Murugha Shree Pocso Case : ನ.14ರವರೆಗೆ ಮುರುಘಾ ಶರಣರ ನ್ಯಾಯಾಂಗ ಬಂಧನ ವಿಸ್ತರಣೆ
ಚಿತ್ರದುರ್ಗ, ನವೆಂಬರ್ 8: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಮತ್ತು ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಚಿತ್ರದುರ್ಗದ ಮುರುಘಾ ಮಠ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಣೆಯಾಗಿದೆ. ಚಿತ್ರದುರ್ಗ ಜಿಲ್ಲಾ ಸೆಷನ್ಸ್ ಕೋರ್ಟ್ ನವೆಂಬರ್ 14 ವರೆಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ನವೆಂಬರ್ 3 ರಂದು ಮುರುಘಾ ಶರಣರ ನ್ಯಾಯಾಂಗ ಬಂಧನ ಅವಧಿಯನ್ನು ನ.8ರವರೆಗೆ ವಿಸ್ತರಿಸಲಾಗಿತ್ತು. ಮಂಗಳವಾರ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪೊಲೀಸರು ಚಿತ್ರದುರ್ಗ ಮುರುಘಾ ಶ್ರೀಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.
ಸಚಿವ ಬೈರತಿ ಬಸವರಾಜ್ಗೆ ₹15 ಲಕ್ಷ ಲಂಚ ಆರೋಪ: ಆಡಿಯೋ ವೈರಲ್
ಈ ವೇಳೆ ಕೋರ್ಟ್ ಮುರುಘಾ ಶ್ರೀಗಳ ನ್ಯಾಯಾಂಗ ಬಂಧನ ಅವಧಿಯನ್ನು ನವೆಂಬರ್ 14ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇನ್ನು ಇವರ ಜೊತೆಗೆ ಮಠದ ಪ್ರಕರಣದ 2ನೇ ಆರೋಪಿ ಲೇಡಿ ವಾರ್ಡನ್ ರಶ್ಮಿ ಹಾಗೂ ಪ್ರಕರಣದ ಮೂರನೇ ಆರೋಪಿ ಪರಮಶಿವಯ್ಯರನ್ನು ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇವರ ಬಂಧನದ ಅವಧಿಯನ್ನು ನ್ಯಾಯಾಲಯ ವಿಸ್ತರಿಸಲಾಗಿದ್ದು, ಇನ್ನು ಆರೋಪಿಗಳನ್ನು ಕಾರಾಗೃಹಕ್ಕೆ ಕರೆದೊಯ್ಯಲಾಯಿತು.
ಮುರುಘಾ ಮಠದಲ್ಲಿ ಫೋಟೋ ಕದ್ದಿದ್ದವರ ಬಂಧನ
ಮುರುಘಾ ಮಠದಲ್ಲಿ ಗಣ್ಯರ ಜೊತೆಗೆ ಶಿವಮೂರ್ತಿ ಶರಣರಿದ್ದ 47 ಫೋಟೊಗಳನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಹೊಸಹಳ್ಳಿ ಗ್ರಾಮ ಪಂಚಾಯತ್ ಸದಸ್ಯ ಮೋಹನಮೂರ್ತಿ ಹಾಗೂ ಎಸ್ಜೆಎಂ ಪಾಲಿಟೆಕ್ನಿಕ್ ಕಾಲೇಜು ಉಪನ್ಯಾಸಕ ಶಿವಾನಂದಸ್ವಾಮಿ ಬಂಧಿತರು ಎಂದು ತಿಳಿದು ಬಂದಿದೆ.