Breaking; ಮುರುಘಾ ಶ್ರೀಗಳಿಗೆ ಸೆ. 14ರ ತನಕ ನ್ಯಾಯಾಂಗ ಬಂಧನ
ಚಿತ್ರದುರ್ಗ, ಸೆಪ್ಟೆಂಬರ್ 05: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಶ್ರೀಗಳನ್ನು ಬಂಧಿಸಿದ್ದ ಪೊಲೀಸರು 4 ದಿನಗಳ ಕಾಲ ವಿಚಾರಣೆ ನಡೆಸಿದ್ದರು.
ಸೋಮವಾರ ಚಿತ್ರದುರ್ಗದ 2ನೇ ಹೆಚ್ಚುವರಿ ನ್ಯಾಯಾಲಯದ ಮುಂದೆ ಪೊಲೀಸರು ಶಿವಮೂರ್ತಿ ಮುರುಘಾ ಶರಣರನ್ನು ಹಾಜರುಪಡಿಸಿದ್ದರು. ಕೋರ್ಟ್ ಸ್ವಾಮೀಜಿಗಳನ್ನು ಸೆಪ್ಟೆಂಬರ್ 14ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತು.

ನ್ಯಾಯಾಲಯದಲ್ಲಿ ಶ್ರೀಗಳ ಪರ ವಕೀಲ ಉಮೇಶ್ ವಾದ ಮಂಡನೆ ಮಾಡಿದರು. ಪೊಲೀಸ್ ವಶದಲ್ಲಿ ಇರುವಾಗ ಜಾಮೀನು ಅರ್ಜಿ ಸಲ್ಲಿಸದಂತೆ ಕೋರ್ಟ್ ಈಗಾಗಲೇ ಸೂಚನೆ ನೀಡಿತ್ತು. ವಿಚಾರಣೆ ಬಳಿಕ ಕೋರ್ಟ್ 9 ದಿನಗಳ ಕಾಲ ಸ್ವಾಮೀಜಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮಠದ ಹಾಸ್ಟೆಲ್ನಲ್ಲಿದ್ದ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪವನ್ನು ಶಿವಮೂರ್ತಿ ಮುರುಘಾ ಶರಣರು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪೋಕ್ಸೋ ಕಾಯ್ದೆಯಡಿ ಶ್ರೀಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸೆಪ್ಟೆಂಬರ್ 1ರ ಗುರುವಾರ ತಡರಾತ್ರಿ ಶಿವಮೂರ್ತಿ ಮುರುಘಾ ಶರಣರನ್ನು ಬಂಧಿಸಲಾಗಿತ್ತು. ಬಳಿಕ ಶುಕ್ರವಾರ ಮುಂಜಾನೆ ನ್ಯಾಯಾಧೀಶರ ನಿವಾಸದಲ್ಲಿ ಅವರ ಮುಂದೆ ಹಾಜರುಪಡಿಸಲಾಗಿತ್ತು. ಆಗ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಚಿತ್ರದುರ್ಗದ ಜೈಲು ಸೇರಿದ್ದ ಶ್ರೀಗಳು ಶುಕ್ರವಾರ ಬೆಳಗ್ಗೆ ಎದೆ ನೋವು ಎಂದು ಹೇಳಿದ ಕಾರಣ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಂದು ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆಗ ಸೆಪ್ಟೆಂಬರ್ 5ರ ತನಕ ಕೋರ್ಟ್ ಶ್ರೀಗಳನ್ನು ಪೊಲೀಸರ ವಶಕ್ಕೆ ನೀಡಿತ್ತು.
ಪೋಕ್ಸೋ ಕಾಯ್ದೆಯಡಿ ಶ್ರೀಗಳ ವಿರುದ್ಧ ಎಫ್ಐಆರ್ ದಾಖಲಾದ 6 ದಿನಗಳ ಬಳಿಕ ಶ್ರೀಗಳನ್ನು ಬಂಧಿಸಲಾಗಿತ್ತು. ಸಂತ್ರಸ್ತ ಬಾಲಕಿಯರು ಮೈಸೂರಿನ ಒಡನಾಡಿ ಸಂಸ್ಥೆಯ ಮೂಲಕ ಮೈಸೂರಿನಲ್ಲಿ ಶ್ರೀಗಳ ವಿರುದ್ಧ ದೂರು ನೀಡಿದ್ದರು. ಬಳಿಕ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.
ಚಿತ್ರದುರ್ಗ ಪೊಲೀಸರು ಕಳೆದ ನಾಲ್ಕು ದಿನದಿಂದ ಶ್ರೀಗಳ ವಿಚಾರಣೆ ನಡೆಸಿದ್ದರು. ಬಾಲಕಿಯರು ಮಾಡಿದ ಆರೋಪಗಳ ಬಗ್ಗೆ ಶ್ರೀಗಳ ಹೇಳಿಕೆ ಪಡೆದಿದ್ದರು. ಭಾನುವಾರ ಮಠಕ್ಕೆ ಶ್ರೀಗಳನ್ನು ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದರು. ಬಳಿಕ ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಚಿತ್ರದುರ್ಗ ಜೈಲು ಬಳಿ ಬಿಗಿ ಭದ್ರತೆ; ಪೊಲೀಸರು ಶಿವಮೂರ್ತಿ ಮುರುಘಾ ಶರಣರನ್ನು ಚಿತ್ರದುರ್ಗದ ಜೈಲಿಗೆ ಕಳಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಜೈಲಿನ ಮುಂದೆ ಬ್ಯಾರಿಕೇಡ್ಗಳನ್ನು ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತಿದೆ.












Click it and Unblock the Notifications