Vani Vilasa Sagara Dam: ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿ, ಜನರಿಗೆ ಎಚ್ಚರಿಕೆ ರವಾನೆ
ಚಿತ್ರದುರ್ಗ, ಜನವರಿ 12: ಬಯಲುಸೀಮೆಯ ಜನರ ಜೀವನಾಡಿ ವಾಣಿ ವಿಲಾಸ ಸಾಗರ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಡ್ಯಾಂ ಕೋಡಿ ಬೀಳಲು ಕ್ಷಣಗಣನೆ ಪ್ರಾರಂಭವಾಗಿದ್ದು, ಜನರಿಗೆ ಮುನ್ನೆಚ್ಚರಿಕೆ ರವಾನೆ ಮಾಡಲಾಗಿದೆ. ಸಂಪೂರ್ಣ ಭರ್ತಿಯಾಗಿರುವ ವಿವಿ ಸಾಗರ ಜಲಾಶಯಕ್ಕೆ ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಿದ್ಧತೆಯನ್ನು ಸಹ ಪ್ರಾರಂಭಿಸಿದೆ.
ವಾಣಿ ವಿಲಾಸ ಸಾಗರ ಜಲಾಶಯಕ್ಕೆ 700 ಕ್ಯೂಸೆಕ್ ಒಳಹರಿವು ಇದ್ದು, ಜಲಾಶಯದಿಂದ ಅಷ್ಟೇ ಪ್ರಮಾಣದ ನೀರು ಯಾವುದೇ ಸಂದರ್ಭದಲ್ಲಾದರೂ ಕೋಡಿಯ ಮುಖಾಂತರ ವೇದಾವತಿ ನದಿಗೆ ಹರಿಯುತ್ತದೆ. ಆದ್ದರಿಂದ ವೇದಾವತಿ ನದಿಯ ತಗ್ಗು ಪ್ರದೇಶ ಹಾಗೂ ನದಿಯ ಎರಡೂ ದಂಡೆಗಳಲ್ಲಿ ಇರುವ ಜನರು ತಮ್ಮ ಆಸ್ತಿ-ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು ಎಂದು ಹಿರಿಯೂರು ಕ್ಯಾಂಪ್ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಭದ್ರಾ ಮೇಲ್ದಂಡೆ ಯೋಜನೆ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ವಾಣಿ ವಿಲಾಸ ಸಾಗರ ಡ್ಯಾಂ ಇದೆ. ಮಾರಿ ಕಣಿವೆ ಡ್ಯಾಂ ಎಂದು ಸಹ ಇದನ್ನು ಕರೆಯುತ್ತಾರೆ. ಡ್ಯಾಂ ಒಟ್ಟು ನೀರಿನ ಸಂಗ್ರಹಣ ಸಾಮರ್ಥ್ಯ 30.422 ಟಿಎಂಸಿ ಅಡಿ. ಇದರಲ್ಲಿ 1.87 ಟಿಎಂಸಿ ಅಡಿ ನೀರು ಡೆಡ್ ಸ್ಟೋರೆಜ್ ಆಗಿದೆ. ಬಳಕೆಗೆ ಬರುವ ನೀರಿನ ಪ್ರಮಾಣ 28.552 ಟಿಎಂಸಿ ಅಡಿ ಆಗಿದೆ. ಈ ಡ್ಯಾಂ ಮೇಲ್ಮಟ್ಟದ ಕಾಲುವೆ, ಬಲದಂಡೆ ಕಾಲುವೆ ಮತ್ತು ಎಡದಂಡೆ ಕಾಲುವೆ ಎಂಬ ಮೂರು ಕಾಲುವೆಗಳನ್ನು ಒಳಗೊಂಡಿದೆ.
ಡ್ಯಾಂಗೆ ಜಿಲ್ಲಾಧಿಕಾರಿಗಳ ಭೇಟಿ: ವಿವಿ ಸಾಗರ ಡ್ಯಾಂ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ವಾಣಿ ವಿಲಾಸ ಸಾಗರ ಜಲಾಶಯ ಯೋಜನೆಯನ್ನು ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾಯಿ ಕೆಂಪ ನಂಜಮ್ಮಣಿ ವಾಣಿ ವಿಲಾಸ ಸನ್ನಿಧಾನ ಇವರ ಹೆಸರಿನಲ್ಲಿ 1898 ರಿಂದ 1907ರಲ್ಲಿ ಹಿರಿಯೂರು ತಾಲ್ಲೂಕಿನ ವಿವಿ ಪುರ ಗ್ರಾಮದ ಬಳಿ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ.
ಡ್ಯಾಂ ಇತಿಹಾಸದಲ್ಲಿಯೇ ಮೂರನೇ ಬಾರಿಗೆ ಭರ್ತಿಯಾಗುತ್ತಿದೆ. ಈ ಡ್ಯಾಂ ಹಿರಿಯೂರು ಪಟ್ಟಣದಿಂದ ಸುಮಾರು 18 ಕಿ. ಮೀ. ದೂರಲ್ಲಿದೆ. ಇದು ರಾಜ್ಯದ ವಿಶಿಷ್ಟ ಜಲಾಶಯವಾಗಿದೆ, ಕಾರಣ ಡ್ಯಾಂಗೆ ಕ್ರಸ್ಟ್ ಗೇಟ್ಗಳಿಲ್ಲ. ಜಲಾಶಯ ಭರ್ತಿಯಾದರೆ ಮಾತ್ರ ನೀರು ಕೋಡಿ ಬಿದ್ದು ಮುಂದೆ ಸಾಗುತ್ತದೆ. ಕೋಡಿ ಬಿದ್ದ ಬಳಿಕ ನೀರು ಬಳ್ಳಾರಿ ಜಿಲ್ಲೆ ಪ್ರವೇಶಿಸಿ ತುಂಗಭದ್ರಾ ಜಲಾಶಯವನ್ನು ಸೇರುತ್ತದೆ.
2022ರಲ್ಲಿ ವಿವಿ ಸಾಗರ ಡ್ಯಾಂ ಭರ್ತಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಡ್ಯಾಂಗೆ ಬಾಗಿನ ಅರ್ಪಿಸಿದ್ದರು. 'ಇದೊಂದು ಐತಿಹಾಸಿಕ ಕ್ಷಣ. ಮಹಾರಾಜರ ಕಾಲದಲ್ಲಿ ಕಟ್ಟಿಸಿದ ವಾಣಿವಿಲಾಸ 88 ವರ್ಷಗಳ ಹಿಂದೆ ತುಂಬಿತ್ತು. 75 ವರ್ಷಗಳ ನಂತರ ಸ್ವಾತಂತ್ರ್ಯದ ಬಳಿಕ ಪ್ರಪ್ರಥಮ ಬಾರಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ಇಂದು ನಮಗೆ ಪ್ರಾಪ್ತವಾಗಿದೆ" ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದರು.
ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಬೀಳಲು ಕ್ಷಣಗಣನೆ ಪ್ರಾರಂಭವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಶೀಘ್ರವೇ ಜಿಲ್ಲೆಗೆ ಆಗಮಿಸಿ ಭರ್ತಿಯಾಗಿರುವ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಹಿರಿಯೂರು ಶಾಸಕ, ಸಚಿವ ಡಿ. ಸುಧಾಕರ್ ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಡಿ. ಕೆ. ಶಿವಕುಮಾರ್ ಆಹ್ವಾನಿಸಿದ್ದಾರೆ.
ಚಿತ್ರದುರ್ಗ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಜೆ. ಸೋಮಶೇಖರ್ ವಿವಿ ಸಾಗರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆಯನ್ನು ನಡೆಸಿದರು. ವಾಣಿವಿಲಾಸ ಸಾಗರ ಜಲಾಶಯಕ್ಕೆ ಭದ್ರಾ ಡ್ಯಾಂನಿಂದ ನೀರು ಹರಿದುಬರುತ್ತಿದೆ. ಡ್ಯಾಂ ನೀರಿನ ಮಟ್ಟ ಗರಿಷ್ಟ ಮಟ್ಟ 130 ಅಡಿಗೆ ತಲುಪಿದ ಬಳಿಕ ಹೆಚ್ಚುವರಿ ನೀರು ಕೋಡಿ ಮೂಲಕ ಹರಿದು ಹೋಗಲಿದೆ.
ಡ್ಯಾಂ ಸಂಪೂರ್ಣ ಭರ್ತಿಯಾಗುತ್ತಿರುವುದು ಜಿಲ್ಲೆಗೆ ಸಂತಸದ ಕ್ಷಣವಾಗಿದ್ದು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಶೀಘ್ರವೇ ಜಿಲ್ಲೆಗೆ ಆಗಮಿಸಿ, ಭರ್ತಿಯಾಗಿರುವ ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರುಗಳು, ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಕೂಡ ಈ ಕ್ಷಣಕ್ಕೆ ಕಾತರರಾಗಿದ್ದು, ಬಾಗಿನ ಅರ್ಪಣೆ ಕಾರ್ಯಕ್ರಮ ಯಶಸ್ವಿಗೊಳಿಸುವ ಜಿಲ್ಲಾಡಳಿತ ತಯಾರಿ ನಡೆಸಿದೆ.












Click it and Unblock the Notifications