ವಿಧಾನ ಪರಿಷತ್ ಚುನಾವಣೆಗೆ ನಾನು ಸ್ಪರ್ಧಿಸಲ್ಲ; ಎಂಎಲ್ಸಿ ರಘು ಆಚಾರ್
ಚಿತ್ರದುರ್ಗ, ನವೆಂಬರ್ 9: "ರಾಜ್ಯದಲ್ಲಿ ಉಪ ಚುನಾವಣೆ ನಡೆದು ಫಲಿತಾಂಶ ಹೊರಬಂದ ನಂತರ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಇತ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ, ಸ್ಥಳೀಯರಲ್ಲಿ ಯಾರಿಗಾದರೂ ಪಕ್ಷ ಟಿಕೆಟ್ ನೀಡಲಿ ನಾನು ಅವರಿಗೆ ಬೆಂಬಲ ನೀಡುವುದಾಗಿ," ಕಾಂಗ್ರೆಸ್ ಹಾಲಿ ಎಂಎಲ್ಸಿ ರಘು ಆಚಾರ್ ತಿಳಿಸಿದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಈಗಾಗಲೇ ನಾನು ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತದಾರರನ್ನು ನನ್ನನ್ನು ಒಪ್ಪಿಕೊಂಡು ಗೆಲ್ಲಿಸುವ ಮೂಲಕ ವಿಧಾನ ಪರಿಷತ್ಗೆ ಹೋಗುವಂತೆ ಮಾಡಿದ್ದಾರೆ. ಅದರಂತೆ ಅವರಿಗೆ ನನ್ನ ಕೈಲಾದ ಮಟ್ಟಿಗೆ ಸಹಾಯವನ್ನು ಮಾಡಿದ್ದೇನೆ. ಇಷ್ಟು ಸಾಕು ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ," ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹೇಳಿದ್ದೇನೆ ಎಂದರು.
"ಎಂಎಲ್ಸಿ ಸ್ಥಾನ ಸಾಕು ಎನಿಸಿದ್ದು, ಮುಂದೆ ಏನಿದ್ದರೂ ರಾಜ್ಯಸಭಾ ಅಥವಾ ಲೋಕಸಭೆ ಚುನಾವಣೆಗೆ ಪಕ್ಷದ ವತಿಯಿಂದ ಟಿಕೆಟ್ ಕೇಳುವುದಾಗಿ ರಘು ಆಚಾರ್ ತಿಳಿಸಿದರು. ವಿಧಾನ ಪರಿಷತ್ಗೆ ಸ್ಥಳೀಯವಾಗಿ ಇರುವಂತಹ ಭೀಮಸಮುದ್ರದ ಮಂಜುನಾಥ್, ಮಾಜಿ ಸಚಿವ ಎಚ್. ಆಂಜನೇಯ ಹಾಗೂ ಹನುಮಲಿ ಷಣ್ಮುಖಪ್ಪರವರಿಗೆ ಟಿಕೆಟ್ ನೀಡಲಿ," ಎಂದು ಹೇಳಿದರು.

ನಾನು ವಿಧಾನ ಪರಿಷತ್ ಚುನಾವಣೆಯಲ್ಲಿ ಒಮ್ಮೆ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ, ಮತ್ತೊಮ್ಮೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಜಯ ಗಳಿಸಿದ್ದೆ. ಈಗ ಟಿಕೆಟ್ ಬೇಡ ಎಂದು ನಾನೇ ಹೇಳಿದ್ದೇನೆ. ಹಾಗಂತ ಹೇಳಿ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ರಾಜಕಾರಣ ಏನಿದ್ದರೂ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿಯೇ ನಡೆಯಲಿದೆ. ಇಲ್ಲಿ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ. ಮೈಸೂರು ಅಥವಾ ಮಂಡ್ಯ ಜಿಲ್ಲೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದಿಂದಲೂ ನನಗೆ ಆಫರ್ ಬಂದಿದೆ ಎಂದು ಎಂಎಲ್ಸಿ ರಘು ಆಚಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

25 ಸ್ಥಾನಗಳ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ
ಕರ್ನಾಟಕ ರಾಜ್ಯದ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಡಿ.10ರಂದು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದೇ ತಿಂಗಳ ಡಿ.14ರಂದು ಮತ ಎಣಿಕೆ ನಡೆಯಲಿದೆ.
* 25 ಪರಿಷತ್ ಸದಸ್ಯರ ಅಧಿಕಾರದ ಅವಧಿ ಮುಂದಿನ ಜನವರಿ 5ಕ್ಕೆ ಮುಕ್ತಾಯಗೊಳ್ಳಲಿದೆ.
* ಚುನಾವಣೆ ನವೆಂಬರ್ 16ಕ್ಕೆ ಅಧಿಸೂಚನೆ ಹೊರಡಿಸಲಾಗುವುದು.
* ನವೆಂಬರ್ 23ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ.
* ಡಿಸೆಂಬರ್ 10ರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ.
* ಡಿಸೆಂಬರ್ 14 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
* ಡಿಸೆಂಬರ್ 16ಕ್ಕೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಒಟ್ಟು 25 ವಿಧಾನ ಪರಿಷತ್ ಸದಸ್ಯರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಇದರಲ್ಲಿ ಕಾಂಗ್ರೆಸ್ 13, ಬಿಜೆಪಿ 6, ಪಕ್ಷೇತರ 1 (ಬಿಜೆಪಿ ಬೆಂಬಲಿತ) ಸ್ಥಾನಗಳಿವೆ.
ಬೀದರ್ 1, ಕಲಬುರಗಿ 1, ವಿಜಯಪುರ 2, ಬೆಳಗಾವಿ 2, ಉತ್ತರ ಕನ್ನಡ 1, ಧಾರವಾಡ 2, ರಾಯಚೂರು 1, ಬಳ್ಳಾರಿ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಚಿಕ್ಕಮಗಳೂರು 1, ಹಾಸನ 1, ತುಮಕೂರು 1, ಮಂಡ್ಯ 1, ಬೆಂಗಳೂರು 1, ಬೆಂಗಳೂರು ಗ್ರಾಮಾಂತರ 1, ಕೋಲಾರ 1, ಕೊಡಗು 1, ಮೈಸೂರು 2 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.












Click it and Unblock the Notifications