Vani Vilasa Sagara Dam: ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ವಾಣಿ ವಿಲಾಸ ಜಲಾಶಯದ ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ?
Vani Vilasa Sagara Dam: ಮಳೆ ಇಲ್ಲದಿದ್ದರೂ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಕಳೆದ ಎರಡು ತಿಂಗಳಿಂದ ಒಳಹರಿವು ಹರಿದುಬರುತ್ತಿತ್ತು. ಇದರಿಂದ ಜಲಾಶಯದ ನೀರಿನ ಮಟ್ಟವೂ ಕೂಡ ಹೆಚ್ಚಾಗಿತ್ತು. ಹಾಗಾದರೆ ಇದೀಗ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಳೆ ಇಲ್ಲದ ಕಾರಣ ಜಲಾಶಯಕ್ಕೆ ಇದೀಗ ಯಾವುದೇ ರೀತಿಯ ಒಳಹರಿವು ಹರಿದು ಬಂದಿಲ್ಲ. ಅಲ್ಲದೆ, ಜಲಾಶಯ ಮೇಲ್ಭಾಗದಲ್ಲಿ ಮಳೆ ಇಲ್ಲದಿರುವುದರಿಂದ ಸಹ ಹರಿದು ಬರುತ್ತಿದ್ದ ಒಳಹರಿವು ಪ್ರಮಾಣ ಸ್ಥಗಿತಗೊಂಡಿದ್ದು, ಸದ್ಯಕ್ಕೆ ಡ್ಯಾಂ ಕೋಡಿ ಬೀಳುವಂತೆ ಕಾಣುತ್ತಿಲ್ಲ.

ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.20 ಅಡಿ ತಲುಪಿದ್ದು, ಜಲಾಶಯ ಭರ್ತಿಗೆ 2.80 ಅಡಿ ನೀರು ಬರಬೇಕಿದೆ. ಇಷ್ಟು ನೀರು ಬಂದರೆ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳಲಿದೆ. ಒಂದು ವೇಳೆ ಮಳೆ ಇಲ್ಲಿಗೆ ಕೊನೆಗೊಂಡರೇ ಮುಂದಿನ ವರ್ಷದಲ್ಲಿ ಜಲಾಶಯ ಕೋಡಿ ಬೀಳುತ್ತದೆ. ವಿವಿ ಸಾಗರ ಡ್ಯಾಂಗೆ ಒಳಹರಿವು ನಿಂತಿರುವುದರಿಂದ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.
ಹಿರಿಯೂರು ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿ ಆಗಿದ್ದರಿಂದ ಈ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ 1907ರಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂನ್ನು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಟ್ಟಿಸಿದ್ದರು.
ಹೆಚ್ಚು ನೀರು ಸಂಗ್ರಹವಾದ ವರ್ಷ: ವಾಣಿ ವಿಲಾಸ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹವಾದ ವರ್ಷ ಈ ರೀತಿ ಇದೆ. 1917ರಲ್ಲಿ 120.60 ಅಡಿ, 1918ರಲ್ಲಿ 121.30 ಅಡಿ, 1919ರಲ್ಲಿ 128.30, 1920ರಲ್ಲಿ 125.50, 1932ರಲ್ಲಿ 125.50, ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ ನೀರು ಸಂಗ್ರಹವಾಗಿತ್ತು.
1935ರಲ್ಲಿ 123,22 ಅಡಿ, 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ, 2000ರಲ್ಲಿ 122.50ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ, 2024 (ಈ ವರ್ಷ)ರಲ್ಲಿ ಅಂದರೆ ಇದೀಗ ಪ್ರಸ್ತುತ 127.20 ಅಡಿ ನೀರು ಸಂಗ್ರಹವಾಗಿದೆ.
ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಭಾಗಗಳಲ್ಲಿ ಸಾವಿರಾರು ಅಡಿಗಳಷ್ಟು ಬೋರ್ ವೆಲ್ ಕೊರೆಸಿದರೂ ನೀರು ಸಿಗುತ್ತಿರಲಿಲ್ಲ. ಇದೀಗ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳ ಹಿನ್ನೆಲೆಯಲ್ಲಿ ಸುತ್ತ ಮುತ್ತಲಿನ ರೈತರಿಗೆ ಅನುಕೂಲ ಆಗಲಿದೆ. ಮತ್ತೊಂದು ಕಡೆ ಬೋರ್ ವೆಲ್ ಗಳ ಅಂತರ್ಜಲ ಮಟ್ಟ ಹೆಚ್ಚಿಸಿದೆ.












Click it and Unblock the Notifications