ಅಕ್ಟೋಬರ್ 13ರಿಂದ ಚಿತ್ರದುರ್ಗದಲ್ಲಿ ಶರಣ ಸಂಸ್ಕೃತಿ ಉತ್ಸವ
ಬೆಂಗಳೂರು, ಆಗಸ್ಟ್ 06 : ಈ ಸಾಲಿನ 'ಶರಣ ಸಂಸ್ಕೃತಿ ಉತ್ಸವ' ಅಕ್ಟೋಬರ್ 13 ರಿಂದ 22ರ ತನಕ ನಡೆಯಲಿದೆ. ಮಧ್ಯ ಕರ್ನಾಟಕ ಭಾಗದ ದಸರಾ ಮಹೋತ್ಸವ ಎಂದೇ ಶರಣ ಸಂಸ್ಕೃತಿ ಉತ್ಸವ ಹೆಸರು ಪಡೆದಿದೆ.
ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರತಿ ವರ್ಷ 'ಶರಣ ಸಂಸ್ಕೃತಿ ಉತ್ಸವ' ನಡೆಸಲಾಗುತ್ತದೆ. ಡಾ.ಶಿವಮೂರ್ತಿ ಮುರುಘಾ ಶರಣರು ಪತ್ರಿಕಾಗೋಷ್ಠಿಯಲ್ಲಿ ಈ ಬಾರಿಯ ಉತ್ಸವದ ಕುರಿತು ಮಾಹಿತಿ ನೀಡಿದರು.
ಸಂಪರ್ಕ್ ಫಾರ್ ಸಮರ್ಥನ್ : ಮುರುಘಾ ಶ್ರೀ ಭೇಟಿಯಾದ ಶ್ರೀನಿವಾಸ ಪೂಜಾರಿ
'ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು ಈ ಬಾರಿಯ ಉತ್ಸವದ ಅಧ್ಯಕ್ಷರಾಗಿದ್ದಾರೆ. ಸಿದ್ದರಾಪುರದ ಶಿವಕುಮಾರ್ ಪಟೇಲ್ ಅವರು ಕಾರ್ಯಾಧ್ಯಕ್ಷರಾಗಿರುತ್ತಾರೆ' ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.
'ದಶಕಗಳ ಕಾಲದಿಂದ ಮಠವು ರೈತರ ಸಮಸ್ಯೆಗಳನ್ನು ನಿವಾರಿಸಲು ಕೆಲಸ ಮಾಡುತ್ತಿದೆ. ಶರಣ ಸಂಸ್ಕೃತಿ ಉತ್ಸವದ ಜೊತೆ ಕೃಷಿ ಉತ್ಸವವನ್ನು ಆಯೋಜನೆ ಮಾಡಲಾಗುತ್ತದೆ. ಕೃಷಿಯಲ್ಲಿನ ನೂತನ ತಂತ್ರಜ್ಞಾನವನ್ನು ಜನರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಉತ್ಸವ ಆಯೋಜಿಸಲಾಗುತ್ತಿದೆ' ಎಂದು ಶ್ರೀಗಳು ತಿಳಿಸಿದರು.
ಪುರುಷೋತ್ತಮಾನಂದಪುರಿ ಸ್ವಾಮೀಜಿಗಳು ಮಾತನಾಡಿ, 'ಶರಣ ಸಂಸ್ಕೃತಿ ಉತ್ಸವ ಮಧ್ಯ ಕರ್ನಾಟಕ ಭಾಗದ ನೀರಾವರಿ ಯೋಜನೆಗಳು, ಶಿಕ್ಷಣ, ವಿವಿಧ ಅಭಿವೃದ್ಧಿ ಬಗ್ಗೆ ಹೆಚ್ಚು ಗಮನ ಹರಿಸಲಿದೆ. ಉತ್ಸವದ ಕಾರ್ಯಕ್ರಮ ಪಟ್ಟಿಯನ್ನು ಶೀಘ್ರವೇ ಅಂತಿಮಗೊಳಿಸಲಾಗುತ್ತದೆ' ಎಂದರು.