"ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದೇ ಇದ್ದಿದ್ದರೆ ಕೋವಿಡ್ ಹರಡುತ್ತಿರಲಿಲ್ಲ"
ಚಿತ್ರದುರ್ಗ, ಅಕ್ಟೋಬರ್ 24: ಭಾರತದಲ್ಲಿ ಟ್ರಂಪ್ ಕಾರ್ಯಕ್ರಮ ಮಾಡದೆ ಇದ್ದಿದ್ದರೆ ಕೊರೊನಾ ವೈರಸ್ ಹರಡುತ್ತಿರಲಿಲ್ಲ. ದೇಶದಲ್ಲಿ ಕೊರೊನಾ ಹರಡಲು ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೊರೊನಾ ಚಿಕಿತ್ಸೆ ನಿರ್ವಹಣೆಯ ನೆಪದಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ. ಭ್ರಷ್ಟಾಚಾರ ಮಾಡಲು ಈಗ ವ್ಯಾಕ್ಸಿನ್ ನೀಡುವ ನೆಪದಲ್ಲಿ ಮತ್ತೆ ಅವ್ಯವಹಾರಕ್ಕೆ ಮುಂದಾಗುತ್ತಿದೆ. ಜನ ಸಂಕಷ್ಟದಲ್ಲಿರುವಾಗ ಬಿಜೆಪಿಯವರು ಕೋವಿಡ್ ಲಸಿಕೆ ವಿತರಣೆಯನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ" ಎಂದು ಟೀಕಿಸಿದರು.

ಗೂಂಡಾಗಳಿರುವುದೇ ಬಿಜೆಪಿಯಲ್ಲಿ: ಗೂಂಡಾಗಿರಿಯನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತನಾಡುವ ಶೋಭಾ ಕರಂದ್ಲಾಜೆ, ಹತ್ರಾಸ್ ನಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಕೊಲೆಯ ಬಗ್ಗೆ ಮಹಿಳೆಯಾಗಿ ಒಂದು ಮಾತನ್ನೂ ಆಡದೇ ಈಗ ಕಾಂಗ್ರೆಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ಒಬ್ಬ ಇಬ್ಬರಾದರೆ ಹೇಳಬಹುದು. ಪಕ್ಷದಲ್ಲಿ ಇರುವವರೆಲ್ಲ ಬಹುತೇಕರು ಗೂಂಡಾಗಳಾಗಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದರು.












Click it and Unblock the Notifications