IPL Betting: ಬೆಟ್ಟಿಂಗ್ ಹುಚ್ಚಿನಿಂದ ಒಂದು ಕೋಟಿ ಹಣ, ಪತ್ನಿಯನ್ನು ಕಳೆದುಕೊಂಡ ವ್ಯಕ್ತಿ
ಚಿತ್ರದುರ್ಗ, ಮಾರ್ಚ್. 26: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಆರಂಭವಾಗಿದ್ದು, ಕ್ರಿಕೆಟ್ ಪ್ರಿಯರು ಹಬ್ಬ ಆಚರತಿಸುತ್ತಿದ್ದಾರೆ. ಇದರ ನಡುವೆ ಬೆಟ್ಟಿಂಗ್ ಭೂತ ಕೂಡ ತನ್ನ ಆಟ ಆರಂಭಿಸಿದೆ. ಗಂಡನ ಬೆಟ್ಟಿಂಗ್ ಹುಚ್ಚಿಗೆ ಪತ್ನಿಯೊಬ್ಬರು ಜೀವವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ.
ಚಿತ್ರದುರ್ಗದಲ್ಲಿ ಇಂತಹ ದುರಂತ ಸಂಭವಿಸಿದೆ. ತನ್ನ ಪತಿ ದರ್ಶನ್ ಬಾಬು ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿಸಿಕೊಂಡಿದ್ದರಿಂದ ಮನೆಯಲ್ಲಿ ಹಣಕಾಸಿನ ತೊಂದರೆ ಕಾಣಿಸಿಕೊಂಡಿತ್ತು. ಸಾಲಗಾರರ ಕಿರುಕುಳದ ಕಾರಣಕ್ಕೆ 24 ವರ್ಷದ ಯುವತಿ ರಂಜಿತಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ದರ್ಶನ್ ಬಾಬು ಒಬ್ಬ ಎಂಜಿನಿಯರ್ ಆಗಿದ್ದು, ಕ್ರಿಕೆಟ್ ಪಂದ್ಯಗಳಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದರು. 2021 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಲ್ಲಿ ಬೆಟ್ಟಿಂಗ್ ಕಟ್ಟುತ್ತಲೇ ಇದ್ದರು. ಇದಕ್ಕಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ಅವರು, ಹಲವರ ಬಳಿ ಸಾಲ ಕೂಡ ಮಾಡಿಕೊಂಡಿದ್ದರು. ಗಂಡ ಸಾಲ ಪಡೆದ ಬಳಿಕ ಸಾಲಗಾರರ ನಿರಂತರ ಕಿರುಕುಳದಿಂದ ಬೇಸತ್ತ 24 ವರ್ಷದ ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಾರ್ಚ್ 18 ರಂದು ರಂಜಿತಾ ಅವರು ಚಿತ್ರದುರ್ಗದ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕುಟುಂಬದ ಪ್ರಕಾರ, ದರ್ಶನ್ ಬಾಬು 1 ಕೋಟಿಗೂ ಹೆಚ್ಚು ಸಾಲ ಮಾಡಿಕೊಂಡಿದ್ದಾರೆ. ಹೊಸದುರ್ಗದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಅವರು 2021 ರಿಂದ ಐಪಿಎಲ್ ಬೆಟ್ಟಿಂಗ್ ಜಾಲದಲ್ಲಿ ಸಿಲುಕಿದ್ದಾರೆ.
ದುಡಿದ ಹಣವನ್ನೆಲ್ಲಾ ಕಳೆದುಕೊಂಡ ಬಳಿಕ ಬೆಟ್ಟಿಂಗ್ ಕಟ್ಟಲು ದರ್ಶನ್ ಬಾಬು 1.5 ಕೋಟಿಗೂ ಅಧಿಕ ಸಾಲ ಮಾಡಿದ್ದರು ಎನ್ನಲಾಗಿದೆ. ಅದರಲ್ಲಿ 1 ಕೋಟಿ ಹಿಂದಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಇನ್ನೂ 84 ಲಕ್ಷ ರೂಪಾಯಿ ಸಾಲವನ್ನು ಬಾಕಿ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರಂಜಿತಾ 2020 ರಲ್ಲಿ ದರ್ಶನ್ ಬಾಬು ಅವರನ್ನು ವಿವಾಹವಾದರು. ದರ್ಶನ್ ಅವರಿಗೆ ಬೆಟ್ಟಿಂಗ್ ಹುಚ್ಚು ಇರುವ ಬಗ್ಗೆ 2021 ರಲ್ಲಿ ತಿಳಿದಿದೆ ಎಂದು ಆಕೆಯ ತಂದೆ ವೆಂಕಟೇಶ್ ಹೇಳಿಕೊಂಡಿದ್ದಾರೆ. ಲೇವಾದೇವಿಗಾರರ ನಿರಂತರ ಕಿರುಕುಳದಿಂದ ಮಗಳು ತೀವ್ರ ನೊಂದಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವೆಂಕಟೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಅಲ್ಲದೆ ಸಾಲ ನೀಡಿದ 13 ಮಂದಿಯ ಹೆಸರನ್ನು ಸೇರಿಸಿದ್ದಾರೆ. ಶೀಘ್ರ ಹಣ ಬರುತ್ತದೆ ಎಂದು ಭರವಸೆ ನೀಡಿ ಅಳಿಯನಿಗೆ ಬೆಟ್ಟಿಂಗ್ ಆಮಿಷ ಒಡ್ಡಲಾಗಿತ್ತು ಎಂದು ಅವರು ದೂರಿದ್ದಾರೆ. ಪೊಲೀಸರಿಗೆ ಮನೆಯಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದೆ. ಪತ್ರದಲ್ಲಿ ತಾವು ಎದುರಿಸುತ್ತಿರುವ ಕಿರುಕುಳವನ್ನು ವಿವರಿಸಿದ್ದಾರೆ. ಇನ್ನು, ದರ್ಶನ್ ಬಾಬು ಮತ್ತು ರಂಜಿತಾ ದಂಪತಿಗೆ ಎರಡು ವರ್ಷದ ಮಗನಿದ್ದಾನೆ.
ಆತ್ಮಹತ್ಯೆ ಮಾಡಿಕೊಳ್ಳುವುದು ಎಲ್ಲಾ ಸಮಸ್ಯೆಗೆ ಪರಿಹಾರವಲ್ಲ. ನಿಮಗೆ ಬೆಂಬಲ ಅಥವಾ ಸಹಾಯ ಬೇಕಾದರೆ, ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.












Click it and Unblock the Notifications