹಾಗೂ ಭದ್ರಾ ನೀರು ಹರಿದು ಬಂದಿದೆ.
ಈಶ್ವರಗೆರೆಯಲ್ಲಿ ಹೆಚ್ಚು ಮಳೆ: ಹಿರಿಯೂರು ತಾಲ್ಲೂಕಿನಲ್ಲಿ ಶುಕ್ರವಾರ (ಅಕ್ಟೋಬರ್ 04) ರಾತ್ರಿ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಈಶ್ವರಗೆರೆಯಲ್ಲಿ 81.02 ಮಿಲಿ ಮೀಟರ್ ಅತಿ ಹೆಚ್ಚು ಮಳೆಯಾಗಿದೆ. ಬಬ್ಬೂರು 60.8, ಸೂಗೂರಿನಲ್ಲಿ 53.4, ಹಿರಿಯೂರು 42.6 ಹಾಗೂ ಇಕ್ಕನೂರಿನಲ್ಲಿ 26.2 ಮಿ.ಮೀ. ಸೇರಿದಂತೆ 52.84 ಮಿ.ಮೀ. ಮಳೆಯಾಗಿದೆ. ಅಬ್ಬರದ ಮಳೆ ಸುರಿದ ಹಿನ್ನೆಲೆ ಹಿರಿಯೂರು ತಾಲ್ಲೂಕಿನ ರಂಗನಾಪುರದಿಂದ ಆರನಕಟ್ಟೆ ರಸ್ತೆಯಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮ್ ಪೆಟ್ಟಿಗೆ ನೆಲಕ್ಕುರುಳಿ ಸಂಚಾರ ಅಸ್ತವ್ಯಸ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್: ಹಿರಿಯೂರಿನಿಂದ ಬೆಂಗಳೂರು ತಲುಪುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ (ಜವನಗೊಂಡನಹಳ್ಳಿಯಿಂದ ಹಿರಿಯೂರು ಕಡೆ ಬರುವ ರಸ್ತೆ) ಸುಮಾರು 10 ಕಿಲೋ ಮೀಟರ್ ದೂರದವರೆಗೂ ಟ್ರಾಫಿಕ್ ಜಾಮ್ ಉಂಟಾಗಿ, ಸಂಚಾರ ಅಸ್ತವ್ಯಸ್ತಗೊಂಡಿದೆ. ಕಾರಣ ಜವನಗೊಂಡನಹಳ್ಳಿ ಹೋಬಳಿಯ ಸಮೀಪ ಗೊರ್ಲಡಕು ಗೇಟ್ ಬಳಿ ಬ್ರಿಡ್ಜ್ ನಿರ್ಮಾಣ ಮಾಡಲಾಗುತ್ತಿದೆ.
ಕಾಮಗಾರಿ ನಡೆಯುತ್ತಿರುವುದರಿಂದ ಮಣ್ಣು ಸರ್ವಿಸ್ ರಸ್ತೆಗೆ ಬಂದಿದೆ. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸರ್ವಿಸ್ ರಸ್ತೆ ಮೂಲಕ ತೆರಳಬೇಕು. ಸರ್ವಿಸ್ ರಸ್ತೆಯಲ್ಲಿ ಮಣ್ಣು, ನೀರು ಸೇರಿಕೊಂಡಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕಾಮಗಾರಿ ಕಂಪನಿಯ ಜೆಸಿಬಿ ಮೂಲಕ ಮಣ್ಣು, ನೀರು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.












Click it and Unblock the Notifications