ಚಿತ್ರದುರ್ಗದಲ್ಲಿ 4 ವರ್ಷಗಳ ಕಾಲ ಗೃಹಬಂಧನಕ್ಕೊಳಗಾದ ತಿಪ್ಪೇಸ್ವಾಮಿ!
ಚಿತ್ರದುರ್ಗ, ಮೇ 15: ಇಲ್ಲೊಂದು ಕುಟುಂಬ ತಮ್ಮ ಮನೆಯ ಸದಸ್ಯನೊಬ್ಬನನ್ನು ಸತತ ನಾಲ್ಕು ವರ್ಷಗಳ ಕಾಲ ಮನೆಯೊಳಗೆ ದಿಗ್ಬಂಧನ ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದಿದೆ.
ದಿಗ್ಬಂಧನಕ್ಕೆ ಒಳಗಾಗಿರುವ, ಸಾವು ಬದುಕಿನ ನಡುವೆ ಒದ್ದಾಡುತ್ತಿರುವ ಆ ವ್ಯಕ್ತಿ ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ತಿಪ್ಪೇಸ್ವಾಮಿ. ಸುಮಾರು 56 ವರ್ಷದ ಈ ವ್ಯಕ್ತಿ ಈ ಹಿಂದೆ ಷಾಮಿಯಾನದ ಸಪ್ಲೆಯರ್ಸ್ ಅಂಗಡಿಯಲ್ಲಿ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈತನ ಕುಟುಂಬದ ಸದಸ್ಯರೆಲ್ಲರೂ ಸರ್ಕಾರಿ ಕೆಲಸದಲ್ಲಿದ್ದಾರೆ.
ವಿಪರ್ಯಾಸವೆಂದರೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾದ ತಿಪ್ಪೇಸ್ವಾಮಿಯನ್ನು ಆರೈಕೆ ಮಾಡದೆ, ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯವಹಿಸಿರುವ ಕುಟುಂಬದ ಸದಸ್ಯರು ಕಳೆದ ನಾಲ್ಕು ವರ್ಷಗಳಿಂದ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹೊರಬರದಂತೆ ದಿಗ್ಬಂಧನ ಹಾಕಿದ್ದಾರೆ.

ಸ್ಥಳಿಯರಿಂದ ಮಾಹಿತಿ ತಿಳಿದ ಮಹಿಳಾ ಸಾಂತ್ವಾನ ಕೇಂದ್ರ, ಆರೋಗ್ಯ ಇಲಾಖೆ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಧಾವಿಸಿ ತಿಪ್ಪೇಸ್ವಾಮಿಯನ್ನು ಬಂಧನದಿಂದ ಮುಕ್ತಗೊಳಿಸಿ ರಕ್ಷಿಸಿದ್ದಾರೆ
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಇನ್ನು ಸತತ ನಾಲ್ಕು ವರ್ಷಗಳಿಂದ ಬೆಳಕನ್ನೇ ನೋಡದೆ, ಕೊಠಡಿಯೊಳಗೆ ಕುಳಿತ ಹಿನ್ನಲೆಯಲ್ಲಿ ಕಾಲಿನ ಸ್ವಾಧೀನ ಕಳೆದುಕೊಂಡಿರುವ ತಿಪ್ಪೇಸ್ವಾಮಿ ಮಾನಸಿಕ ಖಿನ್ನತೆ ಹಾಗು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾನೆ. ಹೀಗಾಗಿ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ತಿಪ್ಪೇಸ್ವಾಮಿಯವರ ಸಂಬಂಧಿಗಳೊಂದಿಗೆ ಚರ್ಚಿಸಿ, ನಿರಾಶ್ರಿತರ ಕೇಂದ್ರಕ್ಕೆ ಬಿಡಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ನಾಲ್ಕು ವರ್ಷಗಳಿಂದ ದಿಗ್ಬಂಧನಕ್ಕೊಳಗಾಗಿದ್ದ ತಿಪ್ಪೇಸ್ವಾಮಿಗೆ ಬಂಧನದಿಂದ ಮುಕ್ತಿ ಸಿಕ್ಕಿದೆ. ಆದರೆ ಸರ್ಕಾರಿ ಉದ್ಯೋಗದಲ್ಲಿದ್ದೂ, ಪ್ರಜ್ಞಾವಂತರಾಗಿರುವ ತಿಪ್ಪೇಸ್ವಾಮಿಯವರ ಕುಟುಂಬಸ್ಥರು ಹೀಗೆ ಆತನನ್ನು ಅಮಾನವೀಯವಾಗಿ ಬಂಧಿಸಿದ್ದು, ದುರದೃಷ್ಟಕರ ಸಂಗತಿಯಾಗಿದೆ.












Click it and Unblock the Notifications