'ಅಲ್ಖೈದಾ ಮುಖ್ಯಸ್ಥನ ವಿಡಿಯೋ ಬಿಜೆಪಿಯವರೇ ಏಕೆ ಮಾಡಿರಬಾರದು?'
ಚಿತ್ರದುರ್ಗ, ಏಪ್ರಿಲ್ 8: ಮಂಡ್ಯದಲ್ಲಿ ಜೈ ಶ್ರೀರಾಮ್ ಘೋಷಣೆಗೆ ಪ್ರತ್ಯುತ್ತರವಾಗಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನಿಗೆ, ಉಗ್ರ ಸಂಘಟನೆ ಅಲ್ಖೈದಾ ಮುಖ್ಯಸ್ಥ ವಿಡಿಯೋ ಮೂಲಕ ಬೆಂಬಲ ಸೂಚಿಸಿದ ವಿಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಜಾರಕಿಹೊಳಿ, "ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿಯವರು ಈ ರೀತಿಯ ಬೇಕಾದಷ್ಟು ಫೇಕ್ ವಿಡಿಯೋಗಳನ್ನು ಮಾಡಿರುವುದು ಗೊತ್ತಿರುವ ವಿಚಾರ. ಪ್ರಮುಖ ವಿಚಾರವನ್ನು ಬೇರೆ ಕಡೆಗೆ ಸೆಳೆಯಲು ಸಾಕಷ್ಟು ವಿಡಿಯೋಗಳನ್ನು ಇವರೇ ಸೃಷ್ಟಿಸಿದ್ದರು"ಎಂದು ಜಾರಕಿಹೊಳಿ ಅಭಿಪ್ರಾಯ ಪಟ್ಟರು.
"ಮಂಡ್ಯದ ವಿದ್ಯಾರ್ಥಿನಿಯ ವಿಚಾರದಲ್ಲೂ ಅವರೇ ಇಂತಹ ವಿಡಿಯೋವನ್ನು ಯಾಕೆ ಹುಟ್ಟು ಹಾಕಿರಬಾರದು? ನಮ್ಮ ಜಿಲ್ಲೆಯಲ್ಲೂ ಈ ರೀತಿ ಫೇಕ್ ಮಾಡಿ ಒಬ್ಬ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಬಿಜೆಪಿಯವರು ಈ ರೀತಿ ಮಾಡಿದ್ದ ಉದಾಹರಣೆಗಳು ಇದ್ದಾಗ, ಮುಸ್ಕಾನ್ ವಿಚಾರದಲ್ಲಿ ಅವರೇ ಯಾಕೆ ಮಾಡಿರಬಾರದು"ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

"ಈ ವಿಚಾರದಲ್ಲಿ ಎಲ್ಲರೂ ಕಾಂಗ್ರೆಸ್ಸಿಗರು ಮಾತನಾಡಬೇಕೆಂದು ಏನೂ ಇಲ್ಲ, ನಮ್ಮ ಅಧ್ಯಕ್ಷರು ಮತ್ತು ಸಿದ್ದರಾಮಯ್ಯನವರು ಮಾತನಾಡಿದ್ದಾರೆ. ಬಿಜೆಪಿಯ ಹಿಂದುತ್ವ ಬೇರೆ, ನಮ್ಮ ಹಿಂದುತ್ವ ಬೇರೆ. ಅವರು ಅವರ ಪರವಾಗಿ ಮಾತಾನಾಡಿದರೆ, ನಮ್ಮ ನಿಲುವಿಗೆ ನಾವು ಅಂಟಿಕೊಳ್ಳಬೇಕಾಗುತ್ತದೆ"ಎಂದು ಸತೀಶ್ ಜಾರಕಿಹೊಳಿ ಅಭಿಪ್ರಾಯ ಪಟ್ಟಿದ್ದಾರೆ.
ರಾಜ್ಯ ಗೃಹ ಸಚಿವರ ಕಾರ್ಯವೈಖರಿಯನ್ನು ಟೀಕಿಸಿರುವ ಜಾರಕಿಹೊಳಿ, "ಗೃಹ ಸಚಿವರಿಗೆ ಜವಾಬ್ದಾರಿ ಅನ್ನುವುದು ಇಲ್ಲ. ಪೊಲೀಸರು ನೀಡಬೇಕಾಗಿದ್ದ ಹೇಳಿಕೆಯನ್ನು ಆತುರಾತುರವಾಗಿ ಇವರು ಹೇಳಿದ್ದಾರೆ. ಉರ್ದು ಬರುವುದಿಲ್ಲ ಎಂದು ಸುಳ್ಳು ಹೇಳಿ, ಇವರೇ ಪ್ರಚೋದನೆ ಮಾಡಲು ಮುಂದಾಗಿದ್ದಾರೆ'ಎಂದು ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
"ರಾಜ್ಯ ಗೃಹ ಸಚಿವರಾಗಿ ಬೇಜಾವಬ್ದಾರಿಯಿಂದ ನಡೆದುಕೊಂಡಿದ್ದಾರೆ, ಅವರ ವಿರುದ್ದ ರಾಜ್ಯದ ಎಲ್ಲಾ ಠಾಣೆಯಲ್ಲೂ ದೂರು ದಾಖಲಿಸಲಿದ್ದೇವೆ. ಇವರು ಮಂತ್ರಿಯಾಗಿದ್ದರೂ ಕೂಡಾ, ಘಟನೆಯ ಬಗ್ಗೆ ವಿವರಣೆ ನೀಡಬೇಕಾದವರು ಪೊಲೀಸರೇ ಹೊರತು, ಇವರಲ್ಲ"ಎಂದು ಬೆಂಗಳೂರಿನ ಗೋರಿ ಪಾಳ್ಯದ ಘಟನೆಯನ್ನು ಉಲ್ಲೇಖಿಸಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications