ಅಪ್ಪು ಪ್ರೇರಣೆ: ನೇತ್ರದಾನಕ್ಕೆ 33 ಭಾರತ್ ಜೋಡೋ ಯಾತ್ರಿಗಳ ತೀರ್ಮಾನ
ಚಿತ್ರದುರ್ಗ ಅಕ್ಟೋಬರ್ 13: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಚಿತ್ರದುರ್ಗದಲ್ಲಿದೆ. ದಿನದಿಂದ ದಿನಕ್ಕೆ ಹೊಸ ವಿಶೇಷತೆಗಳಿಗೆ ಯಾತ್ರೆ ಸಾಕ್ಷಿಯಾಗುತ್ತಿದೆ. ಸಪ್ಟೆಂಬರ್ 6ರಂದು ಕನ್ಯಾಕುಮಾರಿಯಲ್ಲಿ ಆರಂಭವಾದ ಯಾತ್ರೆ ಕರ್ನಾಟಕದಲ್ಲಿ 21 ದಿನಗಳ ಕಾಲ ಸಾಗಲಿದೆ.
ಸಪ್ಟೆಂಬರ್ 30ರಂದು ಭಾರತ್ ಜೋಡೋ ಕರ್ನಾಟಕ ಪ್ರವೇಶಿಸಿದ್ದು, ಬುಧವಾರ ಚಿತ್ರದುರ್ಗದಲ್ಲಿ ಸಾಗಿತ್ತು. ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಕೂಲಿ ಕಾರ್ಮಿಕರ ಜೊತೆಗೆ, ಮಕ್ಕಳ ಜೊತೆಗೆ ಹಾಗೂ ಕೆಲ ವಿಶೇಷ ವ್ಯಕ್ತಿಗಳ ಜೊತೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಭಾರತ್ ಜೋಡೋ ಪಾದಾಯಾತ್ರೆಯಲ್ಲಿ ರಾಹುಲ್ ಗಾಂಧಿ ಅಂಗಾಂಗ ದಾನ ಮಾಡಿರುವ ಕುಟುಂಬಸ್ಥರ ಜೊತೆಗೆ ಹೆಜ್ಜೆ ಹಾಕಿದ್ದು, ಈ ವಿಶೇಷ ಕ್ಷಣದ ಬಗ್ಗೆ ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಜಾಲತಾಣ ಬರೆದುಕೊಂಡಿದ್ದಾರೆ.

ಅಂಗಾಗ ದಾನ ಪ್ರೀತಿ ಮತ್ತು ತ್ಯಾಗದ ಉದಾಹರಣೆ
ನಟ ಸಂಚಾರಿ ವಿಜಯ್ ಹಾಗೂ ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ಬಸ್ ಅಪಘಾತದಲ್ಲಿ ನಿಧನರಾಗಿರುವ ಕಾಲೇಜು ವಿದ್ಯಾರ್ಥಿ ರಕ್ಷಿತಾ ಹಾಗೂ ವೇದಾ ಮಂಜುನಾಥ್ ಅವರ ಫೋಟೋಗಳನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ ಇವರ ಅಕಾಲಿಕ ನಿಧನದ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಅವರದ್ದು ಖಂಡಿತ ನಮ್ಮೆಲ್ಲರನ್ನು ಅಗಲಿ ಹೋಗುವ ವಯಸ್ಸಲ್ಲ. ರಕ್ಷಿತಾ, ವೇದಾ ಹಾಗೂ ವಿಜಯ್ ಈ ಜಗತ್ತಿಗೆ ಬಹಳ ಬೇಗ ವಿದಾಯ ಹೇಳಿಬಿಟ್ಟರು. ಅವರ ಸಾವಿನಲ್ಲೂ ತಮ್ಮ ಅಂಗಾಂಗಗಳನ್ನು ದಾನ ಮಾಡಿ ಬೇರೊಬ್ಬರ ಜೀವ ಉಳಿಸುವ ಮೂಲಕ ಇತರರಿಗೆ ಸಂತಸ ಹಾಗೂ ಜೀವನ ಮೌಲ್ಯಗಳನ್ನು ಉಡುಗೊರೆಯಾಗಿ ನೀಡಿದರು. ಇದು ಪ್ರೀತಿ ಮತ್ತು ತ್ಯಾಗದ ಒಂದು ಉದಾಹರಣೆ ಎಂದು ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದು ಜೀವನದ ಅತ್ಯಮೂಲ್ಯ ಭಾಗ ಎಂದ ಕಾಂಗ್ರೆಸ್ ನಾಯಕ
ಬುಧವಾರದ ಭಾರತ್ ಜೋಡೋ ಯಾತ್ರೆಯ ಪ್ರಮುಖ ಕ್ಷಣ ಹಂಚಿಕೊಂಡಿರುವ ರಾಹುಲ್ ಗಾಂಧಿ, ಈ ಅಂಗಾಂಗ ದಾನಿಗಳ ಕೆಚ್ಚೆದೆಯ ಹೃದಯವುಳ್ಳ ಕುಟುಂಬದ ಸದಸ್ಯರೊಂದಿಗೆ ಜೊತೆಯಾಗಿ ನಡೆಯುವ ಅವಕಾಶ ಇಂದು ನನ್ನದಾಗಿತ್ತು. ಅವರು ಜೀವನದಲ್ಲಿ ತ್ಯಾಗ, ಸಹಾನುಭೂತಿ ಮತ್ತು ಮಾನವೀಯತೆಯನ್ನು ನಿಜವಾದ ಅರ್ಥದಲ್ಲಿ ನಿರೂಪಿಸಿ ತೋರಿಸಿದ್ದಾರೆ. ಮಾನವೀಯತೆ, ಸಾಮಾಜಿಕ ಕಳಕಳಿ ಮತ್ತು ಸಹಾನುಭೂತಿಯ ಜೀವನೋತ್ಸಾಹವನ್ನು ನಾವು ಉತ್ತೇಜಿಸಬೇಕು ಮತ್ತು ಪಾಲಿಸಬೇಕು. ಇಂದಿನ ದ್ವೇಷಪೂರಿತ ಮತ್ತು ದುರಾಸೆಯ ಸಮಾಜದಲ್ಲಿ ಇವು ನಾವೆಂದಿಗೂ ಮರೆಯಲಾಗದ, ಕೈಬಿಡಲಾಗದ ಜೀವನದ ಅತ್ಯಮೂಲ್ಯ ಭಾಗಗಳಾಗಿವೆ ಎಂದಿದ್ದಾರೆ.

ನೇತ್ರದಾನಕ್ಕೆ ಒಪ್ಪಿದ 33 ಭಾರತ್ ಜೋಡೋ ಯಾತ್ರಿಗಳು
ಇನ್ನು ದಿವಂಗತ ಡಾ. ರಾಜ್ಕುಮಾರ್ ಮತ್ತು ಅವರ ಪುತ್ರ, ದಿ. ಡಾ. ಪುನೀತ್ ರಾಜ್ಕುಮಾರ್ ಅವರ ನೇತ್ರದಾನದಂತಹ ನಿಸ್ವಾರ್ಥ ಕಾರ್ಯವು ಸಹಸ್ರಾರು ಕನ್ನಡಿಗರು ಮತ್ತು ಭಾರತೀಯರಿಗೆ ಸ್ಫೂರ್ತಿ ನೀಡಿದ್ದು, ಅಂಗಾಂಗ ದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿವೆ. ಕರ್ನಾಟಕದ ಈ ಸುಂದರ ನಾಡಿನಿಂದ 33 ಭಾರತ್ ಜೋಡೋ ಯಾತ್ರಿಗಳು ತಮ್ಮ ಕಣ್ಣುಗಳನ್ನು ದಾನ ಮಾಡಲು ಪಣ ತೊಟ್ಟಿದ್ದಾರೆ ಎಂದು ನಿಮಗೆ ತಿಳಿಸಲು ನನಗೆ ಅಪಾರ ಹೆಮ್ಮೆಯಿದೆ. ಸಾಮರಸ್ಯ, ಭ್ರಾತೃತ್ವ ಮತ್ತು ಮಾನವೀಯ ಗುಣಗಳಲ್ಲಿ ಅಪರಿಮಿತ ಪ್ರೀತಿ ಹಾಗೂ ಸಂತಸ ಅಡಗಿದೆ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.

ರಾಹುಲ್ ಗಾಂಧಿ ಬಳಿ ಕಷ್ಟ ತೋಡಿಕೊಂಡ ಲೈಂಗಿಕ ಅಲ್ಪಸಂಖ್ಯಾತರು
ಇನ್ನು ಚಿತ್ರದುರ್ಗದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಂದಿಗೆ ಹೆಜ್ಜೆಹಾಕಿದ್ದು, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ. ರಾಹುಲ್ ಗಾಂಧಿ ಅವರೊಂದಿಗೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ತಮ್ಮ ಕಥೆಗಳನ್ನು ಹೇಳಿಕೊಂಡಿದ್ದು, ದೇಶದಲ್ಲಿ ತಮ್ಮ ಸಮುದಾಯಕ್ಕೆ ಉದ್ಯೋಗ ಸೃಷ್ಟಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಸರ್ಕಾರ ತಮ್ಮ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆಯೂ ಸಹ ರಾಹುಲ್ ಗಾಂಧಿ ಅವರೊಂದಿಗೆ ವಿವರಿಸಿದ್ದಾರೆ.












Click it and Unblock the Notifications