ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದು ಪೋಷಕರ ಆದ್ಯ ಕರ್ತವ್ಯ: ನಟ ಜಗ್ಗೇಶ್
ಚಿತ್ರದುರ್ಗ, ಜನವರಿ 05 : ಈಗಿನ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುವುದು ಪೋಷಕರ ಕರ್ತವ್ಯ, ಅದರಿಂದ ಹಿಂದೆ ಸರಿದರೆ ಮುಂದೆ ಬಹುದೊಡ್ಡ ಬೆಲೆ ಕಟ್ಟಬೇಕಾಗುತ್ತದೆ ಎಂದು ನಟ ಜಗ್ಗೇಶ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಏರ್ಪಡಿಸಿದ್ದ ಶಾಲಾ ವಾರ್ಷಿಕೊತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಮಕ್ಕಳು ಪ್ರಶಾಂತವಾದ ವಾತಾವರಣದಲ್ಲಿ ಕುಳಿತು ದೊಡ್ಡ ದೊಡ್ಡ ಕನಸು ಕಾಣಬೇಕು ಒಂದಲ್ಲ ಒಂದು ದಿನ ಅದು ಯಶಸ್ಸು ಕಾಣುತ್ತದೆ. ಪೋಷಕರು ಯಾವ ದಾರಿಯಲ್ಲಿ ನಡೆಯುತ್ತಾರೋ, ಮಕ್ಕಳು ಅದೇ ತುಳಿಯುತ್ತಾರೆ ಎಂದರು.
ಪೋಷಕರು, ಮಕ್ಕಳ ಮನಸ್ಸಲ್ಲಿ ಏನಿದೆ ಎಂಬುದನ್ನು ಕಂಡುಹಿಡಿದುಕೊಂಡು ಅವರ ಮನಸ್ಸಿಗೆ ಗುರಿಯನ್ನು ರೂಪಿಸುವ ಅದ್ಭುತವಾದ ಪೋಷಕರು ನೀವು ಆಗಬೇಕು ಎಂದು ತಿಳಿಸಿದರು.

ಯಾವ ತಂದೆ-ತಾಯಿಗಳು ಮನೆಯಲ್ಲಿ ಸರಿಯಾಗಿ ಇರುತ್ತಾರೋ ಅವರ ಮಕ್ಕಳು ಬದುಕಿನಲ್ಲಿ ಯಾವ ತಪ್ಪು ಮಾಡುವುದಿಲ್ಲ, ಸರಿಯಾದ ಹಾದಿಯಲ್ಲಿ ನಡೆಯುತ್ತಾರೆ.
"ನಾನು ಬಾಲ್ಯಾವಸ್ಥೆಯಲ್ಲಿದ್ದಾಗ ನನ್ನ ಅಜ್ಜಿ, ಚಿಕ್ಕಮ್ಮಂದಿರು ಬೆಳಿಗ್ಗೆ ಎದ್ದು ರಾಗಿ ಬೀಸುತ್ತಿದ್ದರು. ತಾತಂದಿರು ಬೆಳಿಗ್ಗೆ ಎದ್ದ ತಕ್ಷಣ ಕೈಕಾಲು ತೊಳೆದು ಹೊಲದಲ್ಲಿ ಶ್ರೇಷ್ಠವಾಗಿ ಕೆಲಸ ಮಾಡುತ್ತಿದ್ದರು."
ಮಕ್ಕಳಿಗೆ ಜೀವನದ ಪಾಠವನ್ನು ಕಲಿಸುವರು ಯಾವ ರೀತಿ ಮಾತನಾಡಬೇಕು, ಅವರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು, ಯಾರಾದರೂ ಮನೆಗೆ ಬಂದರೆ, ಅವರಿಗೆ ದೊಡ್ಡವರು ಬಂದಿದ್ದಾರೆ ಕಾಲಿಗೆ ನಮಸ್ಕಾರ ಮಾಡು ಅಂತ ಹೇಳಿಕೊಡುತ್ತಿದ್ದರು. ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುವಂತೆ ಹೇಳಿಕೊಡುತ್ತಿದ್ದರು. ಈಗ ಎಲ್ಲಿ ಹೋಯ್ತು ಆ ಸಂಪ್ರದಾಯ? ನಮ್ಮಲ್ಲಿ ನಿಮ್ಮಲ್ಲಿ ಇದೆಯಾ? ಎಂದು ಪ್ರಶ್ನಿಸಿದರು.

ನಾವು ಇಂದು ಆತ್ಮ ಸಾಕ್ಷಿಗೆ ಪ್ರಶ್ನೆ ಮಾಡಿಕೊಳ್ಳಬೇಕು, ಇವತ್ತು ನಮ್ಮ ಸಂಸ್ಕೃತಿ ಬಿಟ್ಟು ವಿದೇಶಿಯರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದೇವೆ. ನಾನು ಎಲ್ಲಾದರೂ ಹೋದರೆ ಶೇಕ್ ಹ್ಯಾಂಡ್ ಮಾಡ್ತಾರೆ, ನಾವು ಎರಡು ಕೈಗಳನ್ನು ಮುಗಿಯುವುದರಿಂದ ನಮ್ಮ ದೇಹದಲ್ಲಿರುವ ಶಕ್ತಿ ನಮ್ಮಲ್ಲೇ ಇರುತ್ತದೆ ಎಂದರು.
ನಾವು ಶೇಕ್ ಹ್ಯಾಂಡ್ ಮಾಡುವುದಿಂದ ಅವರ ಕೈ ಕೂಲುಕುವುದರಿಂದ ಅವರ ದರಿದ್ರ ತನಗಳು ನಮಗೆ ಬರುತ್ತವೆ ಎಂದು ಜಗ್ಗೇಶ್ ತಿಳಿಸಿದರು. ಸನಾತನ ಧರ್ಮದಲ್ಲಿ ಪರಸ್ಪರ ಭೇಟಿ ಮಾಡಿದಾಗ ಎರಡು ಕೈಗಳನ್ನು ನಮಸ್ಕಾರ ಮಾಡುವುದು ಇದೆ. ಆದರೆ ಈಗ ನಮ್ಮಲ್ಲಿ ಹಳೇ ಸಂಪ್ರಾದಾಯ ಹೋಗಿ ಶೆಕ್ ಹ್ಯಾಂಡ್ ಹಂತಕ್ಕೆ ತಲುಪಿದ್ದೀವಿ ಎಂದು ವ್ಯಂಗ್ಯವಾಡಿದರು.
ಹಳೆ ಸಂಪ್ರದಾಯಗಳನ್ನು ನಾವು ಇಂದಿನ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ತಿಳಿಸಿ ಹೇಳಬೇಕು. ಶಿಸ್ತು, ಸಂಯಮ ಮತ್ತು ಭವಿಷ್ಯದ ಗುರಿಯನ್ನು ಕಲಿಸಬೇಕು, ಆದರೆ ಇಂದು ಯಾರು ಇದನ್ನು ಮಾಡ್ತಿಲ್ಲ ಎಂದರು.
ನಟ ಜಗ್ಗೇಶ್ ಅವರ ಮಾತಿನ ನಂತರ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆದವು. ಈ ಕಾರ್ಯಕ್ರಯದಲ್ಲಿ ಪೋಲಿಸ್ ಅಧಿಕಾರಿ ಸಂದೀಪ್ ಪಾಟೀಲ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ವಿಶ್ವನಾಥ್ ಹೀರೆಮಠ್, ಡಿ.ಟಿ. ಶ್ರೀನಿವಾಸ್, ಶಾಲೆಯ ಮಹಾಪೋಷಕ ನಾ. ತಿಪ್ಪೇಸ್ವಾಮಿ, ಪ್ರಾಂಶುಪಾಲ ಚಂದ್ರಯ್ಯ ಮತ್ತಿತರರು ಇದ್ದರು.












Click it and Unblock the Notifications