ಹಿರಿಯೂರು: ಬಿಜೆಪಿ, ಜೆಡಿಎಸ್ ಅಬ್ಬರದ ಪ್ರಚಾರ, ಕಣಕ್ಕಿಳಿಯದ ಕಾಂಗ್ರೆಸ್
ಚಿತ್ರದುರ್ಗ, ಏಪ್ರಿಲ್ 14: ವಿಧಾನಸಭೆ ಚುನಾವಣೆಯ ಕಾವು ದಿನ ದಿನಕ್ಕೆ ರಂಗೇರುತ್ತಿದ್ದು ಹಿರಿಯೂರಿನಲ್ಲಿ ಈಗಾಗಲೇ ಮೂರು ಪಕ್ಷದ ಟಿಕೆಟ್ ಘೋಷಣೆಯಾಗಿದೆ.
ಕಾಂಗ್ರೆಸ್ನಿಂದ ಮಾಜಿ ಸಚಿವ ಡಿ.ಸುಧಾಕರ್, ಜೆಡಿಎಸ್ನಿಂದ ಸ್ಥಳೀಯ ಅಭ್ಯರ್ಥಿ ಡಿ. ಯಶೋಧರ , ಬಿಜೆಪಿಯಿಂದ ಕೆ.ಪೂರ್ಣಿಮಾ ಶ್ರೀನಿವಾಸ್ ಕಣಕ್ಕೆ ಇಳಿಯಲಿದ್ದಾರೆ. ಇದರ ಜೊತೆಗೆ ಪಕ್ಷೇತರರು ಚುನಾವಣೆ ಸಮಯಕ್ಕೆ ಪ್ರತ್ಯಕ್ಷವಾಗುವವರೂ ಸೇರಿ ಚುನಾವಣಾ ಅಖಾಡಕ್ಕೆ ಸಿದ್ದವಾಗಿದೆ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಟಿಕೆಟ್ಗಳು ಅಧಿಕೃತವಾಗಿ ಘೋಷಣೆ ಆಗಿದ್ದು, ಕಾಂಗ್ರೆಸ್ ನಲ್ಲಿ ಸುಧಾಕರ್ ಹೊರತುಪಡಿಸಿ ಯಾವುದೇ ಟಿಕೆಟ್ ಆಕಾಂಕ್ಷಿ ಇಲ್ಲದ ಕಾರವಣ ಅವರಿಗೇ ಟಿಕೆಟ್ ಖಾತ್ರಿ ಆಗಲಿದೆ. ಮೂರು ಪಕ್ಷಗಳ ನಡುವೆ ಜಿದ್ದಾ-ಜಿದ್ದಿನ ಸ್ಪರ್ಧೆ ಏರ್ಪಟ್ಟಿದ್ದು, ಈ ಬಾರಿಯ ಚುನಾವಣೆ ಅಸಾಮಾನ್ಯವಾಗಿರುವ, ಊಹಿಸಲು ಸಾಧ್ಯವಾಗದ ರೀತಿ ಇರುವ ಎಲ್ಲ ಲಕ್ಷಗಳು ಈಗಲೇ ಗೋಚರಿಸುತ್ತಿವೆ.

ಬಿಜೆಪಿ ಅಭ್ಯರ್ಥಿಗೆ ಅದ್ದೂರಿ ಸ್ವಾಗತ
ಹಿರಿಯೂರು ವಿಧಾನಸಭಾ ಕ್ಷೇತ್ರದಕ್ಕೆ ಮೊದಲನೆ ಬಾರಿಗೆ ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದು ಸಾವಿರಾರು ಅಭಿಮಾನಿಗಳು, ಕಾರ್ಯಕರ್ತರು ಹಾರ ಹಾಕಿ, ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಕ್ಷೇತ್ರಕ್ಕೆ ಸ್ವಾಗತ ಕೋರಿದರು. ಕಳೆದ ಬಾರಿ ಪೂರ್ಣಿಮಾ ಅವರ ತಂದೆ ಎ.ಕೃಷ್ಣಪ್ಪ ಕೂದಲೆಳೆ ಅಂತರದಲ್ಲಿ ಸೋತಿದ್ದರು, ಈ ಅನುಕಂಪದ ಆಧಾರದ ಮೇಲೆ ಮಗಳಿಗೆ ಟಿಕೆಟ್ ನೀಡಿದ್ದಾರೆ.

ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಬೆಂಬಲ
ಉರಿಬಿಸಿಲು ಲೆಕ್ಕಿಸದೆ ಬಿಜೆಪಿ ಅಭ್ಯರ್ಥಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರು ಪ್ರಚಾರಕ್ಕೆ ಧುಮುಕಿದ್ದು ಕ್ಷೇತ್ರದ ಹಳ್ಳಿ-ಹಳ್ಳಿಗೂ ತೆರಳಿ ಮತ ಯಾಚನೆ ಮಾಡುತ್ತಿದ್ದಾರೆ. ಹಿರಿಯೂರು ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡಲು ಅವಕಾಶ ಮಾಡಿಕೊಡಿ ಎನ್ನುವ ಮೂಲಕ ಪ್ರಚಾರದಲ್ಲಿ ತೊಡಗಿದ್ದಾರೆ. ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ಕೂಡ ಪ್ರಚಾರಕ್ಕೆ ಕೈ ಜೋಡಿಸಿದ್ದಾರೆ.

ನೆಲೆ ಇಲ್ಲದ ಬಿಜೆಪಿಗೆ ನೆಲೆ ಕಲ್ಪಿಸಿದ ಡಿ.ಟಿ.ಶ್ರೀನಿವಾಸ್
ಹಿರಿಯೂರು ಕ್ಷೇತ್ರ ಎಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರ ಕೋಟೆ ಎಂದೇ ಹೆಸರು ಪಡೆದಿರುವ ಕ್ಷೇತ್ರ. ಇಲ್ಲಿ ಬಿಜೆಪಿಗೆ ನೆಲೆಯೇ ಇರಲಿಲ್ಲ ಆದರೆ ಆ ಚಿತ್ರಣ ಬದಲಿಸಿದ್ದು ಡಿ.ಟಿ.ಶ್ರೀನಿವಾಸ್. ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿಕೊಂಡು. ಪ್ರಬಲ ಸಮುದಾಯದ ಮುಖಂಡರನ್ನು ಭೇಟಿ ಮಾಡಿ , ಯುವಕರನ್ನು ಸಂಘಟಿಸಿಕೊಂಡು ಇಂದು ಜಿ.ಪಂ. ಒಬ್ಬ ಸದಸ್ಯರು, ತಾಲ್ಲೂಕು ಪಂಚಾಯ್ತಿ ಇಬ್ಬರು ಸದಸ್ಯರು ಸೇರಿದಂತೆ ಐದಾರು ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಅಧ್ಯಕ್ಷರ ಅಧಿಕಾರ ಒಳಗೊಂಡಂತೆ , ಮೊದಲನೇ ಬಾರಿಗೆ ಹಿರಿಯೂರು ನಗರಸಭೆ ಆಡಳಿತದಲ್ಲಿ ಕಮಲ ಅರಳಿಸಿದ್ದು ಶ್ರೀನಿವಾಸ್ ಅವರ ಶ್ರಮಕ್ಕೆ ಸಿಕ್ಕ ಫಲ.

ಹೊರಗಿನವರಿಂದಲೂ ಟಿಕೆಟ್ಗೆ ಬೇಡಿಕೆ
ಈ ಬಾರಿ ಜೆಡಿಎಸ್ ಟಿಕೆಟ್ಗಾಗಿ ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎಂದು ಸರತಿ ಸಾಲಿನಲ್ಲಿ ನಿಂತಿದ್ದರು. ಜಿ.ಜಯರಾಮಯ್ಯ , ಮುತ್ತುರಾಜ್, ನರಸಿಂಹ ಮೂರ್ತಿ, ಬಿ.ಹೆಚ್.ಮಂಜುನಾಥ್, ವೀರೇಂದ್ರ (ಪಪ್ಪಿ), ಹೀಗೆ ಸಾಕಷ್ಟು ಹೆಸರುಗಳು ಕೇಳಿಬಂದಿದ್ದವು. ಹಬ್ಬ ,ಜಾತ್ರೆಗಳಲ್ಲಿ , ಪ್ಲೇಕ್ಸ್, ಬ್ಯಾನರ್ಗಳು ಸಹ ಜೋರಾಗಿ ಮಿಂಚುತ್ತಿದ್ದವು. ಅಂತಿಮವಾಗಿ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಡಿ. ಯಶೋಧರ ನವರು ಅಭ್ಯರ್ಥಿಯಾಗಿ ಘೋಷಣೆಯಾದರು. ಇವರು ಸ್ಥಳೀಯರೇ ಆಗಿರುವುದು ವಿಶೇಷ.

ಹಳ್ಳಿ ತಿರುಗುತ್ತಿರುವ ಜೆಡಿಎಸ್ ಅಭ್ಯರ್ಥಿ
ಡಿ.ಯಶೋಧರ ಅವರ ಅಭ್ಯರ್ಥಿ ಎಂದು ಘೋಷಣೆ ಆದಂದಿನಿಂದಲೂ ಮನೆ ಮನೆಗೆ ತೆರಳಿ ಕುಮಾರಸ್ವಾಮಿಯ 20 ತಿಂಗಳ ಆಡಳಿತ ಅವಧಿಯ ಸಾಧನೆಯನ್ನು ತಿಳಿಸುತ್ತಾ , ಸ್ಥಳೀಯ ಶಾಸಕರ ವಿರುದ್ಧ ವಾಗ್ದಾಳಿ ನೆಡೆಸುವ ಮೂಲಕ ಹಳ್ಳಿಗಳಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷ ಎಂದರೆ ಗ್ರಾಮಗಳಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಯಶೋಧರ ಅವರಿಗೆ ಉತ್ತಮ ಸ್ವಾಗತ ಮತ್ತು ಬೆಂಬಲ ದೊರಕುತ್ತಿದ್ದು ಜೆಡಿಎಸ್ ಗೆಲ್ಲುವ ಆಸೆ ಹೆಚ್ಚಿಸಿದೆ.

ಸಮಾವೇಶ ಮಾಡಿದ್ದಷ್ಟೆ ಪ್ರಚಾರ
ಬಿಜೆಪಿ, ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಆರಂಭಿಸಿದ್ದರೂ ಕೂಡಾ ಹಾಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಇನ್ನೂ ಪ್ರಚಾರ ಆರಂಭಿಸದಿರುವುದು ಆಶ್ಚರ್ಯ ಮೂಡಿಸಿದೆ. ಮೂರ್ನಾಲ್ಕು ಕಾಂಗ್ರೆಸ್ ಸಮಾವೇಶ ಮಾಡಿದ್ದು ಜೊತೆಗೆ ಕಿಲಾರದಹಳ್ಳಿ ಗೊಲ್ಲರಹಟ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ನಡಿಗೆ ಕಾಡುಗೊಲ್ಲರ ಹಟ್ಟಿಯ ಕಡೆಗೆ ಎಂಬ ವಿನೂತನ ಕಾರ್ಯಕ್ರಮ ಮಾಡಿ ಗಮನ ಸೆಳೆದದ್ದು ಬಿಟ್ಟರೆ ಗ್ರೌಂಡ್ ಲೆವೆಲ್ ಪ್ರಚಾರ ಇನ್ನೂ ಪ್ರಾರಂಭವಾಗಿಲ್ಲ.

ಸೋಲುವ ಭಯವೋ ಅಥವಾ ಗೆಲ್ಲುವ ವಿಶ್ವಾವೋ?
ಸತತ ಎರಡು ಬಾರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಒಳ ರಾಜಕೀಯ ಮಾಡುತ್ತಿದ್ದು, ಆ ಮೂಲಕವೇ ಉಳಿದ ಪಕ್ಷಗಳನ್ನು ಹಣಿಯಲು ತಂತ್ರ ರೂಪಿಸಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಹರಿದಾಡುತ್ತಿವೆ. ಸೋಲುವ ಭಯವೋ ಅಥವಾ ಗೆಲ್ಲುವ ವಿಶ್ವಾವೋ ಒಟ್ಟಿನಲ್ಲಿ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗೆ ಹೋಲಿಸಿದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದಲ್ಲಿ ಸ್ವಲ್ಪ ಹಿಂದಿದ್ದಾರೆ.












Click it and Unblock the Notifications