ಭಾರೀ ಮಳೆಯಿಂದ ಚಿತ್ರದುರ್ಗ ಜಿಲ್ಲೆಯ ಹಲವೆಡೆ ಮನೆಗಳು ಜಲಾವೃತ
ಚಿತ್ರದುರ್ಗ, ಆಗಸ್ಟ್, 21: ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಮತ್ತೆ ಚುರುಕು ಪಡೆದಿದೆ. ಹಾಗೆಯೇ ಚಿತ್ರದುರ್ಗ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರೆದಿದ್ದು, ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮತ್ತೊಂದು ಕಡೆ ಚಳ್ಳಕೆರೆ ನಗರದ ರಹೀಂ ನಗರದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಇತ್ತ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವಿನಲ್ಲಿ ಪ್ರಮಾಣ ಕಡಿಮೆಯಾಗಿದೆ. ಇಂದಿನ ವರದಿಯಲ್ಲಿ 693 ಕ್ಯೂಸೆಕ್ ಒಳಹರಿವು ಇದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 117.20 ಅಡಿ ತಲುಪಿದೆ.

ಮನೆಗಳಿಗೆ ನುಗ್ಗಿದ ನೀರು: ಸಂಜೆಯಿಂದ ಆರಂಭಗೊಂಡ ಮಳೆರಾಯ ಗುಡುಗು-ಮಿಂಚು ಸಹಿತ ಧಾರಕಾರ ಮಳೆ ಸುರಿಯಿತು. ಚಳ್ಳಕೆರೆ ನಗರದಲ್ಲಿ ರಹಿಂ ನಗರ ಜಲಾವೃತವಾಗಿದೆ. ಇದರಿಂದ ಜನ ಜೀವನ ಅಸ್ತವ್ಯಸ್ಥವಾಗಿದೆ. ಇನ್ನು ಮನೆಗಳಿಗೆ ನೀರು ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ನೀರು ಪಾಲಾಗಿವೆ ಎಂದು ತಿಳಿದುಬಂದಿದೆ.
50ಕ್ಕೂ ಹೆಚ್ಚು ಮನೆಗಳು ಮಳೆಯ ನೀರಿನಿಂದ ಜಲಾವೃತವಾಗಿದೆ. ಜೆಸಿಬಿ ಯಂತ್ರಗಳ ಮೂಲಕ ಚರಂಡಿಗೆ ಮಳೆ ನೀರು ಹರಿಸಲು ಪ್ರಯತ್ನ ಮಾಡಲಾಗಿದೆ. ಚಳ್ಳಕೆರೆ ತಾಲೂಕಿನ ಕೋಡಿಹಳ್ಳಿ ಸಮೀಪ ಮಳೆಯ ನೀರಿನ ರಭಸಕ್ಕೆ ಕಾಪೌಂಡ್ ಗೋಡೆ ಕೊಚ್ಚಿ ಹೋಗಿದೆ.
Petrol price: ಆಗಸ್ಟ್ 21 ರಂದು ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್ ಡಿಸೇಲ್ ಬೆಲೆ ತಿಳಿಯಿರಿ
ಅಲ್ಲದೆ ಮೊಳಕಾಲ್ಮೂರು, ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲ್ಲೂಕಿನಲ್ಲೂ ಹೆಚ್ಚು ಮಳೆಯಾಗಿದೆ. ಸಣ್ಣ ಪುಟ್ಟ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಒಟ್ಟಾರೆಯಾಗಿ ಬರದನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತ ಸಮುದಾಯದಲ್ಲಿ ಮಂದಹಾಸ ಮೂಡಿದಂತಾಗಿದೆ.
ತಾಲ್ಲೂಕುವಾರು ಮಳೆ ವಿವರ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮತ್ತೆ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಹಾಗೆಯೇ ಇದೀಗ ಚಿತ್ರದುರ್ಗ ಜಿಲ್ಲೆಯಲ್ಲೂ ಕೂಡ ಮಳೆರಾಯನ ಆರ್ಭಟ ಕಳೆದ ಮೂರ್ನಾಲ್ಕು ದಿನಗಗಳಿಂದ ಮುಂದುವರೆದಿದೆ. ಹಾಗಾದರೆ ಇಂದು (ಆಗಸ್ಟ್ 20) ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟು ಮಳೆಯಾಗಿದೆ ಎಂದು ಅಂಕಿಅಂಶಗಳ ಸಹಿತ ಮಾಹಿತಿ ಇಲ್ಲಿದೆ ಗಮನಿಸಿ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿರುವ ಸಣ್ಣಪುಟ್ಟ ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿವೆ. ಇದರಿಂದ ರೈತರ ಬೆಳೆಗಳು ಕಂಗೊಳಿಸುತ್ತಿವೆ. ಇತ್ತ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಒಳಹರಿವು ಮುಂದುವರೆದಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 117.10 ಅಡಿ ತಲುಪಿದೆ.
ಸೋಮವಾರ (ಆಗಸ್ಟ್ 20) ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ ಇಲ್ಲಿದ್ದು, ಚಳ್ಳಕೆರೆ ತಾಲ್ಲೂಕಿನಲ್ಲಿ 17.5 ಮಿ.ಮೀ, ಚಿತ್ರದುರ್ಗ ತಾಲ್ಲೂಕಿನಲ್ಲಿ 8.5, ಹಿರಿಯೂರು ತಾಲ್ಲೂಕು 14.4 ಮಿ.ಮೀ, ಹೊಳಲ್ಕೆರೆ ತಾಲ್ಲೂಕು 4.9 ಮಿ.ಮೀ, ಹೊಸದುರ್ಗ ತಾಲ್ಲೂಕಿನಲ್ಲಿ 13.6 ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 4.2 ಮಿ.ಮೀಟರ್ ಮಳೆಯಾಗಿದೆ.
ಹೋಬಳಿವಾರು ಮಳೆ ವಿರವ: ನಾಯಕನಹಟ್ಟಿ 10.5 ಮಿಲಿ ಮೀಟರ್, ಪರಶುರಾಂಪುರ 29.6 ಮಿಲಿ ಮೀಟರ್, ತಳಕು 15.7 ಮಿಲಿ ಮೀಟರ್ ಮಳೆಯಾಗಿದೆ. ಚಿತ್ರದುರ್ಗದಲ್ಲಿ 7.5 ಮಿಲಿ ಮೀಟರ್, ಭರಮಸಾಗರ 5.2 ಮಿಲಿ ಮೀಟರ್, ಹಿರೇಗುಂಟನೂರು 6.5 ಮಿಲಿ ಮೀಟರ್, ತುರುವನೂರು 15 ಮಿಲಿ ಮೀಟರ್ ಮಳೆಯಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ 12.3 ಮಿ.ಮೀ, ಐಮಂಗಲ 11.4 ಮಿ.ಮೀ, ಧರ್ಮಪುರ 19.7 ಮಿ.ಮೀ, ಜೆ.ಜೆ.ಹಳ್ಳಿ 14 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆಯಲ್ಲಿ 6.2 ಮಿ.ಮೀ, ಬಿ.ದುರ್ಗ 6.6 ಮಿ.ಮೀ, ರಾಮಗಿರಿ 4.4 ಮಿ.ಮೀ, ತಾಳ್ಯ 3.2 ಮಿ.ಮೀ ಮಳೆಯಾಗಿದೆ.
ಹೊಸದುರ್ಗದಲ್ಲಿ 9.7 ಮಿಲಿ ಮೀಟರ್, ಮಾಡದಕೆರೆ 9 ಮಿಲಿ ಮೀಟರ್, ಮತ್ತೋಡು 11.2 ಮಿಲಿ ಮೀಟರ್, ಶ್ರೀರಾಂಪುರ 26 ಮಿಲಿ ಮೀಟರ್ ಮಳೆಯಾಗಿದೆ. ಮೊಳಕಾಲ್ಮುರು ತಾಲ್ಲೂಕಿನ ಮೊಳಕಾಲ್ಮುರುನಲ್ಲಿ 3.1 ಮಿಲಿ ಮೀಟರ್ ಹಾಗೂ ದೇಮಸಮುದ್ರದಲ್ಲಿ 5.4 ಮಿಲಿ ಮೀಟರ್ ಮಳೆಯಾಗಿದೆ.
ಎಲ್ಲೆಲ್ಲಿ ಹಾನಿ?: ಸೋಮವಾರ (ಆಗಸ್ಟ್ 20) ಸುರಿದ ಮಳೆಗೆ 1 ಜೀವಹಾನಿ ಹಾಗೂ ಜಿಲ್ಲೆಯಾದ್ಯಂತ ಒಟ್ಟು 44 ಮನೆಗಳು ಭಾಗಶಃ ಹಾನಿ, 3 ಹೆಕ್ಟೇರ್ ತೋಟಗಾರಿಕೆ ಬೆಳೆ, 1.6 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 12 ಮನೆಗಳು ಭಾಗಶಃ ಹಾನಿ, ಚಳ್ಳಕೆರೆ ತಾಲ್ಲೂಕಿನಲ್ಲಿ 5 ಮನೆಗಳು ಭಾಗಶಃ ಹಾನಿ ಹಾಗೂ 3 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನಲ್ಲಿ 4 ಮನೆಗಳು ಭಾಗಶಃ ಹಾನಿ, ಒಂದು ಜೀವಹಾನಿಯಾಗಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿವೆ. ಹಿರಿಯೂರು ತಾಲ್ಲೂಕಿನಲ್ಲಿ 8 ಮನೆಗಳು ಭಾಗಶಃ ಹಾನಿಯಾಗಿದ್ದು, 1.61 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.












Click it and Unblock the Notifications