ದೆಹಲಿಗೆ ಹೊರಟು ನಿಂತ ಎಂ. ಪಿ. ರೇಣುಕಾಚಾರ್ಯ
ಚಿತ್ರದುರ್ಗ, ಜುಲೈ 19; "ನಾಳೆ, ನಾಡಿದ್ದು ನಾನು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕಾಗಿ ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋದ ತಕ್ಷಣವೇ ರಾಷ್ಟ್ರೀಯ ನಾಯಕರು ಸಮಯ ನೀಡಿ ಮಾತನಾಡಿಸುತ್ತಾರೆ ಎಂಬುದು ಸುಳ್ಳು" ಎಂದು ಹೊನ್ನಾಳಿ ಶಾಸಕ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದರು.
ಸೋಮವಾರ ಚಿತ್ರದುರ್ಗ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯಾಧ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ" ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ವಿಚಾರಕ್ಕೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ, "ಕಟೀಲ್ ಹೆಸರಲ್ಲಿ ನಕಲಿ ಆಡಿಯೋ ಸೃಷ್ಠಿಯಾಗಿದ್ದು, ಈ ಬಗ್ಗೆ ನಾನು ಕಟೀಲ್ ಅವರಿಗೆ ಕರೆ ಮಾಡಿ ಮಾತನಾಡಿದ್ದೇನೆ. ಕಟೀಲ್ ಅವರಿಗೆ ಕೆಟ್ಟ ಹೆಸರು ತರಲು ನಕಲಿ ಆಡಿಯೋ ಸೃಷ್ಠಿ ಮಾಡಿದ್ದಾರೆ" ಎಂದರು.

"ರಾಷ್ಟ್ರೀಯ ನಾಯಕರು ಮತ್ತು ಬಿಎಸ್ವೈ ಸಂಬಂಧ ಹಳೆಯದು. ಯಾರೋ ಹೇಳಿದಾಕ್ಷಣ ನಾಯಕತ್ವ ಬದಲಾವಣೆ ಅಸಾಧ್ಯ. ಸಿಎಂ ಯಡಿಯೂರಪ್ಪ ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿಕೊಂಡು ಬಂದವರು. ಇದಲ್ಲದೆ ಅದೆಷ್ಟೋ ಬಾರಿ ಜೈಲಿಗೆ ಹೋಗಿದ್ದಾರೆ" ಎಂದು ಹೇಳಿದರು.
"ಮುರುಗೇಶ್ ನಿರಾಣಿ ಅವರು ದೆಹಲಿಗೆ ಹೋದಾಕ್ಷಣ ರಾಜಕಾರಣಕ್ಕೆ ಎನ್ನಲಾಗದು, ನಿರಾಣಿ ಕೈಗಾರಿಕೋದ್ಯಮಿ, ಉದ್ಯಮದ ವಿಚಾರಕ್ಕೆ ದೆಹಲಿಗೆ ಹೋಗಿರಬಹುದು" ಎಂದು ತಿಳಿಸಿದರು.
"ಈ ಹಿಂದೆ ಸಿಎಂ ಬದಲಾವಣೆ ವಿಚಾರವಾಗಿ ಯಡಿಯೂರಪ್ಪ ಪರ 65 ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಹೈಕಮಾಂಡ್ ಸೂಚನೆ ಮೇರೆಗೆ ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ. ಹೈಕಮಾಂಡ್ ಈವರೆಗೆ ಯಾವುದೇ ಸೂಚನೆ ಕೊಟ್ಟಿಲ್ಲ" ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದರು.
"ಹಿಂದುಳಿದ, ವೀರಶೈವ ಮಠಾಧೀಶರ ಜೊತೆ ನಿರಂತರ ಸಂಪರ್ಕದಲ್ಲಿರುತ್ತೇನೆ. ಇಂದಿನ ಮಠಾಧೀಶರ ಭೇಟಿ ವಿಶೇಷವೇನಲ್ಲ, ಶ್ರೀಗಳ ಸಲಹೆ ಸ್ವೀಕರಿಸುತ್ತೇನೆ" ಎಂದು ರೇಣುಕಾಚಾರ್ಯ ಹೇಳಿದರು.











Click it and Unblock the Notifications